
ಹಿರಿಯೂರು: ‘ಎಳ್ಳು– ಬೆಲ್ಲ ಸವಿದಂತೆ ಸಂಕ್ರಾಂತಿ ಸರ್ವರ ಬದುಕಿನಲ್ಲಿ ಸುಖ– ಶಾಂತಿ, ಸಂಭ್ರಮ ನೆಲೆಸುವಂತೆ ಮಾಡಲಿ’ ಎಂದು ಶಾರದಾಶ್ರಮದ ಮಾತಾಜಿ ಚೈತನ್ಯಮಯಿ ಆಶಯ ವ್ಯಕ್ತಪಡಿಸಿದರು.
ನಗರದ ನಂಜಯ್ಯನಕೊಟ್ಟಿಗೆ ಬಡಾವಣೆಯಲ್ಲಿರುವ ಒಕ್ಕಲಿಗರ ಸಂಘದ ವಿದ್ಯಾರ್ಥಿನಿಲಯದಲ್ಲಿ ಗುರುವಾರ ತಾಲ್ಲೂಕು ಒಕ್ಕಲಿಗರ ಸಂಘದ ಮಹಿಳಾ ವಿಭಾಗದಿಂದ ಹಮ್ಮಿಕೊಂಡಿದ್ದ ಸಂಕ್ರಾಂತಿ ಹಬ್ಬದಲ್ಲಿ ಅವರು ಮಾತನಾಡಿದರು.
‘ವರ್ಷದ ಮೊದಲ ಹಬ್ಬವಾದ ಸಂಕ್ರಾಂತಿ ದ್ರಾವಿಡ ಆಚರಣೆಯ ಪ್ರಕಾರ ಹೊಸ ವರ್ಷದ ಆರಂಭ. ಚಳಿಯನ್ನು ಕಳೆದು ಪ್ರಕೃತಿಯಲ್ಲಿ ಹೊಸ ಚೈತನ್ಯವನ್ನು ಮೂಡಿಸುವ ಹಬ್ಬ. ಇಡೀ ವರ್ಷ ಸುಖ, ನೆಮ್ಮದಿ, ಶಾಂತಿ, ಹರುಷದ ಕ್ರಾಂತಿ ನಡೆಯಲಿ’ ಎಂದು ತಿಳಿಸಿದರು.
‘ಹಿರಿಯೂರು ತಾಲ್ಲೂಕಿನಲ್ಲಿ ವ್ಯವಸಾಯಕ್ಕೆ ಬಳಸುವ ಎತ್ತು, ದನಕರುಗಳು ಸೇರಿ ಸಾಕು ನಾಯಿಯವರೆಗೆ ಎಲ್ಲ ಪ್ರಾಣಿಗಳನ್ನೂ ಪೂಜಿಸುವುದು, ಈ ಪ್ರಾಣಿಗಳನ್ನು ಸಲಹುವವರಿಗೆ ಹೊಸಬಟ್ಟೆ ಕೊಡುವ ಸಂಪ್ರದಾಯ ಜಾರಿಯಲ್ಲಿದೆ. ಈ ವಿಶೇಷ ಹಬ್ಬ ವರ್ಷವಿಡೀ ಸರ್ವರಿಗೂ ಸಂತಸ ತರಲಿ’ ಎಂದು ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಸಂಘದ ಅಧ್ಯಕ್ಷೆ ಮಮತಾ ಕೃಷ್ಣಮೂರ್ತಿ ಹೇಳಿದರು.
ಮಾನಸ ಮಂಜುನಾಥ್, ಸೌಭಾಗ್ಯಾ ಸೂಗೂರು, ವಾಣಿಮಹಲಿಂಗಪ್ಪ, ಛಾಯಾ ನಾಗೇಂದ್ರಗೌಡ, ಜ್ಞಾನೇಶ್ವರಿ ತಿಪ್ಪೇಸ್ವಾಮಿ, ಅರುಣ ಶಿವಣ್ಣ, ಹೇಮಲತಾ ವಸಂತ್, ಆಲೂರು ಗೀತಾ, ಕುಸುಮಾ ಪ್ರಸಾದ್, ವನಿತಾ ಮಂಜುನಾಥ್, ಕುಸುಮಾ ಯೋಗೇಶ್, ರಮ್ಯಾ ರಾಜು, ಕಲ್ಪನಾಶೇಖರ್, ವೀಣಾ ರಾಧಾಕೃಷ್ಣ, ರಾಜೇಶ್ವರಿ ಶಾಂತಪ್ಪ, ನೇತ್ರ ಮಂಜುನಾಥ್, ಪೂಜಾ ರಂಜಿತ್, ಪ್ರೇಮಾ ರಾಜು, ಪಿಟ್ಲಾಲಿ ತೇಜಸ್ವಿನಿ ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.