ಮೊಳಕಾಲ್ಮುರು: ಸಚಿವ ಬಿ. ಶ್ರೀರಾಮುಲು ಕ್ಷೇತ್ರದ ಶಾಸಕರಾಗಿ ಆಯ್ಕೆಯಾದ ನಂತರ ಅಭಿವೃದ್ಧಿ ಮತ್ತು ಮತದಾರ ರನ್ನು ನಿರ್ಲಕ್ಷ್ಯ ಮಾಡಿರುವುದನ್ನು ಮರೆಮಾಚಲು ಬಾಡೂಟ ತಂತ್ರಕ್ಕೆ ಮೊರೆ ಹೋಗಿದ್ದಾರೆ ಎಂದು ಕಾಂಗ್ರೆಸ್ ಮುಖಂಡ ಡಾ.ಬಿ. ಯೋಗೇಶ್ ಬಾಬು ಆರೋಪಿಸಿದ್ದಾರೆ.
‘ಮೀಸಲಾತಿ ಹೆಚ್ಚಳದ ವಿರಾಟ್ ಸಮಾವೇಶ ಪೂರ್ವಭಾವಿ ಸಭೆ ನೆಪದಲ್ಲಿ ಬಾಡೂಟ ಹಮ್ಮಿಕೊಂಡು ಅಮಿಷ ಒಡ್ಡಲು ಮುಂದಾಗಿದ್ದಾರೆ. ಸೋಲಿನ ಭಯದಿಂದ ಇಂತಹ ಕೆಳಮಟ್ಟದ ರಾಜಕೀಯಕ್ಕೆ ಇಳಿದಿದ್ದಾರೆ. ಸಭೆಗೆ ಬಂದ ಬಹುತೇಕರು ಬೀಳ್ಗೊಡುಗೆ ನೀಡಲು ಬಂದಿದ್ದರು ಎಂಬುದನ್ನು ಶ್ರೀರಾಮುಲು ಅರ್ಥ ಮಾಡಿಕೊಳ್ಳಬೇಕು’ ಎಂದು ಹೇಳಿಕೆಯಲ್ಲಿ ಟೀಕಿಸಿದ್ದಾರೆ.
‘ಮೊಳಕಾಲ್ಮುರು ಅತ್ಯಂತ ಹಿಂದುಳಿದ ಕ್ಷೇತ್ರ ಎಂದು ಗುರುತಿಸಿಕೊಂಡಿದ್ದರೂ ನೆರೆಯ ಬಳ್ಳಾರಿ ಕ್ಷೇತ್ರದ ಅಭಿವೃದ್ಧಿ ಬಗ್ಗೆ ಚಿಂತೆ ಮಾಡುತ್ತಾರೆ. ಇವರ ಕಾರ್ಯ ವೈಖರಿಯಿಂದಾಗಿ ಕ್ಷೇತ್ರ ಇನ್ನಷ್ಟು ಸಂಕಷ್ಟಕ್ಕೀಡಾಯಿತು. ಹಣದ ಹೊಳೆ ಹರಿಸಿದಲ್ಲಿ ಮತ್ತೆ ಗೆಲ್ಲುತ್ತೇನೆ ಎಂಬ ಭ್ರಮೆಯಲ್ಲಿ ಇಂತಹ ಕೃತ್ಯಗಳನ್ನು ಮಾಡುತ್ತಿದ್ದಾರೆ. ಮತದಾರರು ಇವುಗಳಿಗೆ ಕಿವಿಗೊಡಬಾರದು’ ಎಂದು ಅವರು ಹೇಳಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.