ಭರಮಸಾಗರ: ಹೋಬಳಿಯ ಸಿರಿಗೆರೆ–ಹೊಸರಂಗಾಪುರ ಬಳಿಯ ಗೋಮಾಳದ ಸಮೀಪ ಗಂಗಾಧರಪ್ಪ ಎಂಬುವವರ ಅಡಿಕೆ ತೋಟದಲ್ಲಿ ಕುರಿಗಾಹಿಯೊಬ್ಬರನ್ನುದುಷ್ಕರ್ಮಿಗಳು ಕೊಲೆ ಮಾಡಿ ಐದು ಕುರಿಗಳನ್ನು ಕಳವು ಮಾಡಿದ್ದು, ನಾಲ್ಕು ದಿನಗಳ ನಂತರ ಪ್ರಕರಣ ಬೆಳಕಿಗೆ ಬಂದಿದೆ.
ರಾಮಜ್ಜ (60) ಕೊಲೆಯಾದವರು. ಅವರನ್ನು ಕೊಲೆ ಮಾಡಿ ದೇಹವನ್ನು ಅಡಿಕೆ ಗರಿಗಳಿಂದ ಮುಚ್ಚಿ ದುಷ್ಕರ್ಮಿಗಳು ಪರಾರಿಯಾಗಿದ್ದರು. ಬುಧವಾರ ತೋಟದ ಕಾರ್ಮಿಕ ನೋಡಿದಾಗ ಅಡಿಕೆ ಗರಿಗಳ ಒಳಗೆರಾಮಜ್ಜ ಅವರ ಶವ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದೆ.
ಪ್ರಕರಣದ ವಿವರ: ಸಿರಿಗೆರೆಯ ರುದ್ರಮ್ಮ ಜಯಪ್ಪ ಅವರ ಕುರಿಗಳನ್ನು ರಾಮಜ್ಜ ದಿನಗೂಲಿ ಆಧಾರದಲ್ಲಿ ಕಾಯುತ್ತಿದ್ದರು. ಏ.10ರಂದು ಕುರಿ ಕಾಯಲು ಹೋಗಿದ್ದರು. ಆದರೆ, ಸಂಜೆ ಎಷ್ಟು ಹೊತ್ತಾದರೂ ರಾಮಜ್ಜ ಬರಲಿಲ್ಲ. ಕುರಿಗಳು ಮಾತ್ರ ಮರಳಿದ್ದು, ಅದರಲ್ಲಿ 5 ಕುರಿಗಳು ಕಾಣೆಯಾಗಿದ್ದವು. ರಾಮಜ್ಜ ಹಾಗೂ ಕುರಿಗಳ ಹುಡುಕಾಟ ನಡೆಸಿದ್ದರೂ ಪತ್ತೆಯಾಗಿರಲಿಲ್ಲ.
ಬುಧವಾರ ಬೆಳಿಗ್ಗೆ ತೋಟದ ಬಳಿಕೊಳೆತ ವಾಸನೆ ಬರುತ್ತಿದ್ದನ್ನು ಗಮನಿಸಿದ ಕಾರ್ಮಿಕ ಚಂದ್ರಪ್ಪ ಅಡಿಕೆ ಗರಿಗಳನ್ನು ತೆಗೆದಾಗ ಶವ ಪತ್ತೆಯಾಗಿದೆ.
‘ಕುರಿಗಳನ್ನು ಕದ್ದಿರುವ ದುಷ್ಕರ್ಮಿಗಳೇ ಕೊಲೆ ಮಾಡಿರಬಹುದು’ ಎಂದು ರುದ್ರಮ್ಮ ದೂರಿನಲ್ಲಿ ತಿಳಿಸಿದ್ದಾರೆ. ಪ್ರಕರಣ ದಾಖಲಾಗಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.