ADVERTISEMENT

ಚಿತ್ರದುರ್ಗ: ಶಾಲಾ ಪ್ರಾರಂಭೋತ್ಸವಕ್ಕೆ ಮುಂಗಾರು ಸಿಂಚನ

ಕೆ.ಪಿ.ಓಂಕಾರಮೂರ್ತಿ
Published 29 ಮೇ 2025, 7:04 IST
Last Updated 29 ಮೇ 2025, 7:04 IST
<div class="paragraphs"><p>ಚಿತ್ರದುರ್ಗ ನಗರದ ವಿಪಿ ಬಡಾವಣೆಯ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಬುಧವಾರ ಅಡುಗೆ ಮನೆ ಸ್ವಚ್ಛಗೊಳಿಸಿದ ಸಿಬ್ಬಂದಿ&nbsp;</p></div>

ಚಿತ್ರದುರ್ಗ ನಗರದ ವಿಪಿ ಬಡಾವಣೆಯ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಬುಧವಾರ ಅಡುಗೆ ಮನೆ ಸ್ವಚ್ಛಗೊಳಿಸಿದ ಸಿಬ್ಬಂದಿ 

   

– ಪ್ರಜಾವಾಣಿ ಚಿತ್ರ/ ವಿ.ಚಂದ್ರಪ್ಪ

ಚಿತ್ರದುರ್ಗ: ಬೇಸಿಗೆ ರಜೆಯ ಮಜಾ ಅನುಭವಿಸಿರುವ ವಿದ್ಯಾರ್ಥಿಗಳು ಶಾಲೆಯ ಅಂಗಳ ಪ್ರವೇಶಿಸಲು ಕ್ಷಣಗಣನೆ ಶುರುವಾಗಿದೆ. ವಿದ್ಯಾರ್ಥಿಗಳನ್ನು 2025–26ನೇ ಸಾಲಿನ ಶೈಕ್ಷಣಿಕ ವರ್ಷಕ್ಕೆ ಸ್ವಾಗತಿಸಲು ಶಿಕ್ಷಣ ಇಲಾಖೆ ಸಿಬ್ಬಂದಿ ನವೋಲ್ಲಾಸದಿಂದ ಸಿದ್ಧತೆ ನಡೆಸಿದೆ.

ADVERTISEMENT

ಕಳೆದೊಂದು ವಾರದಿಂದ ಬಿರುಸಾಗಿದ್ದ ಮಳೆರಾಯ ಶಾಲಾ ಪ್ರಾರಂಭದ ವೇಳೆಗೆ ಮೌನಕ್ಕೆ ಶರಣಾಗಿದ್ದಾನೆ. ಆದರೂ ರಾಗಿ ಕಾಳಿನಂತಹ ಹನಿ ಬೀಳುತ್ತಿವೆ. ಗುರುವಾರ ತರಗತಿಗೆ ಕಾಲಿಡಲು ಚಿಣ್ಣರು ಅಣಿಯಾಗುತ್ತಿದ್ದಾರೆ.

ಗುರುವಾರ ಶಾಲೆಗಳ ಬಾಗಿಲು ತೆರೆಯುತ್ತಿರುವುದರಿಂದ ಇಲಾಖೆ ಸೂಚನೆಯಂತೆ 15 ದಿನಗಳಿಂದ ಶಾಲಾ ಸಿಬ್ಬಂದಿ ಸಿದ್ಧತೆ ಪ್ರಾರಂಭಿಸಿದ್ದರು. ಬುಧವಾರ ಸ್ವಚ್ಛತಾ ಕಾರ್ಯ ಮತ್ತಷ್ಟು ಬಿರುಸು ಪಡೆದಿತ್ತು. ಸಿಬ್ಬಂದಿ ಜತೆ ಕೈ ಜೋಡಿಸಿರುವ ಶಿಕ್ಷಕರು ಶಾಲಾ ಆವರಣ, ತರಗತಿ ಕೋಣೆ, ಅಡುಗೆಮನೆ, ಶೌಚಾಲಯ ಹಾಗೂ ನೀರಿನ ಸಿಂಟೆಕ್ಸ್‌, ಅಡುಗೆ ಪರಿಕರ ಸ್ವಚ್ಛತೆ ಹಾಗೂ ಶಾಲೆಗಳ ಮೇಲ್ಛಾವಣಿ ಮೇಲಿರುವ ಕಸ ತೆಗೆದು ಸ್ವಚ್ಛತೆ ಕಾರ್ಯ ನಡೆಸಿದರು.

ಗ್ರಾಮೀಣ ಭಾಗದಲ್ಲಿ ಮಕ್ಕಳ ಜತೆ ಗ್ರಾಮಗಳ ಓಣಿ–ಓಣಿಗಳಲ್ಲಿ ಸಂಚರಿಸಿದ ಶಿಕ್ಷಕರು ಶಾಲಾ ಪ್ರಾರಂಭ ಹಾಗೂ ವಿಶೇಷ ದಾಖಲಾತಿ ಆಂದೋಲನ ನಡೆಸಿದರು. ಶಾಲಾ ಕಟ್ಟಡಗಳಿಗೆ ತಳಿರು– ತೋರಣ, ಆವರಣದಲ್ಲಿ ರಂಗೋಲಿ ಬಿಡಿಸಿ ಸ್ವಾಗತಕ್ಕೆ ವಿಶೇಷ ಸಿದ್ಧತೆ ನಡೆಸಿದ್ದಾರೆ.

ಶಾಲಾ ಪ್ರಾರಂಭೋತ್ಸವದ ಮೊದಲ ದಿನದಿಂದಲೇ ಬಿಸಿಯೂಟ ಹಾಗೂ ಮೊಟ್ಟೆ, ಬಾಳೆಹಣ್ಣು, ರಾಗಿ ಮಾಲ್ಟ್‌ ವಿತರಿಸಲು ಕ್ರಮ ವಹಿಸಲಾಗಿದೆ. 2025-26ನೇ ಸಾಲಿನಿಂದ ರಾಗಿ ಮಾಲ್ಟ್‌ ಅನ್ನು ವಾರದ ಐದು ದಿನಗಳ ಕಾಲ ಮಕ್ಕಳಿಗೆ ನೀಡಲು ಶಾಲಾ ಶಿಕ್ಷಣ ಇಲಾಖೆ ಕ್ರಮ ಕೈಗೊಂಡಿದೆ. ಜತೆಗೆ ಪಠ್ಯಪುಸ್ತಕಗಳನ್ನು ಶಾಲೆಗಳಿಗೆ ಸರಬರಾಜು ಮಾಡಲು ಸರ್ಕಾರ ಸಾಕಷ್ಟು ಮುಂಚಿತವಾಗಿಯೇ ಕ್ರಮ ಕೈಗೊಂಡಿದೆ. ಶೇ.100ರಷ್ಟು ಪಠ್ಯಪುಸ್ತಕಗಳನ್ನು ಶಾಲೆಗಳಿಗೆ ತಲುಪಿಸಿರುವುದು ಈ ಬಾರಿಯ ವಿಶೇಷ.

ಕಿರಿಯ ಪ್ರಾಥಮಿಕ ಶಾಲೆ, ಹಿರಿಯ ಪ್ರಾಥಮಿಕ ಶಾಲೆ ಹಾಗೂ ಪ್ರೌಢಶಾಲೆಗಳು ಸೇರಿ ಜಿಲ್ಲೆಯಲ್ಲಿ 1,751 ಸರ್ಕಾರಿ, 275 ಅನುದಾನಿತ ಹಾಗೂ 390 ಅನುದಾನ ರಹಿತ ಶಾಲೆಗಳು ಇವೆ. 2024-25ನೇ ಸಾಲಿನಲ್ಲಿ ಚಳ್ಳಕೆರೆ ತಾಲ್ಲೂಕಿನಲ್ಲಿ 27,920, ಚಿತ್ರದುರ್ಗ 24,267, ಹಿರಿಯೂರು 18,877, ಹೊಳಲ್ಕೆರೆ 11,750,ಹೊಸದುರ್ಗ 13,354 ಹಾಗೂ ಮೊಳಕಾಲ್ಮುರು ತಾಲ್ಲೂಕಿನಲ್ಲಿ 17,663 ಸೇರಿದಂತೆ ಜಿಲ್ಲೆಯಲ್ಲಿ 1,13,831 ವಿದ್ಯಾರ್ಥಿಗಳು ನೋಂದಣಿಯಾಗಿದ್ದರು.

ಮೇ 27ರಿಂದ ವಿಶೇಷ ದಾಖಲಾತಿ ಆಂದೋಲನ ಪ್ರಾರಂಭವಾಗಿದ್ದು, 31ರವರೆಗೆ ವಿಶೇಷವಾಗಿ ಎಲ್ಲ ಗ್ರಾಮಗಳಲ್ಲಿಯೂ ದಾಖಲಾತಿ ಆಂದೋಲನ ನಡೆಸಲಾಗುತ್ತದೆ. ಜೂನ್‌ 2ರಿಂದ 30ರವರೆಗೆ ಸಾಮಾನ್ಯ ದಾಖಲಾತಿ ಆಂದೋಲನ ಅನುಷ್ಠಾನ ಮಾಡಲಾಗುವುದು.

ಜಿಲ್ಲೆಯ ಅನುದಾನರಹಿತ ಶಾಲೆಗಳು ಈಗಾಗಲೇ ಪ್ರಾರಂಭವಾಗಿವೆ. ಶಾಲೆಗಳಲ್ಲೇ ಪಠ್ಯಪುಸ್ತಕ, ನೋಟ್‌ ಪುಸ್ತಕ, ಲೇಖನ ಸಾಮಗ್ರಿ ಬ್ಯಾಗ್‌, ಶೂ, ಸಮವಸ್ತ್ರ ವಿತರಿಸಲಾಗುತ್ತಿದೆ. ಸರ್ಕಾರಿ ಶಾಲೆಗಳಲ್ಲಿ ಸಕಲ ಸೌಲಭ್ಯ ನೀಡುತ್ತಿರುವುದರಿಂದ ಪಾಲಕರಿಗೆ ಆರ್ಥಿಕ ಹೊರೆ ಇಲ್ಲ

ಜಿಲ್ಲೆಯಾದ್ಯಂತ ಏಕಕಾಲಕ್ಕೆ ಶಾಲಾ ಪ್ರಾರಂಭೋತ್ಸವ ನಡೆಯಲಿದೆ. ಎಸ್‌ಎಸ್‌ಎಲ್‌ಸಿ ಫಲಿತಾಂಶ ಹೆಚ್ಚಿಸಲು ಶಾಲಾ ಪ್ರಾರಂಭದ ದಿನದಿಂದಲೇ ವಿಶೇಷ ಕ್ರಿಯಾ ಯೋಜನೆ ರೂಪಿಸಿ ವಿಶೇಷ ತರಗತಿ ನಡೆಸಲಾಗುತ್ತದೆ.
ಎಂ.ಆರ್‌.ಮಂಜುನಾಥ್‌ ಉಪನಿರ್ದೇಶಕರು ಶಾಲಾ ಶಿಕ್ಷಣ ಇಲಾಖೆ

ಮೆದೇಹಳ್ಳಿ ಶಾಲೆಯಲ್ಲಿ ಉದ್ಘಾಟನೆ

ಚಿತ್ರದುರ್ಗ ತಾಲ್ಲೂಕಿನ ಮೆದೇಹಳ್ಳಿ ಸರ್ಕಾರಿ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಗುರುವಾರ ಶಾಲಾ ಪ್ರಾರಂಭೋತ್ಸವದ ಉದ್ಘಾಟನಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಬೆಳಿಗ್ಗೆ 10ಕ್ಕೆ ಶಾಸಕ ಕೆ.ಸಿ.ವೀರೇಂದ್ರ ಶಾಲಾ ಪ್ರಾರಂಭೋತ್ಸವ ಕಾರ್ಯಕ್ರಮ ಉದ್ಘಾಟಿಸಲಿದ್ದು ಮೆದೇಹಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಕೆ.ಎನ್‌. ಕಾವ್ಯಾ ಅಧ್ಯಕ್ಷತೆ ವಹಿಸುವರು. ಅತಿಥಿಗಳಾಗಿ ಜಿಲ್ಲಾಧಿಕಾರಿ ಟಿ.ವೆಂಕಟೇಶ್‌ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎಸ್‌.ಜೆ. ಸೋಮಶೇಖರ್‌ ಹೆಚ್ಚುವರಿ ಜಿಲ್ಲಾಧಿಕಾರಿ ಬಿ.ಟಿ. ಕುಮಾರಸ್ವಾಮಿ ಶಾಲಾ ಶಿಕ್ಷಣ ಇಲಾಖೆ ಉಪನಿರ್ದೇಶಕ ಎಂ.ಆರ್‌. ಮಂಜುನಾಥ್ ಕ್ಷೇತ್ರ ಶಿಕ್ಷಣಾಧಿಕಾರಿ ಎಸ್‌.ನಾಗಭೂಷಣ್ ಬಿಆರ್‌ಸಿ ಈ.ಸಂಪತ್‌ ಕುಮಾರ್‌ ಅಕ್ಷರ ದಾಸೋಹ ಸಹಾಯಕ ನಿರ್ದೇಶಕ ಎಚ್‌.ಗುರುರಾಜ್‌ ಭಾಗವಹಿಸಲಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.