ಪರಶುರಾಂಪುರ:ಗ್ರಾಮದ ಕೆಲವು ಕಾಲೊನಿಗಳಲ್ಲಿ ಕೆಂಪು ನೀರು ಪೂರೈಕೆಯಾಗುತ್ತಿದ್ದು, ನೀರಿನಲ್ಲಿ ಹುಳು, ಕಸ, ಕಡ್ಡಿ ಬರುತ್ತಿದೆ.
ಈ ನೀರು ಕುಡಿದರೆ ಕಾಯಿಲೆ ಬರುವುದು ಖಚಿತ ಎಂದು ನೀರು ಪೂರೈಕೆ ಮಾಡುತ್ತಿರುವ ಗ್ರಾಮ ಪಂಚಾಯಿತಿ ವಿರುದ್ಧ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಗ್ರಾಮಕ್ಕೆ ವೇದಾವತಿ ನದಿಯಿಂದ ನೀರು ಪೂರೈಸಲಾಗುತ್ತಿದೆ. ನದಿಯಲ್ಲಿ ಕೊರೆದಿರುವ ಕೊಳವೆಬಾವಿಯ ಪೈಪ್ ಅನ್ನು ಸರಿಯಾಗಿ ಮುಚ್ಚಿಲ್ಲ. ಇದರಿಂದ ನೀರು ಶುದ್ಧೀಕರಣವಾಗದೇ ನದಿಯ ನೀರು ನೇರವಾಗಿ ಪೈಪ್ ಮೂಲಕ ಬರುತ್ತಿದೆ ಎಂದುಗ್ರಾಮದ ಮಂಗಳಗೌರಿ, ಮಾರಕ್ಕ ಹೇಳಿದರು.
‘ಪ್ರತಿ ತಿಂಗಳು ನೀರಿಗೆ ₹ 50 ತೆರಿಗೆಯನ್ನು ಗ್ರಾಮ ಪಂಚಾಯಿತಿಗೆ ಕಟ್ಟುತ್ತೇವೆ. ಕೇವಲ ಹಣ ಪಡೆದರೆ ಸಾಲದು. ಜನರ ಸಮಸ್ಯೆಗಳ ಬಗ್ಗೆ ಸಳ್ಥೀಯ ಆಡಳಿತ ಗಮನ ಹರಿಸಬೇಕು. ಗ್ರಾಮದಲ್ಲಿ ಸಾಂಕ್ರಾಮಿಕ ರೋಗಗಳ ಭೀತಿ ಎದುರಾಗಿದೆ. ನೀರನ್ನು ಶುದ್ಧೀಕರಿಸಿ ಪೂರೈಸಬೇಕು ಎಂದು ಪ್ರಸನ್ನ, ಶಿವರಾಜ ಒತ್ತಾಯಿಸಿದರು.
ಖಾನಿಹಳ್ಳಕ್ಕೆ ಗ್ರಾಮ ಪಂಚಾಯಿತಿ ತ್ಯಾಜ್ಯ: ಗ್ರಾಮ ಪಂಚಾಯಿತಿಯಿಂದ ಸಂಗ್ರಹಿಸುವ ಘನ ತ್ಯಾಜ್ಯವನ್ನು ಖಾನಿ ಹಳ್ಳಕ್ಕೆ ಸುರಿಯುತ್ತಿದ್ದು, ಈ ಹಳ್ಳದಲ್ಲಿ ಹರಿಯುವ ನೀರು ವೇದಾವತಿ ನದಿಯನ್ನು ಸೇರುತ್ತಿದೆ. ಹಾಗಾಗಿ ಈ ತ್ಯಾಜ್ಯ ನೀರಿನಲ್ಲಿ ಸೇರುತ್ತಿದೆ. ಕೂಡಲೇ ಖಾನಿ ಹಳ್ಳಕ್ಕೆ ಹಾಕುವ ತ್ಯಾಜ್ಯವನ್ನು ನಿಲ್ಲಿಸಬೇಕು ಎಂದು ಅವರು ಆಗ್ರಹಿಸಿದರು.
ಈಗಾಗಲೇ ನೀರಿನ ಮೂಲಗಳಾದ ತೊಟ್ಟಿ, ಟ್ಯಾಂಕ್ಗಳನ್ನು ಸ್ವಚ್ಛಗೊಳಿಸಲಾಗಿದೆ. ನದಿಯಲ್ಲಿ ನೀರು ಹರಿಯುತ್ತಿರುವುದರಿಂದ ಮುಂದಿನ ದಿನಗಳಲ್ಲಿ ಪೈಪ್ಲೈನ್ ಬದಲಾಯಿಸಲಾಗುವುದು.
ಗುಂಡಪ್ಪ, ಪಿಡಿಒ
ಕೂಡಲೇ ಸ್ಥಳೀಯ ಆಡಳಿತ ಎಚ್ಚೆತ್ತುಕೊಂಡು ಜನರಿಗೆ ಉತ್ತಮವಾದ ನೀರು ಪೂರೈಸಲು ಕ್ರಮ ಕೈಗೊಳ್ಳಬೇಕು.
ಪ್ರಸನ್ನಕುಮಾರ, ಗ್ರಾ.ಪಂ. ಮಾಜಿ ಸದಸ್ಯ
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.