ಮೊಳಕಾಲ್ಮುರು: ಅತ್ಯಂತ ಹಿಂದುಳಿದ ಕ್ಷೇತ್ರ ಎಂಬ ಹಣೆಪಟ್ಟಿ ಕಟ್ಟಿಕೊಂಡಿರುವ ಮೊಳಕಾಲ್ಮುರು ಅಭಿವೃದ್ಧಿಯಲ್ಲಿ ನಿರ್ಲಕ್ಷ್ಯ ಕಂಡುಬಂದಲ್ಲಿ ಪ್ರತಿಭಟನೆ ನಡೆಸಲಾಗುವುದು ಎಂದು ಮಾಜಿ ಸಚಿವ ಬಿ. ಶ್ರೀರಾಮುಲು ಎಚ್ಚರಿಸಿದರು.
ತಾಲ್ಲೂಕಿನ ರಾಯಾಪುರ ಬಳಿ ನಿರ್ಮಾಣವಾಗುತ್ತಿರುವ ಕೆಎಸ್ಆರ್ಟಿಸಿ ಡಿಪೊ ಕಾಮಗಾರಿಯನ್ನು ಸೋಮವಾರ ವೀಕ್ಷಿಸಿ ಮಾತನಾಡಿದರು.
‘ನಾನು ಈ ಕ್ಷೇತ್ರದ ಶಾಸಕನಾಗಿ, ಆರೋಗ್ಯ ಮತ್ತು ಸಾರಿಗೆ ಸಚಿವವಾಗಿ ಕೈಲಾದಷ್ಟು ಕೆಲಸ ಮಾಡಿದ್ದೇನೆ. ಕ್ಷೇತ್ರಕ್ಕೆ ಹೊಸದಾಗಿ ಹಲವು ಆಸ್ಪತ್ರೆಗಳನ್ನು ಮಂಜೂರು ಮಾಡಿಸಿದ್ದು, ಎಲ್ಲಾ ಕಾಮಗಾರಿ ಪ್ರಗತಿಯಲ್ಲಿವೆ. ಸಾರಿಗೆ ಅವ್ಯವಸ್ಥೆ ನಿವಾರಿಸಲು ಡಿಪೊ ಮತ್ತು ಬಸ್ನಿಲ್ದಾಣ ಮಂಜೂರು ಮಾಡಿಸಿದ್ದೇನೆ. ಡಿಪೊ ಆರಂಭವಾದ ನಂತರ 50 ಹೊಸ ಬಸ್ಗಳು ಬರಲಿವೆ ಎಂದು ಸಾರಿಗೆ ಅಧಿಕಾರಿಗಳು ಹೇಳುತ್ತಿದ್ದಾರೆ. ಇದರಿಂದ ವಿದ್ಯಾರ್ಥಿಗಳಿಗೆ ಹೆಚ್ಚಿನ ಅನುಕೂಲವಾಗಲಿದೆ’ ಎಂದರು.
‘ಸಾಕಷ್ಟು ವಿರೋಧದ ಮಧ್ಯೆಯೂ ಬಸ್ನಿಲ್ದಾಣ ಮತ್ತು ಡಿಪೊ ನಿರ್ಮಾಣಕ್ಕೆ ಕ್ರಮ ಕೈಗೊಳ್ಳಲಾಯಿತು. ಈ ವೇಳೆಗೆ ಇವು ಉದ್ಘಾಟನೆಯಾಗಬೇಕಿತ್ತು’ ಎಂದು ಹೇಳಿದರು.
‘ಕ್ಷೇತ್ರದಲ್ಲಿ ಕಾಂಗ್ರೆಸ್ ಆಡಳಿತದಲ್ಲಿ ನಡೆಯುತ್ತಿರುವ ಶಂಕುಸ್ಥಾಪನೆ, ಉದ್ಘಾಟನೆ ಕಾರ್ಯಕ್ರಮಗಳ ಪೈಕಿ ಹೆಚ್ಚಿನವು ಬಿಜೆಪಿ ಸರ್ಕಾರ ಅಧಿಕಾರದಲ್ಲಿದ್ದಾಗ ಮಂಜೂರಾಗಿವೆ. ಕಾಂಗ್ರೆಸ್ ಸರ್ಕಾರದ ಕೊಡುಗೆ ಏನು ಎಂದು ಮುಂದೆ ಪ್ರಶ್ನೆ ಮಾಡುತ್ತೇವೆ. ಕಾರ್ಯಕರ್ತರು, ಮುಖಂಡರು ಇದಕ್ಕೆ ಕೈಜೋಡಿಸಬೇಕು’ ಎಂದರು.
‘ಎಸ್ಟಿ ನಾಯಕನಾಗಿದ್ದು, ರಾಜ್ಯದ ಎಲ್ಲಾ ಮೀಸಲು ಕ್ಷೇತ್ರಗಳಲ್ಲಿ ಸಂಘಟನೆ ಹೊಣೆಯಿದೆ. ಮುಂದಿನ ಚುನಾವಣೆಯಲ್ಲಿ ಕೂಡ್ಲಿಗಿ, ಮೊಳಕಾಲ್ಮುರು ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ಸ್ಪರ್ಧಿಸುವಂತೆ ಒತ್ತಡವಿದೆ. ಹೈಕಮಾಂಡ್ ನಿರ್ಧಾರದಂತೆ ಸ್ಪರ್ಧೆ ಮಾಡಲಾಗುವುದು. ಮೊಳಕಾಲ್ಮುರಿನಲ್ಲಿ ಪಕ್ಷ ಆಹ್ವಾನಿಸುವ ಎಲ್ಲಾ ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತೇನೆ’ ಎಂದು ತಿಳಿಸಿದರು.
‘ರಾಜ್ಯಸ ರ್ಕಾರ ಪರಿಶಿಷ್ಟ ಜಾತಿ, ಪಂಗಡದ ಅಭಿವೃದ್ಧಿಗೆ ಮೀಸಲಾಗಿರುವ ಅನುದಾನವನ್ನು ಕಾನೂನು ಬಾಹಿರವಾಗಿ ಬಳಕೆ ಮಾಡಿಕೊಳ್ಳುತ್ತಿದೆ. 2 ವರ್ಷದಲ್ಲಿ ₹ 25,000 ಕೋಟಿ ಅನುದಾನ ಬಳಕೆಯಾಗಿದೆ. ಜನಾಂಗದ ವಿದ್ಯಾರ್ಥಿಗಳು, ರೈತರು, ಮಹಿಳೆಯರು ಸಂಕಷ್ಟಕ್ಕೀಡಾಗಿದ್ದಾರೆ. ವಿದ್ಯಾರ್ಥಿವೇತನಕ್ಕೂ ಪರದಾಡುವ ಸ್ಥಿತಿ ಉಂಟಾಗಿದೆ. ಗಂಗಾಕಲ್ಯಾಣ ಸೌಲಭ್ಯಕ್ಕೆ ರೈತರು ಅಲೆದಾಡುತ್ತಿದ್ದಾರೆ’ ಎಂದು ದೂರಿದರು.
ಕ್ಷೇತ್ರಾಧ್ಯಕ್ಷ ಶ್ರೀರಾಮರೆಡ್ಡಿ, ಮುಖಂಡರಾದ ಡಾ.ಪಿ.ಎಂ. ಮಂಜುನಾಥ್, ಪಾಪೇಶ್ ನಾಯಕ, ಕೆ. ಲಕ್ಷ್ಮಣ್, ಕಿರಣ್ ಗಾಯಕವಾಡ್, ಮೊಗಲಹಳ್ಳಿ ಸಿದ್ಧಾರ್ಥ್, ಎಸ್. ಪರಮೇಶ್, ಜೀರಳ್ಳಿ ತಿಪ್ಪೇಸ್ವಾಮಿ ಇದ್ದರು.
ಈ ಬಾರಿ ಬಜೆಟ್ನಲ್ಲಿ ಪಟ್ಟಣಕ್ಕೆ 200 ಹಾಸಿಗೆ ಆಸ್ಪತ್ರೆ ಮಂಜೂರಾಗಿದ್ದು ಇದಕ್ಕೆ ಪೂರಕವಾಗಿ ಆರೋಗ್ಯ ಸಚಿವನಾಗಿದ್ದಾಗ ಕೆಲಸ ಮಾಡಿದ್ದೆ. 2013ರಲ್ಲಿ 100 ಹಾಸಿಗೆ ಆಸ್ಪತ್ರೆಗೆ ಒತ್ತು ನೀಡಿದ್ದೆಬಿ. ಶ್ರೀರಾಮುಲು ಮಾಜಿ ಸಚಿವ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.