ಹೊಸದುರ್ಗ: ಪರಿಶಿಷ್ಟ ಜಾತಿ, ಪಂಗಡದವರಿಗೆ ಮೀಸಲಾತಿ ಹೆಚ್ಚಿಸುವಂತೆ ಒತ್ತಾಯಿಸಿ ಹೊಸದುರ್ಗ ಪಟ್ಟಣ ಬಂದ್ ಮಾಡುವುದರ ಮೂಲಕ ಪ್ರತಿಭಟನೆ ನಡೆಸಲಾಗುವುದು ಎಂದು ಆದಿಜಾಂಬವ ಸಮಾಜದ ತಾಲ್ಲೂಕು ಪ್ರಧಾನ ಕಾರ್ಯದರ್ಶಿಹೆಗ್ಗೆರೆ ಶಂಕ್ರಪ್ಪ ತಿಳಿಸಿದರು.
ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಪರಿಶಿಷ್ಟ ಜಾತಿ ಮತ್ತು ಪಂಗಡದವರು ಸಾಂವಿಧಾನಿಕ ಹಕ್ಕುಗಳನ್ನು ಪಡೆಯಲು ವಾಲ್ಮೀಕಿ ಗುರುಪೀಠದ ಪೀಠಾಧಿಪತಿ ಪ್ರಸನ್ನಾನಂದ ಸ್ವಾಮೀಜಿ ಬೆಂಗಳೂರಿನಲ್ಲಿ ಧರಣಿ ಸತ್ಯಾಗ್ರಹದ ಮೂಲಕ ಹೋರಾಟ ನಡೆಸುತ್ತಿದ್ದಾರೆ. ಆದರೂ ಸರ್ಕಾರ ನಿರ್ಲಕ್ಷ್ಯ ವಹಿಸಿದೆ. ಮೇ 20ರಂದು ಪ್ರತಿಭಟನೆ ನಡೆಸಲಾಗುವುದು’ಎಂದು ತಿಳಿಸಿದರು.
‘ಹೊಸದುರ್ಗದ ವೀರಭದ್ರೇಶ್ವರ ದೇವಾಲಯದಿಂದ ಮೆರವಣಿಗೆ ನಡೆಸಿ ತಹಶೀಲ್ದಾರ್ ಕಚೇರಿಯವರೆಗೂ ತೆರಳಿ ಮನವಿ ಸಲ್ಲಿಸಲಾಗುವುದು. ಮೇ 20ರ ನಂತರವೂ ವರದಿ ಜಾರಿಯಾಗದಿದ್ದರೇ ಸಮಾಜದ ಮುಖಂಡರು ಹಾಗೂ ಸ್ವಾಮೀಜಿಯವರ ತೀರ್ಮಾನದಂತೆ ಮುಂದಿನ ಕ್ರಮ ಕೈಗೊಳ್ಳಲಾಗುವುದು’ ಎಂದರು.
ತಾಲ್ಲೂಕು ನಾಯಕ ಸಮಾಜದ ಅಧ್ಯಕ್ಷ ಶಿವಣ್ಣ, ಕಾರ್ಯದರ್ಶಿ ಹೊನ್ನೇಕೆರೆಹಳ್ಳಿ ಜಯಣ್ಣ, ನಾಯಕ ಸಮಾಜ ಹಾಗೂ ಆದಿಜಾಂಬವ ಸಮಾಜದ ಮುಖಂಡರಾದ ಆದ್ರಿಕಟ್ಟೆ ಕುಮಾರಪ್ಪ, ದೇವಿಗೆರೆ ಮಲ್ಲಿಕಾರ್ಜುನ್, ಹೊನ್ನೇನಹಳ್ಳಿ ರಂಗಪ್ಪ, ಹುಣವಿನಡು ಜಯಪ್ಪ, ಕೃಷ್ಣಮೂರ್ತಿ, ದಾರಮಾದಪ್ಪ, ವಾಲ್ಮೀಕಿ ರವಿತೇಜ, ಕಂಗುವಳ್ಳಿ ಮಹೇಶ್, ದೊಡ್ಡಘಟ್ಟ ರಾಮಚಂದ್ರಪ್ಪ, ಲಕ್ಕಿಹಳ್ಳಿ ಮುದ್ದಪ್ಪ,ಕರಿಯಪ್ಪ, ದೇವರಾಜಪ್ಪ, ದಾಸಪ್ಪ, ರುದ್ರಪ್ಪ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.