ಚಿತ್ರದುರ್ಗ: ಚಿತ್ರದುರ್ಗ ಮೀಸಲು ಕ್ಷೇತ್ರದ ಟಿಕೆಟ್ ಕೈತಪ್ಪಿದ್ದರಿಂದ ಅಸಮಾಧಾನಗೊಂಡಿರುವ ಶಾಸಕ ಎಂ.ಚಂದ್ರಪ್ಪ ಅವರ ಪುತ್ರ ಎಂ.ಸಿ.ರಘುಚಂದನ್, ಬಂಡಾಯ ಅಭ್ಯರ್ಥಿಯಾಗಿ ಕಣಕ್ಕೆ ಇಳಿಯುವ ಸುಳಿವು ನೀಡಿದ್ದಾರೆ. ಏ.3ರಂದು ನಾಮಪತ್ರ ಸಲ್ಲಿಸುವುದಾಗಿ ಘೋಷಣೆ ಮಾಡಿದ್ದಾರೆ.
ನಗರದಲ್ಲಿ ಶುಕ್ರವಾರ ಆಯೋಜಿಸಿದ್ದ ‘ಬಿಜೆಪಿ ಸ್ವಾಭಿಮಾನಿ ಕಾರ್ಯಕರ್ತರ ಸಭೆ’ಯ ಬಳಿಕ ಉಮೇದುವಾರಿಕೆ ಸಲ್ಲಿಕೆಯ ನಿರ್ಧಾರ ಪ್ರಕಟಿಸಿದರು. ಅಭ್ಯರ್ಥಿ ಬದಲಾವಣೆಗೆ ಐದು ದಿನ ಗಡುವು ನೀಡಲಾಗಿದ್ದು, ಮುಂದಿನ ನಡೆಯನ್ನು ಆ ಬಳಿಕ ತೀರ್ಮಾನಿಸುವುದಾಗಿ ಹೇಳಿದ್ದಾರೆ.
‘ಟಿಕೆಟ್ ಬದಲಾವಣೆಗೆ ಇನ್ನೂ ಕಾಲ ಮಿಂಚಿಲ್ಲ. ನಮ್ಮ ನೋವು ಬಿಜೆಪಿ ವರಿಷ್ಠರಿಗೆ ಅರ್ಥವಾಗಿದೆ ಎಂದು ಭಾವಿಸಿದ್ದೇನೆ. ನಮಗೆ ಮತದಾರರ ಹಿತಾಸಕ್ತಿ ಮುಖ್ಯವೇ ಹೊರತು ಪಕ್ಷದ ತೀರ್ಮಾನವಲ್ಲ. ಪುತ್ರ ರಘುಚಂದನ್ ಯಾವ ರೀತಿ ಸ್ಪರ್ಧೆ ಮಾಡಬೇಕು ಎಂಬುದು ಪಕ್ಷದ ನಿಲುವು ಆಧರಿಸಿ ತೀರ್ಮಾನವಾಗಲಿದೆ’ ಎಂದು ಶಾಸಕ ಎಂ.ಚಂದ್ರಪ್ಪ ತಿಳಿಸಿದರು.
ಸ್ಪರ್ಧೆಯಿಂದ ಹಿಂದೆ ಸರಿಯುವ ಮಾತಿಲ್ಲ. ಸ್ವಾಭಿಮಾನಿ ಕಾರ್ಯಕರ್ತರು ತಮ್ಮ ಅಭಿಪ್ರಾಯವನ್ನು ‘ಗೋಬ್ಯಾಕ್ ಕಾರಜೋಳ’ ಎಂಬ ಅಭಿಯಾನದ ಮೂಲಕ ಸಂದೇಶ ರವಾನಿಸಿದ್ದಾರೆ.ಎಂ.ಸಿ.ರಘುಚಂದನ್, ಬಿಜೆಪಿ ಯುವ ಮುಖಂಡ
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.