ಚಿತ್ರದುರ್ಗ: ಕೇಂದ್ರ ಸರ್ಕಾರ ಮದ್ಯಪಾನ ನಿಷೇಧ ಹಿಂಪಡೆದುಕೊಂಡಿದ್ದನ್ನು ಜಿಲ್ಲೆಯ ಹೊಸದುರ್ಗ ತಾಲ್ಲೂಕಿನ ಸಾಣೇಹಳ್ಳಿಯ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ತೀವ್ರವಾಗಿ ಖಂಡಿಸಿದ್ದಾರೆ.
‘ಸರ್ಕಾರ ಮದ್ಯಪಾನಕ್ಕೆ ಅನುಮತಿ ನೀಡಿರುವುದು ನಿಜಕ್ಕೂ ನಮಗೆ ಆಘಾತವಾಗಿದೆ. ಜನರ ಆರೋಗ್ಯಕ್ಕಿಂತ ಆದಾಯವೇ ಮುಖ್ಯವೆಂದು ಭಾವಿಸುವ ನೇತಾರರಿಂದ ಖಂಡಿತ ದೇಶದ ಪ್ರಗತಿ ಸಾಧ್ಯವಿಲ್ಲ’ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
‘ಕೊರೊನಾ ಸಂಬಂಧ ಮದ್ಯಪಾನ ನಿಷೇಧಿಸಿದ್ದರಿಂದ ಬಹುತೇಕ ಮದ್ಯವ್ಯಸನಿಗಳು ಆ ದುಶ್ಚಟದಿಂದ ದೂರವಾಗಲು ನಿರ್ಧರಿಸಿದ್ದರು. ಸರ್ಕಾರದ ತೀರ್ಮಾನ ನಿದ್ದೆ ಬಂದವರಿಗೆ ನಿದ್ದೆ ಮಾತ್ರೆ ಕೊಟ್ಟಂತಾಗಿದೆ. ಕುಡಿದ ಅಮಲಿನಲ್ಲಿ ಅಂತರ ಕಾಯ್ದುಕೊಳ್ಳಲು ಸಾಧ್ಯವೇ’ ಎಂದು ಪ್ರಶ್ನಿಸಿದ್ದಾರೆ.
‘ಈ ನಿರ್ಧಾರದಿಂದ ಮತ್ತಿನ್ನೇನು ಅನಾಹುತಕ್ಕೆ ಕಾರಣವಾಗುವುದೋ? ಕುಡಿತದಿಂದ ಹಣ, ಆರೋಗ್ಯ, ನೆಮ್ಮದಿ ನೆಲಕಚ್ಚುವುದಲ್ಲದೆ ಕಳವು, ಸುಲಿಗೆ, ಅಪಘಾತ ಇತರ ಅನಾಹುತಗಳು ಸಾಲು ಸಾಲಾಗಿ ನಡೆಯಬಹುದು. ಈ ವಿಚಾರದಲ್ಲಿ ರಾಜ್ಯ ಸರ್ಕಾರಕ್ಕೆ ಇನ್ನೂ ಸ್ವಾತಂತ್ರ್ಯವಿದೆ. ಕೊರೊನಾ ಸೋಂಕು ಮರೆಯಾಗುವವರೆಗೂ ಸಂಪೂರ್ಣ ಮದ್ಯ ನಿಷೇಧ ಮಾಡಿ ನಂತರ ಸರ್ವೆ ಮೂಲಕ ಮುಂದಿನ ಕ್ರಮ ಜರುಗಿಸಬೇಕು’ ಎಂದು ಅವರು ಮನವಿ ಮಾಡಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.