ಮೊಳಕಾಲ್ಮುರು: ತಾಲ್ಲೂಕಿನ ರಾಂಪುರ ಸಮೀಪದ ವಡೇರಹಳ್ಳಿಯ ಜಮೀನೊಂದರ ಮೇಲೆ ಪೊಲೀಸರು ಈಚೆಗೆ ದಾಳಿ ನಡೆಸಿ ವಶಕ್ಕೆ ಪಡೆದುಕೊಂಡಿರುವ ಅಕ್ರಮ ಗಾಂಜಾ ಬೆಳೆಯನ್ನು ಕಟಾವು ಮಾಡಲಾಗುತ್ತಿದೆ.
‘4.20 ಎಕರೆ ಪ್ರದೇಶದಲ್ಲಿ ಬೆಳೆದಿರುವ ಗಾಂಜಾವನ್ನು ಕಟಾವು ಮಾಡಲಾಗುತ್ತಿದ್ದು, 9,800 ಕೆ.ಜಿ ಗಾಂಜಾ ಬೆಳೆದಿರಬಹುದು ಎಂದು ಅಂದಾಜಿಸಲಾಗಿದೆ. ಜಮೀನು ವಶಕ್ಕೆ ಪಡೆದ ಮರುದಿನದಿಂದಲೇ ಗಿಡಗಳನ್ನು ಕಟಾವು ಮಾಡಿಸಲಾಗುತ್ತಿದೆ. ಕೂಲಿ ಕಾರ್ಮಿಕರು ಈ ಕೆಲಸ ಮಾಡುತ್ತಿದ್ದಾರೆ’ ಎಂದು ಪಿಎಸ್ಐ ಗುಡ್ಡಪ್ಪ ತಿಳಿಸಿದರು.
ಪ್ರತಿ ಬಂಡಲ್ನಲ್ಲಿ 50 ಗಿಡಗಳನ್ನು ಕಟ್ಟಲಾಗಿದೆ. ಈವರೆಗೆ 165 ಬಂಡಲ್ಗಳನ್ನು ಮಾಡಲಾಗಿದೆ. ಪೂರ್ತಿ ಒಣಗಿದ ನಂತರ ನಿಖರ ತೂಕ ಗೊತ್ತಾಗಲಿದೆ. ಸದ್ಯ ಮಾರುಕಟ್ಟೆಯಲ್ಲಿ ಪ್ರತಿ ಕೆ.ಜಿ ಗಾಂಜಾ ಬೆಲೆ ₹ 1000 ಇದೆ. ಇಲ್ಲಿ ಒಂದು ಕೋಟಿ ರೂಪಾಯಿಗೂ ಹೆಚ್ಚು ಮೌಲ್ಯದ ಗಾಂಜಾ ಬೆಳೆಯನ್ನು ವಶಕ್ಕೆ ಪಡೆಯಲಾಗಿದೆ. ಜಿಲ್ಲೆ ಮಟ್ಟಿಗೆ ದೊಡ್ಡ ಪ್ರಮಾಣದಲ್ಲಿ ಗಾಂಜಾ ವಶಕ್ಕೆ ಪಡೆದಿರುವ ಪ್ರಕರಣದ ಇದಾಗಿದೆ. ಸ್ಥಳೀಯ ಪೊಲೀಸರ ಕಾರ್ಯವನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕರಿ ರಾಧಿಕಾ ಶ್ಲಾಘಿಸಿದ್ದಾರೆ.
‘ಸದ್ಯ ಕಟಾವು ಮಾಡಿರುವ ಗಾಂಜಾವನ್ನು ಹೊಲದಲ್ಲಿಯೇ ದಾಸ್ತಾನು ಮಾಡಲಾಗಿದೆ. ಇದಕ್ಕೆ ಅಗತ್ಯ ಪೊಲೀಸ್ ಭದ್ರತೆ ಒದಗಿಸಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ವರು ಆರೋಪಿಗಳನ್ನು ವಶಕ್ಕೆ ಪಡೆದು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ’ ಎಂದು ಪೊಲೀಸರು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.