ADVERTISEMENT

ಭೂಮಿ ಹದಕ್ಕೆ ಮುಂದಾದ ರೈತರು

ಕೆಲವು ದಿನಗಳಿಂದ ಸುರಿಯುತ್ತಿರುವ ಅಶ್ವಿನಿ ಮಳೆ

ಶ್ವೇತಾ ಜಿ.
Published 20 ಏಪ್ರಿಲ್ 2022, 6:42 IST
Last Updated 20 ಏಪ್ರಿಲ್ 2022, 6:42 IST
ಕರಿಸಿದ್ಧಯ್ಯ ತಾರೀಕೆರೆ
ಕರಿಸಿದ್ಧಯ್ಯ ತಾರೀಕೆರೆ   

ಹೊಸದುರ್ಗ: ಕಳೆದ ಕೆಲವು ದಿನಗಳಿಂದ ಅಶ್ವಿನಿ ಮಳೆ ಸುರಿಯುತ್ತಿದೆ. ಏಪ್ರಿಲ್, ಮೇ ತಿಂಗಳಲ್ಲಿ ಮಳೆಯಾದರೆ ರೈತನ ಮೊಗದಲ್ಲಿ ಸಂತಸ ಉಂಟಾಗುತ್ತದೆ. ಭೂಮಿ ಹದ ಮಾಡಲು ಇದು ಒಳ್ಳೆಯ ಸಮಯ. ಹೀಗಾಗಿ ರೈತರೆಲ್ಲ ತಮ್ಮ ಹೊಲಗಳಿಗೆ ಸಾಗಿ, ಬಿತ್ತನೆ ತಯಾರಿಯಲ್ಲಿ ಸಜ್ಜಾಗಿದ್ದಾರೆ.

ಅಶ್ವಿನಿ ಮಳೆ, ಬಂಪರ್ ಬೆಳೆ: ತಾಲ್ಲೂಕಿನ ಕೆಲವು ರೈತರ ಭೂಮಿ ಹದಗೊಂಡಿದ್ದು ರೈತರು ಎಳ್ಳು, ಜೋಳ, ಸೂರ್ಯಕಾಂತಿ, ಶೇಂಗಾ, ಉದ್ದು, ಅಲಸಂದಿ ಮುಂತಾದ ಬೆಳೆ ಬೆಳೆಯಲು ತಯಾರಿ ನಡೆಸುತ್ತಿದ್ದಾರೆ.

‘ಅಶ್ವಿನಿ ಮಳೆ ಸಮಯಕ್ಕೆ ಸರಿಯಾಗಿ ಬಂದರೆ ರೈತರು ಬಿತ್ತನೆಯಲ್ಲಿ ತೊಡಗುತ್ತಾರೆ. ಈ ಸಮಯದಲ್ಲಿ ಬಿತ್ತನೆಯಾದರೆ ಬೆಳೆ ಹುಲುಸಾಗಿ ಬರುತ್ತದೆ. ಅಲ್ಲದೇ ಬೆಳೆಗೆ ರೋಗಗಳೂ ಕಡಿಮೆ. ಬೆಳೆ ಹುಲುಸಾಗಿ ಬೆಳೆದು ಹೆಚ್ಚು ಇಳುವರಿ ನೀಡುತ್ತದೆ. ತೆಂಗು, ಅಡಿಕೆ ಬೆಳೆಗೂ ಈ ಮಳೆ ಸಹಾಯ ಮಾಡುತ್ತದೆ. ಇದು ಬಂದರೆ ತೋಟದಲ್ಲಿ ಅರಳುಕಟ್ಟುವುದು (ಹೊಂಬಾಳೆ) ಬಹು ಬೇಗ ಆಗುತ್ತದೆ. ಕಳೆದ ಬಾರಿ ಮುಂಗಾರು ಬೆಳೆ ಬೆಳೆಯಲು ಒಂದು ತಿಂಗಳು ಲೇಟಾದ ಕಾರಣ ಹೆಸರು, ಉದ್ದು, ಅಲಸಂದಿ ಸೋನೆ ಮಳೆಗೆ ಸಿಲುಕಿ ಬಂದ ಬೆಳೆ ಕೈ ಸೇರದಂತಾಯಿತು‌. ಅಶ್ವಿನಿ ಮಳೆ ಬಂದಾಗ ಬಿತನೆ ಮಾಡಿದರೆ, ಸೋನೆ ಮಳೆ ಬರುವಷ್ಟರಲ್ಲಿ ಕಟಾವು ಮಾಡಿ ಬೆಳೆ ಮನೆಗೆ ತರಬಹುದು’ ಎನ್ನುತ್ತಾರೆ ರೈತ ಸಂಘದ ಜಿಲ್ಲಾ ಸಲಹಾ ಸಮಿತಿ ಅಧ್ಯಕ್ಷ ಕರಿಸಿದ್ಧಯ್ಯ
ತಾರೀಕೆರೆ.

ADVERTISEMENT

‘ಈ ಸಮಯದಲ್ಲಿ ರೈತರು ಮಾಗಿ ಉಳುಮೆಗೆ ಮುಂದಾಗಬೇಕು. ಹೀಗೆ ಮಾಡುವುದರಿಂದ ಈ ಹಿಂದೆ ಬೆಳೆಗೆ ಬಂದಿದ್ದ ರೋಗ ರುಜಿನಗಳ ಮೊಟ್ಟೆ ಬಿಸಿಲಿಗೆ ಒಡೆಯುತ್ತವೆ. ಮುಂದೆ ಬೆಳೆಯುವ ಬೆಳೆಗೆ ಶೇ 50-70 ರೋಗ ಉಂಟಾಗುವುದನ್ನು ತಡೆಗಟ್ಟಬ
ಹುದು. ಇಳಿಜಾರಿಗೆ ಅಡ್ಡಲಾಗಿ ಉಳುಮೆ ಮತ್ತು ಬಿತ್ತನೆ ಮಾಡುವುದರಿಂದ ಮಣ್ಣಿನ ಸವಕಳಿ ನಿಲ್ಲಿಸಬಹುದು. ಭೂಮಿ ಹದ ಆದ ಮೇಲೆ ಬಿತ್ತನೆಗೂ ಮೊದಲು 15 ದಿನ ಮುಂಚೆ ತಿಪ್ಪೆಗೊಬ್ಬರ (ಕೊಟ್ಟಿಗೆ ಗೊಬ್ಬರ)ವನ್ನು ಬಿಸಿಲು ಇಲ್ಲದಿದ್ದಾಗ ಭೂಮಿಗೆ ಸೇರಿಸಿ. ಕಾರಣ ತಾಪಮಾನ ಹೆಚ್ಚಾದರೆ ಕೊಟ್ಟಿಗೆ ಗೊಬ್ಬರದಲ್ಲಿ ಪೋಷಕಾಂಶಗಳು ಕಡಿಮೆಯಾ
ಗುತ್ತವೆ’ ಎಂದು ಸಹಾಯಕ ಕೃಷಿ ನಿರ್ದೇಶಕ ಸಿ.ಎಸ್. ಈಶ ರೈತರಿಗೆ ಸಲಹೆ ನೀಡಿದ್ದಾರೆ. ಅಶ್ವಿನಿ ಮಳೆಯಿಂದ ತಾಲ್ಲೂಕಿನ ರೈತರು ಸಂತಸದಲ್ಲಿದ್ದಾರೆ. ಈ ಬಾರಿಯಾದರೂ ಯಾವುದೇ ಅತಿವೃಷ್ಟಿ, ಅನಾವೃಷ್ಟಿ ಸಂಭವಿಸದೇ, ಬೆಳೆದ ಬೆಳೆ ಕೈ ಸೇರಿ, ಸರಿಯಾದ ಬೆಲೆ ದೊರೆತು, ನೆಮ್ಮದಿಯಿಂದ ಜೀವನ ಸಾಗಿಸಿದರೇ ಸಾಕು
ಎಂಬಂತಾಗಿದೆ.

ಬೀಜ, ಗೊಬ್ಬರ ವ್ಯವಸ್ಥೆ ಅಗತ್ಯ

ಈ ಬಾರಿ ಮಳೆ ಚೆನ್ನಾಗಿ ಆಗಿದೆ. ಮಂಗಳವಾರ ನಾವೆಲ್ಲ ಭೂಮಿ ಹದ ಮಾಡುತ್ತೇವೆ. ಮತ್ತೋಡು ಹೋಬಳಿಯಲ್ಲಿ ಹೆಚ್ಚಾಗಿ ಹೆಸರುಕಾಳು ಬೆಳೆಯಲಾಗುತ್ತದೆ. ಅಶ್ವಿನಿ ಮಳೆ 10-12 ದಿನವಿದ್ದು, ಮತ್ತೊಮ್ಮೆ ಚೆನ್ನಾಗಿ ಬಂದರೆ, ಈ ವಾರದೊಳಗೆ ಬಿತ್ತನೆ ಕಾರ್ಯ ಆರಂಭವಾಗುತ್ತದೆ. ರೈತರಿಗೆ ಅಗತ್ಯವಿರುವ ಬೀಜ, ಗೊಬ್ಬರಗಳನ್ನು ನೀಡಲು ಸರ್ಕಾರ ಸಮರ್ಪಕ ತಯಾರಿ ನಡೆಸಬೇಕು. ಇಲ್ಲವಾದರೆ ರೈತರು ಬೀಜ–ಗೊಬ್ಬರಕ್ಕೆ ಪರದಾಡುವಂತಹ ಸ್ಥಿತಿ ಬರುತ್ತದೆ.

– ಕರಿಸಿದ್ಧಯ್ಯ ತಾರೀಕೆರೆ,ಅಧ್ಯಕ್ಷ, ರೈತ ಸಂಘದ ಜಿಲ್ಲಾ ಸಲಹಾ ಸಮಿತಿ

ಬೀಜೋಪಚಾರ ಮಾಡಿ

ರೈತರು ಬಿತ್ತನೆಗೂ ಮೊದಲು ಬೀಜೋಪಚಾರ ಮಾಡಬೇಕು. ಇಲಾಖೆ ವತಿಯಿಂದ ರೈತರಿಗೆ ನೀಡುವ ಬೀಜ ಮತ್ತು ಗೊಬ್ಬರದ ಪೂರ್ವ ತಯಾರಿ ಆಗಿದೆ. 4 ಹೋಬಳಿಗಳ ರೈತ ಸಂಪರ್ಕ ಕೇಂದ್ರಗಳಲ್ಲಿ ಹಾಗೂ ಕೃಷಿ ಪರಿಕರ ಮಾರಾಟ ಮಳಿಗೆಗಳವರಿಗೆ ಈ ಕುರಿತು ನಿರ್ದೇಶನ ನೀಡಲಾಗಿದೆ.

– ಸಿ.ಎಸ್. ಈಶ, ಸಹಾಯಕ ಕೃಷಿ ನಿರ್ದೇಶಕ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.