ADVERTISEMENT

ಚಿತ್ರದುರ್ಗ | ಒಳಮೀಸಲು ವರ್ಗೀಕರಣ ಅವೈಜ್ಞಾನಿಕ; ಆಕ್ರೋಶ

ಮದಕರಿಪುರ ಲಂಬಾಣಿಹಟ್ಟಿಯಿಂದ ಜಿಲ್ಲಾಧಿಕಾರಿ ಕಚೇರಿವರೆಗೆ ಪಾದಯಾತ್ರೆ, ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 30 ಸೆಪ್ಟೆಂಬರ್ 2025, 5:19 IST
Last Updated 30 ಸೆಪ್ಟೆಂಬರ್ 2025, 5:19 IST
ಒಳಮೀಸಲಾತಿ ವರ್ಗೀಕರಣದಲ್ಲಿ ಅನ್ಯಾಯವಾಗಿದೆ ಎಂದು ಆರೋಪಿಸಿ ಅಖಿಲ ಕರ್ನಾಟಕ ಮೀಸಲಾತಿ ಸಂರಕ್ಷಣಾ ಒಕ್ಕೂಟದ ಸದಸ್ಯರು ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು
ಒಳಮೀಸಲಾತಿ ವರ್ಗೀಕರಣದಲ್ಲಿ ಅನ್ಯಾಯವಾಗಿದೆ ಎಂದು ಆರೋಪಿಸಿ ಅಖಿಲ ಕರ್ನಾಟಕ ಮೀಸಲಾತಿ ಸಂರಕ್ಷಣಾ ಒಕ್ಕೂಟದ ಸದಸ್ಯರು ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು   

ಚಿತ್ರದುರ್ಗ: ರಾಜ್ಯ ಸರ್ಕಾರ ಪರಿಶಿಷ್ಟ ಜಾತಿ ಸಮುದಾಯಗಳಿಗೆ ಜಾರಿಗೊಳಿಸಿರುವ ಒಳಮೀಸಲಾತಿ ವರ್ಗೀಕರಣ ಅವೈಜ್ಞಾನಿಕವಾಗಿದೆ. ಇದರಿಂದ ಕೊರಚ, ಕೊರಮ, ಭೋವಿ, ಲಂಬಾಣಿ ಸಮಾಜಗಳಿಗೆ ಅನ್ಯಾಯವಾಗಿದೆ ಎಂದು ಆರೋಪಿಸಿ ಮೀಸಲಾತಿ ಸಂರಕ್ಷಣಾ ಜಿಲ್ಲಾ ಒಕ್ಕೂಟದ ಕಾರ್ಯಕರ್ತರು ಸೋಮವಾರ ಪ್ರತಿಭಟನೆ ನಡೆಸಿದರು.

ಮದಕರಿಪುರ ಲಂಬಾಣಿಹಟ್ಟಿಯಿಂದ ಜಿಲ್ಲಾಧಿಕಾರಿ ಕಚೇರಿವರೆಗೆ ಜನಜಾಗೃತಿ ಪಾದಯಾತ್ರೆ ನಡೆಸಿ ರಾಜ್ಯ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ದಿಕ್ಕಾರ ಕೂಗಿದರು. ಬೇಡಿಕೆ ಈಡೇರಿಸುವಂತೆ ಒತ್ತಾಯಿಸಿ ಹೆಚ್ಚುವರಿ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು.

ನ್ಯಾ.ನಾಗಮೋಹನ ದಾಸ್ ಆಯೋಗ ನೀಡಿದ ವರದಿಯಿಂದ ನಮ್ಮ ಸಮುದಾಯಗಳಿಗೆ ಅನ್ಯಾಯವಾಗಿದೆ. ವರದಿಯು ಎ.ಜೆ.ಸದಾಶಿವ ಆಯೋಗದ ಮುಂದುವರಿದ ಭಾಗದಂತಿದೆ. ರಾಜ್ಯ ಸರ್ಕಾರ ಕೂಡ ವರದಿಯ ಶಿಫಾರಸುಗಳನ್ನು ಮಾರ್ಪಾಡು ಮಾಡಿ ಎ, ಬಿ, ಸಿ ಎಂದು ವರ್ಗೀಕರಣ ಮಾಡಿರುವುದು ಸರಿಯಲ್ಲ. ಇದರಿಂದ ನಮ್ಮ ಸಮುದಾಯಗಳಿಗೆ ವಂಚನೆ ಮಾಡಿದಂತಾಗಿದೆ ಎಂದು ಪ್ರತಿಭಟನಕಾರರು ಆಕ್ರೋಶ ವ್ಯಕ್ತಪಡಿಸಿದರು.

‘ನಾಗಮೋಹನ್ ದಾಸ್‌ ಅವರು ಒತ್ತಡಕ್ಕೆ ಮಣಿದು ಆತುರಾತುರವಾಗಿ ಸರ್ಕಾರಕ್ಕೆ ವರದಿ ಸಲ್ಲಿಸಿದ್ದಾರೆ. ಸರ್ಕಾರದ ಕೆಲ ಇಲಾಖೆಗಳು ಎಸ್‌ಸಿ ಸಮುದಾಯಗಳ ಅಂಕಿ-ಅಂಶ ನೀಡಿಲ್ಲ. ಅಲೆಮಾರಿಗಳಾದ ನಮ್ಮ ಸಮುದಾಯದ ಸದಸ್ಯರು ಗೋವಾ ಸೇರಿದಂತೆ ಬೇರೆ ಜಿಲ್ಲೆ, ಬೇರೆ ರಾಜ್ಯಗಳಿಗೆ ವಲಸೆ ಹೋಗಿದ್ದಾರೆ. ಅವರನ್ನು ಬಿಟ್ಟು ಸಮೀಕ್ಷೆ ಮಾಡಿರುವುದು ಖಂಡನೀಯ. ಗ್ರಾಮೀಣ ಭಾಗಗಳಲ್ಲಿ ಅಲಭ್ಯತೆಯ ಕಾರಣಕ್ಕೆ ಸಮೀಕ್ಷೆ ಅಪೂರ್ಣವಾಗಿದೆ. ಹೀಗಿದ್ದರೂ ವರದಿ ಜಾರಿಗೊಳಿಸಿರುವುದು ಸರಿಯಲ್ಲ’ ಎಂದು ಆರೋಪಿಸಿದರು.

‘ಎ.ಜೆ.ಸದಾಶಿವ, ನಾಗಮೋಹನ ದಾಸ್ ಆಯೋಗ ಹಾಗೂ ಮಾಧುಸ್ವಾಮಿ ಸಮಿತಿಯ ವರದಿಯನ್ವಯ ಅಲೆಮಾರಿ ಸಮುದಾಯಗಳಿಗೆ ಪ್ರತ್ಯೇಕ ಮೀಸಲಾತಿ ಕಲ್ಪಿಸಿರುವುದಾಗಿ ಮುಖ್ಯಮಂತ್ರಿಗಳು ಹೇಳಿದ್ದಾರೆ. ಆದರೆ ಬಂಜಾರ, ಭೋವಿ, ಕೊರಚ, ಕೊರಮ ಸಮುದಾಯದ ‘ಸಿ’ ವರ್ಗದವರೊಂದಿಗೆ ಸೇರಿಸಿ ಅಲೆಮಾರಿಗಳಿಗೆ ಮೀಸಲಾತಿಯಿಂದ ವಂಚಿಸಿರುವುದು ವಿಪರ್ಯಾಸ. ಆಯೋಗಗಳ ವರದಿ ಪ್ರಕಾರ ಅಲೆಮಾರಿಗಳಿಗೆ ಶೇ 1ರಷ್ಟು ಮೀಸಲಾತಿ ನೀಡಬೇಕು’ ಎಂದು ಆಗ್ರಹಿಸಿದರು.

ADVERTISEMENT

‘ಜನಸಂಖ್ಯೆಗೆ ಅನುಗುಣವಾಗಿ ಮೀಸಲಾತಿ ಹೆಚ್ಚಿಸಿ ‘ಸಿ’ ವರ್ಗದ ನಮ್ಮ ಸಮುದಾಯಗಳಿಗೂ ಶೇ 6ರಷ್ಟು ಮೀಸಲಾತಿ ನೀಡಬೇಕು. ಔದ್ಯೋಗಿಕವಾಗಿ ಅತಿ ಹೆಚ್ಚು ಉದ್ಯೋಗ ಸೃಷ್ಟಿಯಾಗುತ್ತಿರುವ ಖಾಸಗಿ ವಲಯದಲ್ಲೂ ಮೀಸಲಾತಿ ಕಲ್ಪಿಸಲು ಕ್ರಮ ಕೈಗೊಳ್ಳಬೇಕು. ನಮ್ಮ ಹೋರಾಟ ಶೀಘ್ರವಾಗಿ ಈಡೇರಬೇಕು’ ಎಂದು ಒತ್ತಾಯಿಸಿದರು.

‘ಸ್ಪಶ್ಯ, ಅಸ್ಪಶ್ಯ ಎಂಬ ಅಸಂವಿಧಾನಿಕ ಪದ ಬಳಕೆಯನ್ನು ಕಡತದಿಂದ ತೆಗೆದುಹಾಕಿ, ದಮನಿತ ಅಥವಾ ವಿಮುಕ್ತ ಜಾತಿಗಳೆಂದು ಹೆಸರಿಸಬೇಕು. ಅಪೂರ್ಣ ಮಾಹಿತಿ ಹೊಂದಿರುವ ನಾಗಮೋಹನ್ ದಾಸ್ ವರದಿ ತಿರಸ್ಕರಿಸಿ, ಕೇಂದ್ರ ಸರ್ಕಾರ ನಡೆಸುವ ಜಾತಿ ಗಣತಿವರೆಗೂ ಒಳ ಮೀಸಲಾತಿ ವರ್ಗೀಕರಣ ಆದೇಶವನ್ನು ರಾಜ್ಯ ಸರ್ಕಾರ ತಡೆಹಿಡಿಯಬೇಕು. ಬೇಡ ಜಂಗಮರನ್ನು ಎಸ್ಸಿ ಪಟ್ಟಿಯಿಂದ ತೆಗೆಯಬೇಕು’ ಎಂದು ಮುಖ್ಯಮಂತ್ರಿಗೆ ಕೋರಿದರು.

ಸರ್ದಾರ್ ಸೇವಾಲಾಲ್ ಸ್ವಾಮೀಜಿ, ನಂದಾ ಮಸಂದ್ ಸೇವಾಲಾಲ್ ಸ್ವಾಮೀಜಿ, ಶಿವಪ್ರಕಾಶ್ ಸ್ವಾಮೀಜಿ ನೇತೃತ್ವ ವಹಿಸಿದ್ದರು.

ಶಿರಹಟ್ಟಿ ಶಾಸಕ ಚಂದ್ರು ಲಂಬಾಣಿ, ಮಾಜಿ ಶಾಸಕರಾದ ಪಿ.ರಾಜು, ಕೆ.ಬಿ.ಅಶೋಕ್‌ನಾಯ್ಕ, ಬಸವರಾಜ್‌ನಾಯ್ಕ, ಒಕ್ಕೂಟದ ಸಂಚಾಲಕ ನಿಂಗಾನಾಯ್ಕ, ಮುಖಂಡರಾದ ನರೇನಹಳ್ಳಿ ಅರುಣ್‌ಕುಮಾರ್, ಚಂದ್ರನಾಯ್ಕ, ರಮೇಶ್‌ನಾಯ್ಕ, ಗಿರೀಶ್‌ನಾಯ್ಕ, ಬಾಲ್ಯನಾಯ್ಕ, ಗೌತಮ್‌ನಾಯ್ಕ, ಸೂರ್ಯನಾಯ್ಕ, ಶಿವಕುಮಾರ್‌ನಾಯ್ಕ, ಗಂಗಾನಾಯ್ಕ, ರವಿ ಮದಕರಿಪುರ, ತಿಪ್ಪೇಸ್ವಾಮಿ, ಅನಿಲ್‌ನಾಯ್ಕ, ಶ್ರೀನಿವಾಸ್‌ನಾಯ್ಕ ಇದ್ದರು.

ಪಾದಯಾತ್ರೆಯು ನಗರ ಪ್ರವೇಶಿಸಿದಾಗ ಕೆಲ ಯುವಕರು ಅರೆಬೆತ್ತಲೆಯಾಗಿ ಮೆರವಣಿಗೆ ನಡೆಸಿದರು. ಜಿಲ್ಲಾಧಿಕಾರಿ ಕಚೇರಿ ಬಳಿ ಪ್ರತಿಭಟನಾಕಾರರ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಸ್ಥಳಕ್ಕೆ ಜಿಲ್ಲಾಧಿಕಾರಿ ಬರಬೇಕು ಎಂದು ಪಟ್ಟು ಹಿಡಿದರು. ಹೆಚ್ಚುವರಿ ಜಿಲ್ಲಾಧಿಕಾರಿ ಬಿ.ಟಿ.ಕುಮಾರಸ್ವಾಮಿ ಸ್ಥಳಕ್ಕೆ ಬಂದು ಮನವಿ ಸ್ವೀಕರಿಸಿದರು.

ಸಿಡಿದೆದ್ದರೆ ಉಗ್ರ ರೂಪ ನೋಡ್ತೀರಿ...

‘ನಮ್ಮ ಸಮುದಾಯ ಅತ್ಯಂತ ಸ್ವಾಭಿಮಾನದಿಂದ ಬದುಕುವ ಸಮುದಾಯವಾಗಿದೆ. ಹೋರಾಟದ ಸರ್ಕಾರವನ್ನು ಎಚ್ಚರಗೊಳಿಸುವ ಕೆಲಸ ಮಾಡುತ್ತಿದ್ದೇವೆ. ನಾವು ಸಿಡಿದೆದ್ದರೆ ಉಗ್ರರೂಪ ನೋಡಬೇಕಾಗುತ್ತದೆ. ಹೂವು ಆರಿಸಿಕೊಳ್ಳುವುದು ನಮಗೆ ಗೊತ್ತಿದೆ ಅದೇ ರೀತಿ ಕಲ್ಲು ಆರಿಸುವುದೂ ಚೆನ್ನಾಗಿ ಗೊತ್ತಿದೆ’ ಎಂದು ಮಾಜಿ ಶಾಸಕ ಪಿ.ರಾಜೀವ್‌ ಎಚ್ಚರಿಕೆ ನೀಡಿದರು.

‘ಕ್ರಿಮಿ– ಕೀಟಗಳಿಗೂ ಒಳ್ಳೆಯದಾಗಲಿ ಎಂದು ನಮ್ಮ ಸಮುದಾಯ ಪ್ರಾರ್ಥನೆ ಮಾಡುತ್ತದೆ. ಇಲ್ಲಿಯವರೆಗೂ ನಮ್ಮ ಸಮುದಾಯವನ್ನು ಕರೆದು ಮಾತನಾಡುವ ಕೆಲಸವನ್ನು ಸರ್ಕಾರ ಮಾಡಿಲ್ಲ. ಅಲೆಮಾರಿ ಸಮುದಾಯಕ್ಕೆ ನ್ಯಾಯ ಸಿಗಬೇಕು. ಅಲೆಮಾರಿ ಸಮುದಾಯದ ಜೊತೆ ಚೆಲ್ಲಾಟವಾಡುವ ಕಾಂಗ್ರೆಸ್ ಸರ್ಕಾರಕ್ಕೆ ಜನರು ತಕ್ಕ ಪಾಠ ಕಲಿಸುತ್ತಾರೆ. ಕಾಂಗ್ರೆಸ್‌ ಎಲ್ಲಿಗೆ ಎಂದು ದೀಪ ಹಿಡಿದುಕೊಂಡು ಹುಡುಕುವ ಸನ್ನಿವೇಶ ಬರಲಿದೆ’ ಎಂದರು. ‘ಸುಪ್ರೀಂ ಕೋರ್ಟ್ ಆದೇಶದಂತೆ ಒಳ ಮೀಸಲಾತಿ ಜಾರಿ ಮಾಡಬೇಕು. ಇಲ್ಲದಿದ್ದರೆ ನಮ್ಮ ಹೋರಾಟ ಉಗ್ರ ರೂಪ ಪಡೆಯಲಿದೆ. ಇದು ಆರಂಭವಷ್ಟೇ ಮುಂದಿನ ದಿನಗಳಲ್ಲಿ ರಾಜ್ಯ ಮಟ್ಟದ ಪ್ರತಿಭಟನೆಗೆ ಕರೆ ನೀಡಲಿದ್ದೇವೆ’ ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.