ADVERTISEMENT

ತುರ್ತು ಸಹಾಯಕ್ಕೆ ‘112’ ಸಜ್ಜು

ಜಿಲ್ಲೆಯಾದ್ಯಂತ 11 ವಾಹನಗಳ ಸೇವೆ ಆರಂಭ: ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಿ.ರಾಧಿಕಾ

​ಪ್ರಜಾವಾಣಿ ವಾರ್ತೆ
Published 27 ಜನವರಿ 2021, 15:58 IST
Last Updated 27 ಜನವರಿ 2021, 15:58 IST
ತುರ್ತು ಸೇವೆಗಾಗಿ ಸರ್ಕಾರ ನೀಡಿರುವ 112 ವಾಹನಗಳು ಚಿತ್ರದುರ್ಗದ ಪ್ರಮುಖ ರಸ್ತೆಗಳಲ್ಲಿ ಬುಧವಾರ ಸಂಚರಿಸಿದವು
ತುರ್ತು ಸೇವೆಗಾಗಿ ಸರ್ಕಾರ ನೀಡಿರುವ 112 ವಾಹನಗಳು ಚಿತ್ರದುರ್ಗದ ಪ್ರಮುಖ ರಸ್ತೆಗಳಲ್ಲಿ ಬುಧವಾರ ಸಂಚರಿಸಿದವು   

ಚಿತ್ರದುರ್ಗ: ತುರ್ತು ಸಂದರ್ಭದಲ್ಲಿ ಸಾರ್ವಜನಿಕರ ಸಮಸ್ಯೆಗೆ ಸ್ಪಂದಿಸುವ ಉದ್ದೇಶದಿಂದ ‘ತುರ್ತು ಕರೆ ಸಂಖ್ಯೆ 112’ ಸಹಾಯವಾಣಿ ಆರಂಭಿಸಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಿ.ರಾಧಿಕಾ ತಿಳಿಸಿದರು.

ಜಿಲ್ಲಾ ಪೊಲೀಸ್ ಕವಾಯತು ಮೈದಾನದಲ್ಲಿ ತುರ್ತು ಸೇವೆಗಾಗಿ ಸರ್ಕಾರ ನೀಡಿರುವ ‘112’ ಸೇವೆಯ ವಾಹನಗಳಿಗೆ ಬುಧವಾರ ಚಾಲನೆ ನೀಡಿ ಅವರು ಮಾತನಾಡಿದರು.

‘ಆರಂಭಿಕ ಹಂತದಲ್ಲಿಯೇ ಸಮಸ್ಯೆ ಬಗೆಹರಿಸಿ, ಅಪರಾಧ ತಡೆಗಟ್ಟುವ ಉದ್ದೇಶ ಹೊಂದಲಾಗಿದೆ. ಒಂದು ವಾಹನದಲ್ಲಿ ಚಾಲಕ ಸೇರಿ ಇಬ್ಬರು ಪೊಲೀಸ್ ಸಿಬ್ಬಂದಿ ಇರಲಿದ್ದು, ಎಲ್ಲ ಕರೆಗಳನ್ನು ಸ್ವೀಕರಿಸಿ ಸಮಸ್ಯೆ ಬಗೆಹರಿಸುವರು. ಅಪಘಾತ, ಕಳ್ಳತನ, ಬೆಂಕಿ ಅವಘಡಗಳಂತ ತುರ್ತು ಸಂದರ್ಭದಲ್ಲಿ 112ಕ್ಕೆ ಕರೆ ಮಾಡಿದರೆ ಕ್ಷಣ ಮಾತ್ರದಲ್ಲಿ ನಿಮ್ಮ ಬಳಿ ವಾಹನ ಬರಲಿದೆ’ ಎಂದು ತಿಳಿಸಿದರು.

ADVERTISEMENT

‘ನಗರ ಪ್ರದೇಶದಲ್ಲಿ 15 ನಿಮಿಷದೊಳಗೆ ಹಾಗೂ ಗ್ರಾಮೀಣ ಪ್ರದೇಶಗಳಿಗೆ 45 ನಿಮಿಷದೊಳಗೆ ವಾಹನವು ಕರೆ ಮಾಡಿದ ಸ್ಥಳ ತಲುಪಲಿದೆ. ಮುಂಬರುವ ದಿನಗಳಲ್ಲಿ ಎಲ್ಲಾ ಸೇವೆಗೂ ಈ ನಂಬರ್ ಬಳಸುವ ಸಾಧ್ಯತೆ ಇದೆ. ಆಗ ಬೇರೆ ನಂಬರ್‌ಗೆ ಕರೆ ಮಾಡುವ ಅಗತ್ಯ ಇರುವುದಿಲ್ಲ’ ಎಂದರು.

‘ತುರ್ತು ಸೇವೆಗಾಗಿಯೇ‌ ಸರ್ಕಾರ ಜಿಲ್ಲೆಗೆ 11 ವಾಹನ ನೀಡಿದೆ. ಹಂತ-ಹಂತವಾಗಿ ಸರ್ಕಾರ ವಾಹನಗಳ ಸಂಖ್ಯೆ ಹೆಚ್ಚಿಸಲಿದೆ. ಸಾರ್ವಜನಿಕರು ಈ‌ ಸೇವೆಯನ್ನು ಸದುಪಯೋಗ ಪಡಿಸಿಕೊಳ್ಳಬೇಕು’ ಎಂದು ಮನವಿ ಮಾಡಿದರು.

‘ಈ ಸೇವೆಯು ಪೊಲೀಸ್ ಉಪ‌ಠಾಣೆಯಂತೆ ಕಾರ್ಯನಿರ್ವಹಿಸಲಿದೆ. ಕರೆ ಬಂದ‌ ಕಡೆ ಯಾವ ವಾಹನ‌ ಹತ್ತಿರದಲ್ಲಿ ಇರುತ್ತದೆಯೋ ಆ ವಾಹನ ಅಲ್ಲಿಗೆ ತೆರಳಿ ಸ್ಥಳದಲ್ಲಿಯೇ ಸಮಸ್ಯೆ ಪರಿಹರಿಸಲು ಪ್ರಯತ್ನಿಸಲಾಗುವುದು’ ಎಂದರು.

ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ನಂದಗಾವಿ, ಡಿವೈಎಸ್‌ಪಿಗಳಾದ ಪಾಂಡುರಂಗ, ತಿಪ್ಪೇಸ್ವಾಮಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.