ಮೊಳಕಾಲ್ಮುರು: ಪ್ರಸ್ತುತ ದಿನಗಳಲ್ಲಿ ಕೃಷಿ ಕೂಲಿ ಕಾರ್ಮಿಕರ ಲಭ್ಯತೆ ಕಡಿಮೆಯಾಗಿರುವುದರಿಂದ ರೈತರು ಕೃಷಿ ಯಂತ್ರೋಪಕರಣ ಬಳಕೆ ಮಾಡುವ ಮೂಲಕ ನೆಮ್ಮದಿಯಿಂದ ಕೃಷಿ ಮಾಡುವ ಜತೆಗೆ ಲಾಭ ಗಳಿಸಲು ಸಾಧ್ಯವಿದೆ ಎಂದು ಬಬ್ಬೂರು ಕೃಷಿ ತರಬೇತಿ ಕೇಂದ್ರದ ಸಹ ಸಂಶೋಧಕ ಶರಣಪ್ಪ ಜಂಗಂಡಿ ತಿಳಿಸಿದರು.
ತಾಲ್ಲೂಕಿನ ಬಿ.ಜಿ.ಕೆರೆ ವಸುಂಧರ ಸಸ್ಯಕ್ಷೇತ್ರದಲ್ಲಿ ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿದ್ಯಾಲಯ ಶಿವಮೊಗ್ಗ, ಕೃಷಿ ಮತ್ತು ತೋಟಕಾರಿಕಾ ಸಂಶೋಧನಾ ಕೇಂದ್ರ ಬಬ್ಬೂರು, ಕೃಷಿ ಯಂತ್ರೋಪಕರಣಗಳ ಪರೀಕ್ಷೆ ಮತ್ತು ತರಬೇತಿ ಕೇಂದ್ರ ಬಬ್ಬೂರು, ಕೃಷಿ ಇಲಾಖೆ ಮೊಳಕಾಲ್ಮುರು ವತಿಯಿಂದ ಬುಧವಾರ ಜಂಟಿಯಾಗಿ ಹಮ್ಮಿಕೊಂಡಿದ್ದ ಕೃಷಿ ಯಂತ್ರೋಪಕರಣಗಳ ದುರಸ್ತಿ ಹಾಗೂ ಬಳಕೆ ಕುರಿತ ತರಬೇತಿ ಕಾರ್ಯಾಗಾರದಲ್ಲಿ ಅವರು ಮಾತನಾಡಿದರು.
ಮೊಳಕಾಲ್ಮುರು ತಾಲ್ಲೂಕಿನಲ್ಲಿ ಹೆಚ್ಚಾಗಿ ಶೇಂಗಾ ಮತ್ತು ಹುಣಸೆ ಬೆಳೆಯಲಾತ್ತದೆ. ಈ ಎರಡು ಬೆಳೆಗಳ ಕಾಯಿಯಿಂದ ಬೀಜ ಬೇರ್ಪಡಿಸುವ ಯಂತ್ರಗಳು ಲಭ್ಯವಿದ್ದು, ಸದ್ಬಳಕೆ ಮಾಡಿಕೊಳ್ಳಬೇಕು ಎಂದರು.
ಕೃಷಿ ಯಂತ್ರೋಪಕರಣಗಳ ಬಳಕೆ ಮತ್ತು ದುರಸ್ತಿ ಬಗ್ಗೆ ರೈತರು ತರಬೇತಿ ಪಡೆದಲ್ಲಿ ಅವಲಂಬನೆ ತಪ್ಪಲಿದೆ. ಇದು ನೆಮ್ಮದಿ ಹಾಗೂ ಲಾಭದಾಯಕ ಕೃಷಿ ಮಾಡಲು ಅನುವು ಮಾಡಿಕೊಡಲಿದೆ. ಸರ್ಕಾರ ನೀಡುವ ಸಹಾಯಧನ ಯೋಜನೆಗಳನ್ನು ಬಳಸಿಕೊಳ್ಳಬೇಕು ಎಂದು ಕೃಷಿ ಉಪ ನಿರ್ದೇಶಕ-2 ಬಿ.ಎನ್. ಪ್ರಭಾಕರ್ ಹೇಳಿದರು.
ಕೃಷಿ ವಿಜ್ಞಾನಿ ಎಸ್. ಓಂಕಾರಪ್ಪ, ಸಹಾಯಕ ನಿರ್ದೇಶಕ ಎನ್.ವಿ. ಪ್ರಕಾಶ್, ಅಧಿಕಾರಿ ನಿರಂಜನಮೂರ್ತಿ, ರೈತಸಂಘದ ಸೂರಮ್ಮನಹಳ್ಳಿ ರಾಜಣ್ಣ, ಆರ್. ನಿಜಲಿಂಗಪ್ಪ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.