ADVERTISEMENT

ಮೊಳಕಾಲ್ಮುರು ಬಳ್ಳಾರಿ ಸೇರ್ಪಡೆಗೆ ವಿರೋಧ

ಸೌಲಭ್ಯ ಹೋರಾಟಕ್ಕೆ ಕೈ ಜೋಡಿಸುತ್ತೇವೆ: ಕಾಂಗ್ರೆಸ್ ಮುಖಂಡರ ಹೇಳಿಕೆ

​ಪ್ರಜಾವಾಣಿ ವಾರ್ತೆ
Published 23 ನವೆಂಬರ್ 2020, 4:35 IST
Last Updated 23 ನವೆಂಬರ್ 2020, 4:35 IST
ಮೊಳಕಾಲ್ಮುರು ತಾಲ್ಲೂಕಿನ ಹಾನಗಲ್‌ನಲ್ಲಿ ಭಾನುವಾರ ಕಾಂಗ್ರೆಸ್ ಮುಖಂಡರು ಸಭೆ ನಡೆಸಿದರು
ಮೊಳಕಾಲ್ಮುರು ತಾಲ್ಲೂಕಿನ ಹಾನಗಲ್‌ನಲ್ಲಿ ಭಾನುವಾರ ಕಾಂಗ್ರೆಸ್ ಮುಖಂಡರು ಸಭೆ ನಡೆಸಿದರು   

ಮೊಳಕಾಲ್ಮುರು: ‘ಸಾವಿರಾರು ವರ್ಷಗಳ ವಿಶಿಷ್ಟ ಐತಿಹ್ಯ ಹೊಂದಿರುವ ಮೊಳಕಾಲ್ಮುರು ತಾಲ್ಲೂಕನ್ನು ಯಾವುದೇ ಕಾರಣಕ್ಕೂ ಬಳ್ಳಾರಿ ಜಿಲ್ಲೆಗೆ ಸೇರ್ಪಡೆ ಮಾಡಬಾರದು. ಈ ಪ್ರಸ್ತಾವಕ್ಕೆ ನಮ್ಮ ಪ್ರಬಲ ವಿರೋಧವಿದೆ’ ಎಂದು ಜಿಲ್ಲಾ ಪಂಚಾಯಿತಿ ಸದಸ್ಯ ಬಿ.ಯೋಗೇಶ್ ಬಾಬು ಹೇಳಿದರು.

ತಾಲ್ಲೂಕಿನ ಹಾನಗಲ್‌ನಲ್ಲಿ ಭಾನುವಾರ ನಡೆದ ಕಾಂಗ್ರೆಸ್ ಮುಖಂಡರ ಸಭೆ ನಂತರ ಅವರು ಸುದ್ದಿಗಾರರ ಜತೆ ಮಾತನಾಡಿದರು.

ಅಶೋಕನ ಶಾಸನ, ಬ್ರಹ್ಮಗಿರಿ ಬೆಟ್ಟ, ನುಂಕಿಮಲೆ ಸಿದ್ದೇಶ್ವರ, ನಾಯಕನಹಟ್ಟಿ ತಿಪ್ಪೇರುದ್ರಸ್ವಾಮಿ, ಮೋಹಕ ಕೈಮಗ್ಗ ರೇಷ್ಮೆಸೀರೆಗೆ ಮೊಳಕಾಲ್ಮುರು ರಾಷ್ಟ್ರಮಟ್ಟದಲ್ಲಿ ಖ್ಯಾತಿ ಪಡೆದಿದೆ. ಕ್ಷೇತ್ರದ ತಳಕು ತರಾಸು ಜನ್ಮಸ್ಥಳವಾಗಿದ್ದು, ಸಾಹಿತ್ಯಿಕವಾಗಿ ಖ್ಯಾತಿ ಹೊಂದಿದೆ. ಗಂಡು ಮೆಟ್ಟಿದ ನಾಡು ಎಂದು ಖ್ಯಾತಿ ಹೊಂದಿರುವ ಚಿತ್ರದುರ್ಗ ಪಾಳೆಗಾರರು, ಮದಕರಿ ನಾಯಕ, ಒನಕೆ ಓಬವ್ವನ ಐತಿಹ್ಯ ಹೊಂದುವ ಮೂಲಕ ಸಾಂಸ್ಕೃತಿಕ ಇತಿಹಾಸ ಮೆರೆದಿದೆ ಎಂದು ಹೇಳಿದರು.

ADVERTISEMENT

‘ಮೊಳಕಾಲ್ಮುರು ಅಭಿವೃದ್ಧಿ ವಿಚಾರದಲ್ಲಿ ಹಿಂದುಳಿದಿದೆ ನಿಜ. ಇದಕ್ಕೆ ವಿವಿಧ ಕಾರಣಗಳಿವೆ. ಕಲ್ಯಾಣ ಕರ್ನಾಟಕಕ್ಕೆ ನೀಡಿರುವ 371 ಕಲಂ ಸೌಲಭ್ಯ ತಾಲ್ಲೂಕನ್ನು ಅಭಿವೃದ್ಧಿಪಡಿಸಲು ಹೆಚ್ಚು ಸೂಕ್ತವಾಗಿದೆ. ಆದ್ದರಿಂದ ಸರ್ಕಾರ ನಮ್ಮ ತಾಲ್ಲೂಕಿಗೂ ಸೌಲಭ್ಯ ವಿಸ್ತರಣೆ ಮಾಡಲು, ಜತೆಗೆ ಡಾ. ನಂಜುಂಡಪ್ಪ ವರದಿ ಅನ್ವಯ ವಿಶೇಷ ಅನುದಾನಕ್ಕೆ ಕ್ರಮ ಕೈಗೊಳ್ಳಲಿ. ಇದಕ್ಕೆ ಹೋರಾಟ ನಡೆಸಿ ಒತ್ತಡ ತರಲು ನಾವೆಲ್ಲರೂ ಸಹಕಾರ ನೀಡುತ್ತೇವೆ. ಆದರೆ, ಬಳ್ಳಾರಿ ಜಿಲ್ಲೆಗೆ ಮೊಳಕಾಲ್ಮುರು ಸೇರ್ಪಡೆ ಮಾಡಲು ಮಾತ್ರ ಉಗ್ರ ವಿರೋಧವಿದೆ’ ಎಂದರು.

ಈ ಬಗ್ಗೆ ಕೆಲ ರಾಜಕಾರಣಿಗಳು ನೀಡಿರುವ ಹೇಳಿಕೆಯಿಂದಾಗಿ ಜನರಲ್ಲಿ ಗೊಂದಲ ಉಂಟಾಗಿದೆ. ಇದನ್ನು ರಾಜಕೀಯಕ್ಕೆ ಬಳಕೆ ಮಾಡಿಕೊಳ್ಳುವುದನ್ನು ಕೈಬಿಡಬೇಕು. ವೈಶಿಷ್ಟ್ಯ ಹೊಂದಿರುವ ಚಿತ್ರದುರ್ಗದಲ್ಲಿ ಮೊಳಕಾಲ್ಮುರು ಉಳಿಸಬೇಕು ಎಂದು ಒತ್ತಾಯಿಸಿದರು.

ಪಕ್ಷದ ಅಬ್ದುಲ್ಲಾ, ಶಿವಲಿಂಗಪ್ಪ, ಚಾಂದ್ ಪಾಷಾ, ನಾಗಸಮುದ್ರ ನಜೀರ್, ಭಕ್ತಪ್ರಹ್ಲಾದ್, ಡಾ. ದಾದಾಪೀರ್, ಕೋನಸಾಗರ ಜಗದೀಶ್, ಎಸ್.ಎಫ್.ಸಮೀವುಲ್ಲಾ, ನಾಗೇಶ್, ಬಾಲಚೌಡಪ್ಪ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.