ಚಿತ್ರದುರ್ಗ: ಕರ್ತವ್ಯಲೋಪದ ಆರೋಪದ ಮೇಲೆ ಚಳ್ಳಕೆರೆ ತಾಲ್ಲೂಕಿನ ದೇವರೆಡ್ಡಿಹಳ್ಳಿ ಗ್ರಾಮ ಪಂಚಾಯಿತಿ ಪಿಡಿಒ ವೇದವ್ಯಾಸಲು, ಹೊಳಲ್ಕೆರೆ ತಾಲ್ಲೂಕಿನ ಉಪ್ಪರಿಗೇನಹಳ್ಳಿ ಗ್ರಾಮ ಪಂಚಾಯಿತಿ ಪಿಡಿಒ ಜಿ.ಎಂ.ಕರಿಯಪ್ಪ ಅವರನ್ನು ಅಮಾನತುಗೊಳಿಸಿ ಜಿಲ್ಲಾ ಪಂಚಾಯಿತಿ ಸಿಇಒ ಎಸ್.ಜೆ.ಸೋಮಶೇಖರ್ ಆದೇಶಿಸಿದ್ದಾರೆ.
ಜಿಲ್ಲಾ ಪಂಚಾಯಿತಿಯಿಂದ ನಿಯೋಜನೆಗೊಂಡ ಲೆಕ್ಕ ತನಿಖಾ ತಂಡಕ್ಕೆ ದಾಖಲೆಗಳನ್ನು ಒದಗಿಸುವಂತೆ ಸೂಚಿಸಲಾಗಿದ್ದರೂ, ದಾಖಲೆಗಳನ್ನು ಹಾಜರುಪಡಿಸದೇ ಕರ್ತವ್ಯ ಲೋಪವೆಸಗಿದ ಆರೋಪವನ್ನು ದೇವರೆಡ್ಡಿಹಳ್ಳಿ ಗ್ರಾಮ ಪಂಚಾಯಿತಿ ಪಿಡಿಒ ವೇದವ್ಯಾಸಲು ಎದುರಿಸುತ್ತಿದ್ದರು. 2023-24– 2024-25ನೇ ಸಾಲಿನವರೆಗಿನ 15ನೇ ಹಣಕಾಸು, ವರ್ಗ-1 ಇ-ಸ್ವತ್ತು ನರೇಗಾ ಅವ್ಯವಹಾರದ ಕುರಿತು ವಿಶೇಷ ಲೆಕ್ಕ ತನಿಖೆಗೆ ನಿಯೋಜಿಸಿದ್ದು, ಲೆಕ್ಕ ತನಿಖೆಗೆ ದಾಖಲೆಗಳನ್ನು ಹಾಜರುಪಡಿಸಲು ಸೂಚಿಸಲಾಗಿದ್ದರೂ ₹ 2.31 ಕೋಟಿ ಅನುದಾನಕ್ಕೆ ಸಂಬಂಧಿಸಿದಂತೆ ಯಾವುದೇ ದಾಖಲೆಗಳನ್ನು ಒದಗಿಸಿರಲಿಲ್ಲ.
15ನೇ ಹಣಕಾಸು ಯೋಜನೆಯಲ್ಲಿ ₹ 84.40 ಲಕ್ಷಕ್ಕೆ ವೋಚರ್ ಮತ್ತು ಲೆಕ್ಕ ಪತ್ರಗಳನ್ನು ಪರಿಶೀಲಿಸಿದಾಗ ಟೆಂಡರ್ ಕರೆಯದೇ ₹1 ಲಕ್ಷಕ್ಕಿಂತ ಹೆಚ್ಚು ಮೊತ್ತದ ಖರೀದಿಗಳಿಗೆ ವೆಚ್ಚ ಭರಿಸಿದ್ದು, ನಿಯಮಾನುಸಾರ ಕ್ರಮ ಕೈಗೊಳ್ಳದೇ ಪಾವತಿ ಮಾಡಿರುವುದು ಕಂಡುಬಂದಿದೆ.
ಉಪ್ಪರಿಗೇನಹಳ್ಳಿ ಪಿಡಿಒ ಜಿ.ಎಂ. ಕರಿಯಪ್ಪ ನಿಯಮಬಾಹಿರವಾಗಿ ಕ್ರಿಯಾ ಯೋಜನೆ ಮಂಜೂರಾತಿ, ಅಕ್ರಮವಾಗಿ ಇ-ಸ್ವತ್ತು ವಿತರಣೆ, ಹಣದ ದುರುಪಯೋಗ ಆರೋಪ ಎದುರಿಸುತ್ತಿದ್ದರು. ಗ್ರಾಮ ಪಂಚಾಯಿತಿ ಸಭೆಯಲ್ಲಿ ಚರ್ಚಿಸದೆ ನಿಯಮಬಾಹಿರವಾಗಿ ವಿವಿಧ ಯೋಜನೆಗಳಡಿ ಕ್ರಿಯಾ ಯೋಜನೆಗಳನ್ನು ತಯಾರಿಸಿ ಅನುದಾನವನ್ನು ದುರುಪಯೋಗ ಪಡಿಸಿಕೊಂಡಿದ್ದರು.
15ನೇ ಹಣಕಾಸು ಆಯೋಗ ಕ್ರಿಯಾ ಯೋಜನೆಯ ಅಂದಾಜು ಪಟ್ಟಿ, ಎಂ.ಬಿ. ರೆಕಾರ್ಡ್ ಮೇಲಧಿಕಾರಿಗಳ ಸಹಿ ಇಲ್ಲದೆ ಪಟ್ಟಿಗೆ ಅನುಮೋದನೆ ನೀಡಿ, ಅಕ್ರಮವಾಗಿ ಹಣ ಪಾವತಿ ಮಾಡಿದ್ದರು. ಈ ಲೆಕ್ಕಾಧಿಕಾರಿಗಳು ತನಿಖೆ ನಡೆಸಿ ಕರ್ತವ್ಯಲೋಪದ ಆಧಾರದ ಮೇಲೆ ಶಿಸ್ತು ಕ್ರಮಕ್ಕೆ ಶಿಫಾರಸು ಮಾಡಿರುತ್ತಾರೆ. ಇದರನ್ವಯ ಜಿಲ್ಲಾ ಪಂಚಾಯಿತಿ ಸಿಇಒ ಎಸ್.ಜೆ. ಸೋಮಶೇಖರ್ ಅವರು, ಪಿಡಿಒ ಜಿ.ಎಂ.ಕರಿಯಪ್ಪ ವಿರುದ್ಧ ಇಲಾಖೆ ವಿಚಾರಣೆ ಕಾಯ್ದಿರಿಸಿ ಅನುಮಾನತು ಮಾಡಿ ಆದೇಶಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.