ಹಿರಿಯೂರು: ಪೌರಾಡಳಿತ ನಿರ್ದೇಶನಾಲಯದ ನಿರ್ದೇಶಕರ ಪತ್ರದ ಪ್ರಕಾರ ನಗರದಲ್ಲಿ ಪರಿಸರ ಹಾಳು ಮಾಡುವ ಕೃತ್ಯಗಳಿಗೆ ಕೆಳಕಂಡಂತೆ ದಂಡ ವಿಧಿಸಲಾಗುವುದು ಎಂದು ನಗರಸಭೆ ಪೌರಾಯುಕ್ತ ಮಹಂತೇಶ್ ನೀಡಿರುವ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಸಾರ್ವಜನಿಕ ಸ್ಥಳಗಳಲ್ಲಿ ಕಸ ಚೆಲ್ಲುವುದು, ಮಲ–ಮೂತ್ರ ವಿಸರ್ಜನೆ ಮಾಡುವುದು, ಪ್ರಾಣಿ–ಪಕ್ಷಿಗಳಿಗೆ ಆಹಾರ ನೀಡುವುದು, ತ್ಯಾಜ್ಯವನ್ನು ಸುಡುವುದು, ತಮ್ಮ ಮನೆಯ ಆವರಣ–ಓಣಿಗಳನ್ನು ಸ್ವಚ್ಛವಾಗಿ ಇಡದಿರುವುದು, ಅಂಗಡಿಕಾರರು, ವಾಹನ ದುರಸ್ತಿದಾರರು ಮಣ್ಣು ಮತ್ತು ಎಣ್ಣೆ ಮಿಶ್ರಿತ ನೀರನ್ನು ರಸ್ತೆ ಅಥವಾ ಚರಂಡಿಗೆ ಸುರಿಯುವುದು, ಸಾರ್ವಜನಿಕ ಸ್ಥಳದಲ್ಲಿ ಹಣ್ಣು–ತರಕಾರಿ ಮಾರುವುದು ಮತ್ತು ತ್ಯಾಜ್ಯವನ್ನು ಎಲ್ಲೆಂದರಲ್ಲಿ ಬಿಸಾಡಿದರೆ ₹ 250, ದಂಡ ವಿಧಿಸಲಾಗುವುದು ಎಂದು ಎಚ್ಚರಿಸಿದ್ದಾರೆ.
ಸಾರ್ವಜನಿಕ ಸ್ಥಳಗಳಲ್ಲಿ ಉಗುಳುವುದು, ಸ್ನಾನ ಮಾಡಿದಲ್ಲಿ ₹ 150, ದಂಡ, ಮೀನು, ಮಾಂಸ, ಕೋಳಿ ಮಾಂಸದ ತ್ಯಾಜ್ಯವನ್ನು ಪ್ರತ್ಯೇಕಿಸದೆ ವಿತರಣೆ ಮಾಡುವುದು, ನದಿಗೆ ಬಿಸಾಡುವುದು ಮಾಡಿದಲ್ಲಿ ₹ 350, ಅಂಗಡಿಕಾರರು ಕಸದ ಬಿನ್ ಗಳನ್ನು ಉಪಯೋಗಿಸದಿದ್ದಲ್ಲಿ ₹ 350, ಸಾಕು ಪ್ರಾಣಿಗಳು ರಸ್ತೆಯ ಮೇಲೆ ಮಲ ವಿಸರ್ಜನೆಗೆ ಅವಕಾಶ ಮಾಡಿಕೊಟ್ಟಲ್ಲಿ ₹ 500, ಸಭೆ–ಸಮಾರಂಭ ನಡೆದ 4 ಗಂಟೆಯ ಒಳಗೆ ಆ ಪ್ರದೇಶವನ್ನು ಸ್ವಚ್ಛಗೊಳಿಸದೇ ಹೋದಲ್ಲಿ ₹ 1000, ನಿಷೇಧಿತ ಪ್ಲಾಸ್ಟಿಕ್ ಸಾಮಗ್ರಿಗಳನ್ನು ದಾಸ್ತಾನು, ಮಾರಾಟ ಮಾಡಿದಲ್ಲಿ ₹ 25,000 ದಂಡ ವಿಧಿಸಲಾಗುವುದು ಎಂದು ಮಹಂತೇಶ್ ಎಚ್ಚರಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.