ಚಿತ್ರದುರ್ಗ: ಸ್ವಾತಂತ್ರ್ಯ ಹೋರಾಟಗಾರ ಎಚ್.ಎಸ್.ದೊರೆಸ್ವಾಮಿ ಅವರ ಬಗ್ಗೆ ಬಿಜೆಪಿ ಶಾಸಕ ಬಸವನಗೌಡ ಪಾಟೀಲ ಯತ್ನಾಳ್ ಮಾಡಿದ ಆರೋಪಕ್ಕೆ ಸಾಣೇಹಳ್ಳಿಯ ತರಳಬಾಳು ಶಾಖಾ ಮಠದ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಈ ಕುರಿತು ಸ್ವಾಮೀಜಿ ಆಡಿದ ಮಾತುಗಳ ವಿಡಿಯೊ ತುಣುಕು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ‘ದೊರೆಸ್ವಾಮಿ ಬಗ್ಗೆ ಹಗುರವಾಗಿ ಮಾತನಾಡಿದ್ದನ್ನು ಕೇಳಿ ತುಂಬಾ ಬೇಸರವಾಗಿದೆ. ಅವರು ಇಂತಹ ತೆಗಳಿಕೆಗೆ ಮನ್ನಣೆ ನೀಡುವುದಿಲ್ಲ’ ಎಂದು ಸ್ವಾಮೀಜಿ ಹೇಳಿದ್ದಾರೆ.
‘ಹಿರಿಯ ಸ್ವಾತಂತ್ರ್ಯ ಹೋರಾಟಗಾರ ಎಚ್.ಎಸ್.ದೊರೆಸ್ವಾಮಿ ಸುಸಂಸ್ಕೃತ ವ್ಯಕ್ತಿ. ವಯಸ್ಸು, ಅನುಭವ ಹಾಗೂ ಜ್ಞಾನದಲ್ಲಿ ಹಿರಿಯರು. ಯಾರಿಗೂ ಕೇಡು ಬಯಸದ ನಿರುಪದ್ರವಿ. ಸಮಾಜದಲ್ಲಿರುವ ಅನ್ಯಾಯಗಳ ವಿರುದ್ಧ ಪ್ರತಿಭಟನೆ ಮಾಡುವ ಮನೋಭಾವದವರು. ಇಂತಹ ಹಿರಿಯರ ಬಗ್ಗೆ ಅವಹೇಳ ಮಾಡುವುದು ತಮ್ಮ ವ್ಯಕ್ತಿತ್ವಕ್ಕೆ ತಾವೇ ಕಳಂಕ ಅಂಟಿಸಿಕೊಂಡಂತೆ’ ಎಂದು ಯತ್ನಾಳ್ ಹೆಸರು ಉಲ್ಲೇಖಿಸದೇ ಕಿಡಿಕಾರಿದ್ದಾರೆ.
‘ದೊರೆಸ್ವಾಮಿ ಅವರಂತಹ ಹಿರಿಯ ಜೀವಿಗಳು ಆನೆ ಇದ್ದಂತೆ. ಆನೆ ನಡೆದಾಡುವಾಗ ನಾಯಿ ಬೊಗಳಿದರೆ ಆನೆಗೆ ಯಾವ ತೊಂದರೆಯೂ ಆಗುವುದಿಲ್ಲ ಎಂಬುದನ್ನು ದೊರೆಸ್ವಾಮಿ ಬಗ್ಗೆ ಮಾತನಾಡುವವರು ಗಮನಿಸಬೇಕು’ ಎಂದು ಹೇಳಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.