
ಚಿತ್ರದುರ್ಗ: ‘ಸಿದ್ದರಾಮೇಶ್ವರರು ವಚನ ಚಳವಳಿಯ ಬಹುದೊಡ್ಡ ಶಕ್ತಿ. ಕಲ್ಯಾಣದಲ್ಲಿ ಶರಣರ ಮೇಲೆ ನಡೆದ ರಕ್ತಸಿಕ್ತ ಹಿಂಸೆಯ ನಂತರದಲ್ಲಿ ವಚನ ಸಾಹಿತ್ಯ ಮತ್ತು ಚಳವಳಿಯ ಚಲನಶೀಲತೆಯನ್ನು ಕಾಪಾಡಿದ್ದು ಸಿದ್ದರಾಮೇಶ್ವರರು’ ಎಂದು ಭೋವಿ ಗುರುಪೀಠದ ಪೀಠಾಧ್ಯಕ್ಷ ಇಮ್ಮಡಿ ಸಿದ್ದರಾಮೇಶ್ವರ ಸ್ವಾಮೀಜಿ ಹೇಳಿದರು.
ನಗರದ ಹೊರವಲಯದಲ್ಲಿರುವ ಭೋವಿ ಗುರುಪೀಠದಲ್ಲಿ ಗುರುವಾರ ನಡೆದ ಸಿದ್ದರಾಮೇಶ್ವರ ಜಯಂತಿಯಲ್ಲಿ ಅವರು ಆಶೀರ್ವಚನ ನೀಡಿದರು.
‘ಸಿದ್ದರಾಮೇಶ್ವರರು ಶೈವ ಪರಂಪರೆಯಲ್ಲಿದ್ದಾಗ ‘ಸ್ಥಾವರದಲಿ ನಿಷ್ಠೆ, ಭೂತಂಗಳಲಿ ಅನುಕಂಪ, ತಾನೇ ಪರಬೊಮ್ಮ’ ಎಂಬ ಅಪರೂಪದ ತಾತ್ವಿಕ ನಿಲುವಿನವರಾಗಿದ್ದರು. ಮುಂದೆ ಪ್ರಭುವಿನ ಪ್ರಭಾವದಿಂದ ಬಸವ ಕಲ್ಯಾಣಕ್ಕೆ ಬಂದು ಶರಣತತ್ವದ ಕಬ್ಬಿನ ರಸವುಂಡ ಆನೆಯಂತಾಗುತ್ತಾರೆ. ಅವರಿಂದ ವಚನ ಸಾಹಿತ್ಯ ಸಮೃದ್ಧವಾಗುತ್ತದೆ’ ಎಂದು ಹೇಳಿದರು.
‘ಇಂದು ನಮ್ಮ ಕುಲಬಾಂಧವರೆಲ್ಲ ಸಿದ್ದರಾಮೇಶ್ವರರನ್ನು ಕುಲಗುರುಗಳಾಗಿ ಆರಾಧಿಸುತ್ತಿದ್ದಾರೆ. ಆರಾಧನೆ ಕೇವಲ ಕುರುಡು ಆಚರಣೆಯಾಗಬಾರದು ಎಂಬ ಅಪೇಕ್ಷೆಯೊಂದಿಗೆ, ನಮ್ಮ ಗುರುಪೀಠದಿಂದ ಸಾಂಸ್ಕೃತಿಕವಾಗಿ ಸಿದ್ದರಾಮೇಶ್ವರರ ಮೌಲ್ಯಗಳ ಪ್ರಚಾರ ಮಾಡಲಾಗುತ್ತಿದೆ’ ಎಂದರು.
ಕಾರ್ಯಕ್ರಮ ಉದ್ಘಾಟಿಸಿದ ಶಾಸಕ ಎಂ.ಚಂದ್ರಪ್ಪ ಮಾತನಾಡಿ, ‘ಚದುರಿದ ಭೋವಿ ಜನಾಂಗವನ್ನು ಒಗ್ಗೂಡಿಸುವಲ್ಲಿ ಇಮ್ಮಡಿ ಸಿದ್ದರಾಮೇಶ್ವರ ಸ್ವಾಮೀಜಿಯವರ ಶ್ರಮ ಅಪಾರವಾದದ್ದು. ಸಿದ್ದರಾಮೇಶ್ವರರ ತತ್ವ ಸಿದ್ಧಾಂತಗಳನ್ನು ಅಳವಡಿಸಿಕೊಂಡು ಸಮಾಜ ಅಭಿವೃದ್ಧಿ ಹೊಂದಬೇಕು’ ಎಂದರು.
‘ಸಮಾಜದ ಸಂಘಟನೆ ಮತ್ತು ಏಳಿಗೆಗಾಗಿ ಶ್ರೀಗಳು ಪಟ್ಟ ಶ್ರಮದ ಫಲವಾಗಿ ರಾಜ್ಯ ಮತ್ತು ರಾಷ್ಟ್ರಮಟ್ಟದಲ್ಲಿ ಭೋವಿ ಸಂಘಟನೆಯನ್ನು ಕಟ್ಟಲು ಸಾಧ್ಯವಾಗಿದೆ. 2027 ಜ. 14ರಂದು ರಾಜ್ಯ ಮಟ್ಟದ ಸಿದ್ದರಾಮೇಶ್ವರ ಜಯಂತಿಯನ್ನು ಹೊಳಲ್ಕೆರೆಯಲ್ಲಿ ನಡೆಸಲಾಗುವುದು. ರಾಜ್ಯದ ಎಲ್ಲ ಮುಖಂಡರನ್ನು ಈ ಸಮಾವೇಶದಲ್ಲಿ ಸೇರಿಸಲಾಗುತ್ತದೆ’ ಎಂದು ಹೆಳಿದರು.
ಕುಂಚಿಟಿಗ ಗುರುಪೀಠದ ಜಗದ್ಗುರು ಶಾಂತವೀರ ಸ್ವಾಮೀಜಿ ಮಾತನಾಡಿ, ‘ಸೀಮೆಯ ಮೀರಿದ ನಿಸ್ಸಿಮನು ಸಿದ್ದರಾಮಯ್ಯ’ ಎಂದು ಚನ್ನಬಸವಣ್ಣ ವರ್ಣಿಸುತ್ತಾನೆ. ಒಬ್ಬ ವ್ಯಕ್ತಿಯ ನಿಜವಾದ ಸಾಧನೆಯೆಂದರೆ ತಾನು ನಿರ್ಮಿಸಿಕೊಂಡ ಎಲ್ಲೆಗಳನ್ನು ತಾನೇ ದಾಟಿ ಮುನ್ನಡೆಯುವುದು. ಸಿದ್ದರಾಮೇಶ್ವರರು ಕಾಯಕ ವರ್ಗದವರ ಅಸ್ಮಿತೆ. ಬದುಕಿನ ಪರಿವರ್ತನೆಗೆ ದರ್ಪಣ ಸಿದ್ದರಾಮರ ಜೀವನ’ ಎಂದರು.
ಕೊರಟಗೆರೆಯ ಮಹಾಲಿಂಗ ಸ್ವಾಮೀಜಿ ಮಾತನಾಡಿ, ‘ಸಿದ್ದರಾಮರ ಬದುಕನ್ನು ಎರಡು ಘಟ್ಟಗಳಾಗಿ ವಿಂಗಡಿಸಬಹುದು. ಮೊದಲನೆಯದು ಜನಸಾಮಾನ್ಯರ ಹಾಗೂ ಕವಿಗಳ ದೃಷ್ಟಿಕೋನದ ಪವಾಡ ಪುರುಷ. ಎರಡನೇಯದು ಜ್ಞಾನಿಗಳ, ವಿಜ್ಞಾನಿಗಳ, ವಿಮರ್ಶಕರ, ಚಿಕಿತ್ಸಕರ, ಪ್ರಗತಿಪರರ ದೃಷ್ಟಿಕೋನದ ವಚನಕಾರ’ ಎಂದರು.
ಮೇದಾರ ಗುರುಪೀಠದ ಕೇತೇಶ್ವರ ಸ್ವಾಮೀಜಿ ಮಾತನಾಡಿದರು. ಬಂಜಾರ ಗುರುಪೀಠದ ನಂದಮಸಂದ ಸೇವಾಲಾಲ್ ಶ್ರೀ, ಭೋವಿ ಸಮಾಜದ ಮುಖಂಡರಾದ ಎಚ್. ಆನಂದಪ್ಪ, ಮುಖಂಡರಾದ ಬಂಡೆ ರುದ್ರಪ್ಪ, ಕಾಳಘಟ್ಟ ಹನುಮಂತಪ್ಪ, ಡಿ.ಸಿ. ಮೋಹನ, ಪೇಂಟ್ ತಿಮ್ಮಣ್ಣ, ಎಚ್. ಲಕ್ಷ್ಮಣ್, ಗೌನಹಳ್ಳಿ ಗೋವಿಂದಪ್ಪ, ಇಒ ರವಿಕುಮಾರ, ಪಿಡಿಎ ಆನಂದ, ಚಂದ್ರಶೇಖರ ಉಪಸ್ಥಿತರಿದ್ದರು.
ಬಿಎಂಡಬ್ಲ್ಯು ಕಾರು ಉಡುಗೊರೆ
ಸಿದ್ದರಾಮೇಶ್ವರ ಜಯಂತಿ ನಿಮಿತ್ತ ಭೋವಿ ಗುರುಪೀಠದ ಪೀಠಾಧ್ಯಕ್ಷ ಇಮ್ಮಡಿ ಸಿದ್ಧರಾಮೇಶ್ವರ ಸ್ವಾಮೀಜಿ ಅವರಿಗೆ ಭೋವಿ ಸಮಾಜದ ಮುಖಂಡರು ₹ 1.5 ಕೋಟಿಯ ಬಿಎಂಡಬ್ಲ್ಯು ಎಕ್ಸ್ 7 ಕಾರು ಉಡುಗೊರೆ ನೀಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.