ಚಿತ್ರದುರ್ಗದ ಕಲ್ಲಿನ ಕೋಟೆ ಆವರಣದ ಗಾಳಿಗೋಪುರದ ಕಣ್ಮನ ಸೆಳೆಯುತ್ತಿರುವುದು
ಪ್ರಜಾವಾಣಿ ಚಿತ್ರ: ಚಂದ್ರಪ್ಪ ವಿ
ಚಿತ್ರದುರ್ಗ: ಆಕಾಶವಾಣಿಯ ‘ಮನದ ಮಾತು’ 124ನೇ ಸರಣಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ನಗರದ ಐತಿಹಾಸಿಕ ಕಲ್ಲಿನಕೋಟೆ ಬಗ್ಗೆ ಕುತೂಹಲ ವ್ಯಕ್ತಪಡಿಸಿದ್ದಾರೆ. ಜುಲೈ 27ರಂದು ಪ್ರಸಾರವಾದ ಕಾರ್ಯಕ್ರಮದಲ್ಲಿ ದೇಶದ ಸ್ಮಾರಕಗಳನ್ನು ಕೊಂಡಾಡಿದ್ದಾರೆ.
ಯುನೆಸ್ಕೊ ವಿಶ್ವ ಪಾರಂಪರಿಕ ತಾಣಗಳನ್ನಾಗಿ ಗುರುತಿಸಿರುವ ಸ್ಮಾರಕಗಳ ಬಗ್ಗೆ ಮಾತನಾಡಿರುವ ಅವರು ಕಲಬುರಗಿ ಹಾಗೂ ಚಿತ್ರದುರ್ಗದ ಕಲ್ಲಿನ ಕೋಟೆಗಳ ಬಗ್ಗೆಯೂ ಪ್ರಸ್ತಾಪ ಮಾಡಿದ್ದಾರೆ.
‘12 ಮರಾಠಾ ಕೋಟೆಗಳನ್ನು ಯುನೆಸ್ಕೊ ವಿಶ್ವ ಪಾರಂಪರಿಕ ತಾಣಗಳನ್ನಾಗಿ ಗುರುತಿಸಿರುವುದು ದೇಶವೇ ಹೆಮ್ಮೆ ಪಡುವಂತಹ ಸುದ್ದಿಯಾಗಿದೆ. ಜೊತೆಗೆ ಕರ್ನಾಟಕದ ಕಲಬುರಗಿ ಕೋಟೆ ಅತ್ಯಂತ ಸುಂದರವಾಗಿದ್ದು ಮನ ಸೆಳೆಯುತ್ತದೆ’ ಎಂದಿದ್ದಾರೆ.
ನಗರದ ಕಲ್ಲಿನಕೋಟೆಯ ಬಗ್ಗೆ ಕುತೂಹಲ ವ್ಯಕ್ತಪಡಿಸಿರುವ ಅವರು ‘ಚಿತ್ರದುರ್ಗದ ಕಲ್ಲಿನ ಕೋಟೆ ಅತ್ಯಂತ ವಿಶಾಲವಾಗಿದ್ದು, ಇದನ್ನು ಹೇಗೆ ನಿರ್ಮಿಸಲಾಯಿತು ಎಂಬ ಬಗ್ಗೆ ಕುತೂಹಲ ಮೂಡುತ್ತದೆ’ ಎಂದಿದ್ದಾರೆ. ಜೊತೆಗೆ ಮಂಗಳೂರಿನ ತ್ಯಾಜ್ಯ ನಿರ್ವಹಣಾ ಕ್ರಮದ ಬಗ್ಗೆಯೂ ಪ್ರಧಾನಿ ಮೋದಿ ಶ್ಲಾಘಿಸಿದ್ದಾರೆ.
‘ವಿಶ್ವ ವಿಖ್ಯಾತ ಏಳು ಸುತ್ತಿನ ಕೋಟೆಯ ಬಗ್ಗೆ ಪ್ರಧಾನಿ ಪ್ರಸ್ತಾಪ ಮಾಡಿರುವುದು ಕನ್ನಡಿಗರ ಪಾಲಿಗೆ ಹೆಮ್ಮೆ ತರುವ ವಿಷಯ. ದುರ್ಗದ ಕೋಟೆಯ ವೈಶಾಲ್ಯತೆಯನ್ನು ಸಂರಕ್ಷಿಸುವ ನಿಟ್ಟಿನಲ್ಲಿ ಭಾರತೀಯ ಪುರಾತತ್ವ ಸರ್ವೇಕ್ಷಣಾ (ಎಎಸ್ಐ) ಸಿಬ್ಬಂದಿಯ ಜವಾಬ್ದಾರಿ ಮತ್ತಷ್ಟು ಹೆಚ್ಚಾಗಿದೆ. ಯುನೆಸ್ಕೊದಿಂದ ವಿಶ್ವ ಪಾರಂಪರಿಕ ತಾಣವನ್ನಾಗಿ ಗುರುತಿಸಲು ಕ್ರಮ ವಹಿಸಬೇಕಾಗಿದೆ’ ಎಂದು ಹಿರಿಯ ಸಂಶೋಧಕ ಲಕ್ಷ್ಮಣ ತೆಲಗಾವಿ ‘ಪ್ರಜಾವಾಣಿ’ಗೆ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.