ಚಿತ್ರದುರ್ಗ: ಪೋಕ್ಸೊ ಪ್ರಕರಣಗಳ ಪ್ರಮುಖ ಆರೋಪಿ ಶಿವಮೂರ್ತಿ ಶರಣರು ಗುರುವಾರ 2ನೇ ಹೆಚ್ಚುವರಿ ಜಿಲ್ಲಾ ಮತ್ತು ಸಿವಿಲ್ ನ್ಯಾಯಾಲಯದ ಎದುರು ಖುದ್ದು ಹಾಜರಾಗಿ ಸಂತ್ರಸ್ತೆಯರ ಆರೋಪ ಹಾಗೂ ಸಾಕ್ಷ್ಯಗಳ ವಿಚಾರಣೆ ಸಂಬಂಧ ತಮ್ಮ ಹೇಳಿಕೆ ದಾಖಲಿಸಿದರು.
ದಾವಣಗೆರೆ ವಿರಕ್ತ ಮಠದಿಂದ ಬಂದ ಅವರು 2ನೇ ಹೆಚ್ಚುವರಿ ಜಿಲ್ಲಾ ಮತ್ತು ಸಿವಿಲ್ ನ್ಯಾಯಾಲಯದ ನ್ಯಾಯಾಧೀಶ ಚನ್ನಬಸಪ್ಪ ಹಡಪದ ಅವರ ಎದುರು ಹಾಜರಾದರು. ಪ್ರಕಟಣಗಳ ಪಟ್ಟಿ ಮಾಡಿದ ನ್ಯಾಯಾಧೀಶರು ಮಧ್ಯಾಹ್ನಕ್ಕೆ ಸಮಯ ನಿಗದಿಗೊಳಿಸಿದರು. ಅಲ್ಲಿಯವರೆಗೂ ಶರಣರು ಕೋರ್ಟ್ ಕಾರಿಡಾರ್ನಲ್ಲಿ ಕುಳಿತಿದ್ದರು. ಮಧ್ಯಾಹ್ನ 12.30ರಿಂದ ಸಂಜೆ 5.15ರವರೆಗೂ ಸಂತ್ರಸ್ತೆಯರ ಎಲ್ಲಾ ಆರೋಪಗಳಿಗೂ ಶರಣರು ತಮ್ಮ ಹೇಳಿಕೆ ದಾಖಲಿಸಿದರು.
ಶರಣರ ವಿರುದ್ಧ ದಾಖಲಾಗಿರುವ 2 ಪೋಕ್ಸೊ ಪ್ರಕರಣಗಳ ಪೈಕಿ ಮೊದಲ ಪ್ರಕರಣಕ್ಕೆ ಹೇಳಿಕೆ ಪಡೆಯಲಾಯಿತು. ಪ್ರಕರಣಕ್ಕೆ 2 ಭಾಗಗಳಲ್ಲಿ ಚಾರ್ಜ್ಶೀಟ್ ಸಲ್ಲಿಸಲಾಗಿದ್ದು ಮೊದಲ ಭಾಗದ (ಚಾರ್ಜ್ಶೀಟ್ ಸಂಖ್ಯೆ 181/22) ಆರೋಪಗಳಿಗೆ ಹೇಳಿಕೆ ದಾಖಲು ಮಾಡಿಕೊಳ್ಳಲಾಯಿತು. ಇನ್ನೊಂದು ಭಾಗದ (ಚಾರ್ಜ್ಶೀಟ್ ಸಂಖ್ಯೆ 182/22) ಹೇಳಿಕೆ ಪಡೆಯುವ ದಿನಾಂಕವನ್ನು ಜುಲೈ 10ಕ್ಕೆ ನಿಗದಿಗೊಳಿಸಲಾಯಿತು.
ಚಾರ್ಜ್ಶೀಟ್ ಆರೋಪ, 51 ಸಾಕ್ಷ್ಯಗಳ ವಿಚಾರಣೆ ಬಗ್ಗೆ ಕೋರ್ಟ್ಹಾಲ್ನಲ್ಲಿ ಓದಿ ಹೇಳಲಾಯಿತು. ಇದಕ್ಕೆ ಶರಣರು ತಮ್ಮ ಹೇಳಿಕೆಗಳನ್ನು ದಾಖಲು ಮಾಡಿದರು. ಪ್ರಕರಣಗಳ ಪ್ರಮುಖ ಅಂಶಗಳ ಬಗ್ಗೆ ನ್ಯಾಯಾಧೀಶರು ಪ್ರಶ್ನೆ ಕೇಳಿ ಶರಣರಿಂದ ಉತ್ತರ ಪಡೆದರು.
2 ಪೋಕ್ಸೊ ಪ್ರಕರಣಗಳ ಸಂಬಂಧ ಶರಣರು ಸದ್ಯ ಷರತ್ತುಬದ್ಧ ಜಾಮೀನು ಪಡೆದಿದ್ದಾರೆ. ಜಾಮೀನು ನೀಡುವಾಗ ಶರಣರು ಚಿತ್ರದುರ್ಗ ಜಿಲ್ಲೆ ಪ್ರವೇಶಿಸುವಂತಿಲ್ಲ ಎಂದು ಹೈಕೋರ್ಟ್ ಆದೇಶಿಸಿತ್ತು. ಹೀಗಾಗಿ ಅವರು ಇಲ್ಲಿಯವರೆಗೂ ಜಿಲ್ಲಾ ನ್ಯಾಯಾಲಯದಲ್ಲಿ ನಡೆಯುತ್ತಿದ್ದ ವಿಚಾರಣಾ ಪ್ರಕ್ರಿಯೆಗೆ ವಿಡಿಯೊ ಸಂವಾದದ ಮೂಲಕ ಪಾಲ್ಗೊಳ್ಳುತ್ತಿದ್ದರು.
‘ವಿಚಾರಣೆ ಅಂತಿಮ ಹಂತಕ್ಕೆ ಬಂದಿರುವ ಹಿನ್ನೆಲೆಯಲ್ಲಿ ಶರಣರು ಕೋರ್ಟ್ಗೆ ಖುದ್ದು ಹಾಜರಾಗಿ ಹೇಳಿಕೆ ದಾಖಲಿಸುವಂತೆ ನ್ಯಾಯಾಧೀಶರು ಆದೇಶಿಸಿದ್ದರು. ಹೇಳಿಕೆ ಪ್ರಕ್ರಿಯೆ ಮುಗಿಸಿ ಅವರು ದಾವಣಗೆರೆಗೆ ಹಿಂದಿರುಗಿದರು’ ಎಂದು ವಕೀಲರು ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.