ಮೊಳಕಾಲ್ಮುರು (ಚಿತ್ರದುರ್ಗ ಜಿಲ್ಲೆ): ‘ರಾಜ್ಯದಲ್ಲಿ ಶೀಘ್ರದಲ್ಲೇ ಮಹಾರಾಷ್ಟ್ರದಲ್ಲಾದಂತೆ ರಾಜಕೀಯ ಧ್ರುವೀಕರಣವಾಗಲಿದೆ. ಆಗ ಬಿಜೆಪಿ ಹೈಕಮಾಂಡ್ ಬೆಂಬಲ ನೀಡುವ ಬಗ್ಗೆ ಸೂಕ್ತ ನಿರ್ಧಾರ ಕೈಗೊಳ್ಳಲಿದೆ’ ಎಂದು ಮಾಜಿ ಸಚಿವ ಬಿ. ಶ್ರೀರಾಮುಲು ಹೇಳಿದರು.
ಸೋಮವಾರ ಇಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಮಹಾರಾಷ್ಟ್ರದಂತೆ ಇಲ್ಲಿ ಶಿಂಧೆ ಯಾರಾಗುತ್ತಾರೋ ಗೊತ್ತಿಲ್ಲ. ಧ್ರುವೀಕರಣ ಮಾತ್ರ ಖಚಿತ. ಯಾರು ಮುಖ್ಯಮಂತ್ರಿಯಾಗಬಹುದು ಎಂದು ಹೇಳಲು ಇಚ್ಛಿಸುವುದಿಲ್ಲ. ಆದರೆ ರಾಷ್ಟ್ರ ನಾಯಕರು ಇಲ್ಲಿನ ಬೆಳವಣಿಗೆಯನ್ನು ಗಮನಿಸುತ್ತಿದ್ದು, ಸಮಯ ಬಂದಾಗ ಬೆಂಬಲ ನೀಡುವ ನಿರ್ಧಾರ ಮಾಡಲಿದ್ದಾರೆ’ ಎಂದರು.
‘ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸರ್ಕಾರದ ಹಣವನ್ನು ತಮ್ಮ ಸ್ವಂತದ ಹಣದ ರೀತಿ ಬಳಕೆ ಮಾಡುತ್ತಿದ್ದಾರೆ. ಸರ್ಕಾರ ಶಕ್ತಿ ಯೋಜನೆಗೆ ಬಜೆಟ್ನಲ್ಲಿ ಹಣ ಮೀಸಲಿಡದೆ ಸಾರಿಗೆ ನೌಕರರನ್ನು ಬೀದಿಗೆ ತಂದಿದೆ. ಅವರಿಗೆ ಕೊಡಬೇಕಾಗಿರುವ ಪಿಎಫ್, ಪಿಂಚಣಿ ಬೇಡಿಕೆ, ವೇತನ ಹೆಚ್ಚಳವನ್ನು ನಿರ್ಲಕ್ಷಿಸಲಾಗಿದೆ. ₹ 900 ಕೋಟಿಯಷ್ಟು ಪಿಎಫ್ ಹಣವನ್ನು ಸಾರಿಗೆ ನೌಕರರಿಗೆ ನೀಡಬೇಕಿದೆ’ ಎಂದು ತಿಳಿಸಿದರು.
‘ರಾಜ್ಯ ಸರ್ಕಾರ ₹ 4 ಲಕ್ಷ ಕೋಟಿ ಮೊತ್ತದ ದಾಖಲೆ ಬಜೆಟ್ ಮಂಡನೆಯ ಜತೆಯಲ್ಲಿ ದಾಖಲೆ ಪ್ರಮಾಣದಲ್ಲಿ ಸಾಲವನ್ನೂ ಮಾಡಿದೆ’ ಎಂದು ಟೀಕಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.