ಚಿತ್ರದುರ್ಗ: ಭದ್ರಾ ಮೇಲ್ದಂಡೆ ಯೋಜನೆಯಡಿ ಜಗಳೂರು ತಾಲ್ಲೂಕಿಗೆ ನೇರ ಕಾಲುವೆ ನಿರ್ಮಾಣಕ್ಕೆ ಇಟ್ಟಿರುವ ಬೇಡಿಕೆಗೆ ಚಿತ್ರದುರ್ಗ ತಾಲ್ಲೂಕು ರೈತರು ವಿರೋಧ ವ್ಯಕ್ತಪಡಿಸಿದ್ದಾರೆ. ಕೆ.ಸಿ.ರೆಡ್ಡಿ ವರದಿಯನ್ವಯ ನಾಲೆ ನಿರ್ಮಾಣ ಮಾಡಬೇಕು ಎಂದು ಆಗ್ರಹಿಸಿ ಸೋಮವಾರ ಪ್ರತಿಭಟನೆ ನಡೆಸಿದರು.
ಜಿಲ್ಲಾಧಿಕಾರಿ ಕಚೇರಿ ಬಳಿ ಜಮಾಯಿಸಿದ ರೈತರು ಕಾತ್ರಾಳ್ ಕೆರೆ ಸೇರಿ ತಾಲ್ಲೂಕಿನ ಹಲವು ಕೆರೆಗಳನ್ನು ತುಂಬಿಸಲು ಭದ್ರಾ ಮೇಲ್ದಂಡೆ ಯೋಜನೆಯಡಿ ಅವಕಾಶ ಕಲ್ಪಿಸಬೇಕು ಎಂದು ಆಗ್ರಹಿಸಿದರು.
‘ಜಗಳೂರು ತಾಲ್ಲೂಕಿಗೆ ನೀರು ಕೊಡಲು ವಿರೋಧವಿಲ್ಲ. ಆದರೆ, ನೀರು ಹಂಚಿಕೆಯ ಪ್ರಮಾಣ ನ್ಯಾಯಸಮ್ಮತವಾಗಿ ಇರಬೇಕು. ಕೆ.ಸಿ.ರೆಡ್ಡಿ ವರದಿಯ ಪ್ರಕಾರ ಬೆಳಗಟ್ಟದಿಂದ ಕಾತ್ರಾಳ್ ಕೆರೆಗೆ ನಾಲೆ ನಿರ್ಮಿಸಬೇಕು. ಅಲ್ಲಿಂದ ಮುದ್ದಾಪುರ, ಯಳಗೋಡು ಕೆರೆಗಳ ಮೂಲಕ ಜಗಳೂರು ತಾಲ್ಲೂಕಿಗೆ ನೀರು ಹರಿಸಬೇಕು’ ಎಂದು ಒತ್ತಾಯಿಸಿದರು.
‘ರಾಷ್ಟ್ರೀಯ ಹೆದ್ದಾರಿ–4ರಲ್ಲಿ ಗೌರಮ್ಮನಹಳ್ಳಿ ಕ್ರಾಸ್ ಸಮೀಪ ಇರುವ ಅಂಡರ್ಪಾಸ್ ಬಳಿ ನೀರು ನಿಲ್ಲುತ್ತಿದೆ. ಇದರಿಂದ ಮಳೆಗಾಲದಲ್ಲಿ ತೊಂದರೆ ಉಂಟಾಗುತ್ತಿದೆ. ಎತ್ತಿನಗಾಡಿ, ಜಾನುವಾರು ಹಾಗೂ ವಾಹನ ಸಂಚಾರಕ್ಕೆ ಅಡಚಣೆಯಾಗುತ್ತಿದೆ. ಈ ಸ್ಥಳದಲ್ಲಿ ಸುಸಜ್ಜಿತ ಅಂಡರ್ಪಾಸ್ ನಿರ್ಮಾಣ ಮಾಡಬೇಕು’ ಎಂದು ಆಗ್ರಹಿಸಿದರು.
‘ಅಂಡರ್ಪಾಸ್ ಸಮೀಪ ಸರ್ವಿಸ್ ರಸ್ತೆ ನಿರ್ಮಿಸಲು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಮುಂದಾಗಿದೆ. ಸುಮಾರು 8 ಅಡಿಯಷ್ಟು ಆಳ ಭೂಮಿ ಅಗೆದು ಕಾಮಗಾರಿ ಆರಂಭಿಸಲಾಗಿದೆ. ಇದು ತೀರಾ ಅವೈಜ್ಞಾನಿಕವಾಗಿದೆ. ರಾಜ್ಯ ಹೆದ್ದಾರಿ ಹಾದು ಹೋಗುವ ಮಾರ್ಗದಲ್ಲಿ ಕಿರಿದಾದ ಅಂಡರ್ಪಾಸ್ ನಿರ್ಮಿಸಲಾಗುತ್ತಿದೆ’ ಎಂದು ಆರೋಪಿಸಿದರು.
ರೈತ ಸಂಘದ ಮುಖಂಡರಾದ ಕೆ.ಪಿ.ಭೂತಯ್ಯ, ನೂಲೆನೂರು ಟಿ.ಶಂಕರಪ್ಪ, ಬಸ್ತಿಹಳ್ಳಿ ಜಿ.ಸುರೇಶ್ ಬಾಬು, ಸಿ.ಆರ್.ತಿಮ್ಮಣ್ಣ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.