ಚಿತ್ರದುರ್ಗ: ‘ಮೀಸಲಾತಿಯಿಂದ ಯಾರೂ ವಂಚಿತರಾಗಬಾರದು. ಒಳಮೀಸಲಾತಿ ಕುರಿತು ಎಲ್ಲಿ ಬೇಕಾದರೂ ಚರ್ಚಿಸಲು ಸಿದ್ಧರಿದ್ದೇವೆ’ ಎಂದು ಉಪಮುಖ್ಯಮಂತ್ರಿ ಗೋವಿಂದ ಕಾರಜೋಳn ಸ್ಪಷ್ಟಪಡಿಸಿದರು.
ಮಾದಾರ ಚನ್ನಯ್ಯ ಗುರುಪೀಠಕ್ಕೆ ಶನಿವಾರ ರಾತ್ರಿ ಭೇಟಿ ನೀಡಿದ ನಂತರ ಮಾಧ್ಯಮದವರೊಂದಿಗೆ ಮಾತನಾ
ಡಿದ ಅವರು, ‘ಸಂವಿಧಾನದ ಆಶಯದಂತೆ 101 ಜಾತಿಗಳಿಗೂ ಮೀಸಲಾತಿ ಸಿಗಬೇಕು ಎಂಬ ಆಶಯವಿದೆ. ಆದ್ದರಿಂದ ಸಾಮಾಜಿಕ ನ್ಯಾಯಕ್ಕೆ ನಮ್ಮ ಸರ್ಕಾರ ಬದ್ಧವಾಗಿದೆ. ಈ ಕುರಿತು ಸಂಪುಟದಲ್ಲಿ ಚರ್ಚೆ ನಡೆಸಲಿದ್ದೇವೆ’ ಎಂದು ತಿಳಿಸಿದರು.
‘ಆಂಧ್ರಪ್ರದೇಶದಲ್ಲಿ ಅಲ್ಲಿನ ಸರ್ಕಾರ ಒಳಮೀಸಲಾತಿ ಜಾರಿಗೆ ಮುಂದಾದ ವೇಳೆ ಸುಪ್ರೀಂಕೋರ್ಟ್ನ ಐವರು ಸದಸ್ಯರ ಪೀಠ ಒಪ್ಪಿರಲಿಲ್ಲ. ಆದರೆ, ಈಗ ಅದೇ ಕೋರ್ಟ್ನ ಐವರು ಸದಸ್ಯರ ಪೀಠ ಬುಟ್ಟಿಯಲ್ಲಿನ ಹಣ್ಣುಗಳು ಎಲ್ಲರ ಪಾಲಾಗಬೇಕು. ಬಲಾಢ್ಯರಿಗಷ್ಟೇ ಸಿಗಬಾರದು ಎಂದಿದೆ. ಅದಕ್ಕಾಗಿ ಒಳಮೀಸಲಾತಿ ಜಾರಿಯಾಗಬೇಕಿದೆ’ ಎಂದರು.
‘ಪರಿಶಿಷ್ಟ ಜಾತಿಯಲ್ಲಿ ಜನಿಸಿ, ಸಾವಿರಾರು ವರ್ಷಗಳಿಂದ ಶೋಷಣೆಗೆ ಒಳಗಾಗಿ ನೋವು ಅನುಭವಿಸಿದವರಿಗೆ ಮೀಸಲಾತಿ ನೀಡಿ ಸಮಾಜದ ಮುಖ್ಯವಾಹಿನಿಗೆ ತರಲು ಅಂಬೇಡ್ಕರ್ ಸಂವಿಧಾನದಲ್ಲಿ ಮೀಸಲಾತಿ ಕಲ್ಪಿಸಿದ್ದಾರೆ. ಈ ಕುರಿತು ಅನಗತ್ಯ ಗೊಂದಲ ಸೃಷ್ಟಿಸುವುದು ಸರಿಯಲ್ಲ’ ಎಂದು ತಿಳಿಸಿದರು.
‘ಕೊರೊನಾ ವೈರಸ್ ನಿಯಂತ್ರಿಸುವಲ್ಲಿ ಸರ್ಕಾರ ಸಮರ್ಪಕವಾಗಿ ಕಾರ್ಯನಿರ್ವಹಿಸಿದೆ. ಇನ್ನೂ ಹಿಂದಿನ ವರ್ಷದ ಅತಿವೃಷ್ಠಿ ಪರಿಸ್ಥಿತಿ ವೇಳೆ ಬೆಳೆ ಹಾನಿಯಾದ ರೈತರಿಗೆ ₹ 10 ಸಾವಿರ ಹಾಗೂ ಮನೆ ಕಳೆದುಕೊಂಡವರಿಗೆ ವಸತಿ ಸೌಲಭ್ಯಕ್ಕಾಗಿ ಸರ್ಕಾರ ₹ 5 ಲಕ್ಷಪರಿಹಾರ ನೀಡಿದೆ. ಈ ಕೆಲಸಗಳು ಸಿದ್ದರಾಮಯ್ಯ ಅವರ ಕಣ್ಣಿಗೆ ಕಾಣುವುದಿಲ್ಲವೇ’ ಎಂದು ಪ್ರಶ್ನಿಸಿದರು.
‘ನಾವು ಯಾರನ್ನೋ ಆರೋಪಿ ಸ್ಥಾನದಲ್ಲಿ ನಿಲ್ಲಿಸಲು ತಯಾರಿಲ್ಲ. ತನಿಖೆ ನಡೆದು ಆರೋಪ ಸಾಬೀತಾದವರು ಶಿಕ್ಷೆ ಅನುಭವಿಸಲಿದ್ದಾರೆ’ ಎಂದು ಜಮೀರ್ ಅಹ್ಮದ್ ಕುರಿತ ಪ್ರಶ್ನೆಗೆ ಈ ರೀತಿ ಪ್ರತಿಕ್ರಿಯಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.