ADVERTISEMENT

ಫಲವತ್ತಾದ ಮಣ್ಣಿನ ರಕ್ಷಣೆಗೆ ಮುಂದಾಗಿ

ವಿಶ್ವ ಮಣ್ಣು ದಿನಾಚರಣೆಯಲ್ಲಿ ಜಿಲ್ಲಾ ಪಂಚಾಯಿತಿ ಸದಸ್ಯ ನರಸಿಂಹರಾಜು

​ಪ್ರಜಾವಾಣಿ ವಾರ್ತೆ
Published 5 ಡಿಸೆಂಬರ್ 2019, 11:32 IST
Last Updated 5 ಡಿಸೆಂಬರ್ 2019, 11:32 IST
ಚಿತ್ರದುರ್ಗದಲ್ಲಿ ಗುರುವಾರ ಕೃಷಿ ಇಲಾಖೆಯಿಂದ ನಡೆದ ವಿಶ್ವ ಮಣ್ಣು ದಿನಾಚರಣೆ ಕಾರ್ಯಕ್ರಮವನ್ನು ಜಿಲ್ಲಾ ಪಂಚಾಯಿತಿ ಸದಸ್ಯ ನರಸಿಂಹರಾಜು, ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಲಿಂಗರಾಜು, ಕೃಷಿಕ ಸಮಾಜದ ಅಧ್ಯಕ್ಷ ಬಿ.ಟಿ. ಜಗದೀಶ್ ಉದ್ಘಾಟಿಸಿದರು.
ಚಿತ್ರದುರ್ಗದಲ್ಲಿ ಗುರುವಾರ ಕೃಷಿ ಇಲಾಖೆಯಿಂದ ನಡೆದ ವಿಶ್ವ ಮಣ್ಣು ದಿನಾಚರಣೆ ಕಾರ್ಯಕ್ರಮವನ್ನು ಜಿಲ್ಲಾ ಪಂಚಾಯಿತಿ ಸದಸ್ಯ ನರಸಿಂಹರಾಜು, ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಲಿಂಗರಾಜು, ಕೃಷಿಕ ಸಮಾಜದ ಅಧ್ಯಕ್ಷ ಬಿ.ಟಿ. ಜಗದೀಶ್ ಉದ್ಘಾಟಿಸಿದರು.   

ಚಿತ್ರದುರ್ಗ: ‘ಫಲವತ್ತಾದ ಮಣ್ಣನ್ನು ನಾಶಪಡಿಸುವುದರಿಂದ ಯಾವ ಪ್ರಯೋಜನವೂ ಇಲ್ಲ. ಗುಣಮಟ್ಟದ ಆಹಾರ ಧಾನ್ಯಗಳು ದೊರಕಲು ಮಣ್ಣಿನ ರಕ್ಷಣೆಯಿಂದ ಮಾತ್ರ ಸಾಧ್ಯವಿದೆ’ ಎಂದು ಜಿಲ್ಲಾ ಪಂಚಾಯಿತಿ ಸದಸ್ಯ ನರಸಿಂಹರಾಜು ಅಭಿಪ್ರಾಯಪಟ್ಟರು.

ಕೃಷಿ ತಂತ್ರಜ್ಞರ ಸಂಸ್ಥೆ (ಐಎಟಿ)ಯಲ್ಲಿ ಗುರುವಾರ ಕೃಷಿ ಇಲಾಖೆಯಿಂದ ಆಯೋಜಿಸಿದ್ದ ವಿಶ್ವ ಮಣ್ಣು ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

‘ಹಿಂದಿನ ಹಳೆಯ ಮಣ್ಣಿಗೆ ಇದ್ದಂಥ ಶಕ್ತಿ ಹೊಸ ಮಣ್ಣಿಗೆ ಇಲ್ಲ. ಈ ಹಿನ್ನೆಲೆಯಲ್ಲಿ ದುಬಾರಿ ಬೆಲೆಯಲ್ಲಿ ಬೀಜ, ರಸಗೊಬ್ಬರ ಕೊಂಡು ಬಿತ್ತನೆ ಮಾಡಿದರೂ ರೈತರಿಗೆ ನಿರೀಕ್ಷಿತ ಲಾಭ ಸಿಗದೇ ನಷ್ಟ ಉಂಟಾಗುತ್ತಿದೆ. ಮಣ್ಣಿನ ಫಲವತ್ತತೆ ಅನುಸಾರ ಬೇಸಾಯ ಪದ್ಧತಿ ಅಳವಡಿಸಿಕೊಳ್ಳದಿರುವುದು ಇದಕ್ಕೆ ಕಾರಣ’ ಎಂದರು.

ADVERTISEMENT

‘ಪ್ರಸ್ತುತ ದಿನಗಳಲ್ಲಿ ಮಳೆ ಹೆಚ್ಚಾಗಿ ಬಂದರೂ ಫಸಲು ರೈತರ ಕೈಸೇರುವ ಮುನ್ನವೇ ಹಾಳಾಗುತ್ತಿದೆ. ಮಳೆ ಬರದಿದ್ದರೂ ಬರ ಪರಿಸ್ಥಿತಿ ನಿರ್ಮಾಣವಾಗಿ, ಬಿತ್ತನೆ ಕೈಗೊಳ್ಳಲು ಕಷ್ಟಕರವಾಗಲಿದೆ. ಆದ್ದರಿಂದ ವೈಜ್ಞಾನಿಕ ಚಿಂತನೆಗೆ ರೈತರು ಮುಂದಾಗಬೇಕು. ಕೃಷಿ ಮತ್ತು ತೋಟಗಾರಿಕೆ ಇಲಾಖೆಯ ಅಧಿಕಾರಿಗಳನ್ನು ಮಿತ್ರರನ್ನಾಗಿಸಿಕೊಂಡು, ಸೂಕ್ತ ಸಲಹೆ ಪಡೆದು ಕಾಲಕ್ಕೆ ಅನುಗುಣವಾದ ಬೆಳೆಗಳನ್ನು ಬೆಳೆಯುವುದು ಉತ್ತಮ’ ಎಂದು ತಿಳಿಸಿದರು.

ಕೃಷಿಕ ಸಮಾಜದ ಅಧ್ಯಕ್ಷ ಬಿ.ಟಿ. ಜಗದೀಶ್, ‘ಭೂಮಿಯ ಮೇಲಿನ ಸಕಲ ಜೀವರಾಶಿಗಳು ಆರೋಗ್ಯವಂತರಾಗಿ ಇರಬೇಕಾದರೆ ಮಣ್ಣಿನ ಆರೋಗ್ಯವನ್ನು ಕಾಪಾಡಬೇಕಿದೆ’ ಎಂದರು.

‘ಅವೈಜ್ಞಾನಿಕವಾಗಿ ಬೆಳೆ ಬೆಳೆಯಲು ಮುಂದಾಗಿರುವ ಕಾರಣ ಮುಂದಿನ ದುಷ್ಪರಿಣಾಮಗಳನ್ನು ರೈತ ಸಮುದಾಯ ಎದುರಿಸಬೇಕಾಗುತ್ತದೆ. ಒಂದಿಷ್ಟು ಮಂದಿಗೆ ಯಾವುದೋ ಬೆಳೆಯಿಂದ ಲಾಭವಾದರೆ, ಎಲ್ಲರೂ ಅದನ್ನೇ ಬೆಳೆಯಲು ಮುಂದಾಗಬಾರದು’ ಎಂದು ಹೇಳಿದರು.

ತಾಲ್ಲೂಕು ಪಂಚಾಯಿತಿ ಸದಸ್ಯ ಕಲ್ಲೇಶ್, ಕೃಷಿ ಇಲಾಖೆ ಅಧಿಕಾರಿಗಳಾದ ಪ್ರಭಾಕರ್, ತಿಮ್ಮಯ್ಯ, ವೆಂಕಟೇಶ್, ಕೃಷಿ ತಂತ್ರಜ್ಞರ ಸಂಸ್ಥೆಯ ತಿಪ್ಪೇಸ್ವಾಮಿ, ಎ. ತಿಪ್ಪೇಸ್ವಾಮಿ, ಎಚ್.ಎಂ. ತಿಪ್ಪೇಸ್ವಾಮಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.