ADVERTISEMENT

ಕೊಳೆಗೇರಿ ಅಭಿವೃದ್ಧಿಗೆ ಆಗ್ರಹಿಸಿ ಪ್ರತಿಭಟನೆ

ಸ್ಲಂ ಜನಾಂದೋಲನಾ ಕಾರ್ಯಕರ್ತರ ಆಗ್ರಹ

​ಪ್ರಜಾವಾಣಿ ವಾರ್ತೆ
Published 7 ಫೆಬ್ರುವರಿ 2023, 4:27 IST
Last Updated 7 ಫೆಬ್ರುವರಿ 2023, 4:27 IST
ಚಿತ್ರದುರ್ಗದ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಸೋಮವಾರ ಪ್ರತಿಭಟನೆ ನಡೆಸಿದ ಸ್ಲಂ ಜನಾಂದೋಲನಾ ಜಿಲ್ಲಾ ಶಾಖೆ ಕಾರ್ಯಕರ್ತರು.
ಚಿತ್ರದುರ್ಗದ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಸೋಮವಾರ ಪ್ರತಿಭಟನೆ ನಡೆಸಿದ ಸ್ಲಂ ಜನಾಂದೋಲನಾ ಜಿಲ್ಲಾ ಶಾಖೆ ಕಾರ್ಯಕರ್ತರು.   

ಚಿತ್ರದುರ್ಗ: ಕೊಳಚೆ ‍ಪ್ರದೇಶಗಳ ಅಭಿವೃದ್ಧಿಗೆ ಬಜೆಟ್‌ನಲ್ಲಿ ₹1,500 ಕೋಟಿ ಮೀಸಲಿಡಬೇಕು. ಪ್ರಧಾನಮಂತ್ರಿ ಆವಾಸ್‌ ಯೋಜನೆಯ (ನಗರ) ಸಬ್ಸಿಡಿಯನ್ನು ₹ 6 ಲಕ್ಷಕ್ಕೆ ಹೆಚ್ಚಳ ಮಾಡಬೇಕು ಎಂದು ಆಗ್ರಹಿಸಿ ಸ್ಲಂ ಜನಾಂದೋಲನಾ ಜಿಲ್ಲಾ ಶಾಖೆ ಸೋಮವಾರ ಪ್ರತಿಭಟನೆ ನಡೆಸಿತು.

ಇಲ್ಲಿನ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಜಮಾಯಿಸಿದ ಪ್ರತಿಭಟನಾಕಾರರು, ‘ರಾಜ್ಯದಲ್ಲಿ 3,699 ಕೊಳಗೇರಿಗಳಲ್ಲಿ ಶೇ 40 ರಷ್ಟು ಜನರು ಬದುಕು ನಡೆಸುತ್ತಿದ್ದಾರೆ. ಆದ್ದರಿಂದ ರಾಜ್ಯ ಬಜೆಟ್‌ನಲ್ಲಿ ಕೊಳಗೇರಿಗಳ ಸಮಗ್ರ ಅಭಿವೃದ್ಧಿಗೆ ₹ 1,000 ಕೋಟಿ ಘೋಷಿಸಬೇಕು. ವಸತಿ ಯೋಜನೆಯಲ್ಲಿ ಸಮನ್ವಯತೆ ಹಾಗೂ ಸಂಪನ್ಮೂಲ ಕ್ರೋಢೀಕರಣಕ್ಕೆ ಏಕಗವಾಕ್ಷಿ ಪದ್ಧತಿ ಜಾರಿಗೊಳಿಸಿ ತ್ವರಿತವಾಗಿ ಕೊಳೆಗೇರಿ ನಿವಾಸಿಗಳಿಗೆ ಮನೆ ನಿರ್ಮಿಸಿಕೊಡಬೇಕು’ ಎಂದು ಒತ್ತಾಯಿಸಿದರು.

ಸ್ಲಂ ಮುಕ್ತ ನಗರ ಅಥವಾ ಸರ್ವರಿಗೂ ಸೂರು ಘೋಷಣೆ ಖಾತ್ರಿಗೆ ‘ಸಮಗ್ರ ವಸತಿ ಹಕ್ಕು ಕಾಯ್ದೆ’ ಜಾರಿಗೊಳಿಸಬೇಕು. ಈಗಾಗಲೇ 2018 ರಲ್ಲಿ ‘ಕರ್ನಾಟಕ ಸ್ಲಂ ಅಭಿವೃದ್ಧಿ ಕಾಯ್ದೆ’ ಕರಡನ್ನು ಸರ್ಕಾರ ಸ್ವೀಕರಿಸಿದ್ದು, ಜಾರಿಗೆ ಅಗತ್ಯ ಪ್ರಕ್ರಿಯೆ ನಡೆಸಬೇಕು. ನಗರ ಉದ್ಯೋಗ ಖಾತ್ರಿ ಯೋಜನೆಯನ್ನು ಸ್ಲಂ ನಿವಾಸಿಗಳಿಗೆ ಘೋಷಣೆ ಮಾಡಿ 200 ದಿನಗಳ ಕೆಲಸ ನೀಡಬೇಕು. ನಿವೇಶನರಹಿತರಿಗೆ ನಿವೇಶನ ಮತ್ತು ವಸತಿ ಸೌಕರ್ಯ ಕಲ್ಪಿಸಲು ಸರ್ಕಾರಿ ಮತ್ತು ಖಾಸಗಿ ಭೂಮಿ ಸ್ವಾಧೀನಪಡಿಸಿಕೊಳ್ಳಬೇಕು ಎಂದು ಆಗ್ರಹಿಸಿದರು.

ADVERTISEMENT

ಹೆಚ್ಚುವರಿ ಜಿಲ್ಲಾಧಿಕಾರಿ ಟಿ. ಜವರೇಗೌಡ ಅವರಿಗೆ ಮನವಿ ಸಲ್ಲಿಸಿದರು. ಸಮಿತಿಯ ಜಿಲ್ಲಾ ಘಟಕದ ಅಧ್ಯಕ್ಷ ಎಂ.ಮಹೇಶ್‌, ಉಪಾಧ್ಯಕ್ಷೆ ಮಾಲತಿ, ಕಾರ್ಯದರ್ಶಿ ಭಾಗ್ಯಮ್ಮ, ಖಜಾಂಚಿ ಮಂಜುನಾಥ, ಸಹ ಕಾರ್ಯದರ್ಶಿ ರೇಷ್ಮಬಾನು, ವರಲಕ್ಷ್ಮಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.