ADVERTISEMENT

ಕುಲಕಸುಬು ತರಬೇತಿ ಕೇಂದ್ರ ಸ್ಥಾಪನೆ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಆಶ್ವಾಸನೆ

​ಪ್ರಜಾವಾಣಿ ವಾರ್ತೆ
Published 20 ಅಕ್ಟೋಬರ್ 2021, 8:28 IST
Last Updated 20 ಅಕ್ಟೋಬರ್ 2021, 8:28 IST
ಚಿತ್ರದುರ್ಗದ ಭೋವಿ ಗುರುಪೀಠಕ್ಕೆ ಭೇಟಿ ನೀಡಿದ್ದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಇಮ್ಮಡಿ ಸಿದ್ದರಾಮೇಶ್ವರ ಸ್ವಾಮೀಜಿ ಅವರೊಂದಿಗೆ ಚರ್ಚೆ ನಡೆಸಿದರು. ವಿಧಾನಪರಿಷತ್‌ ಸದಸ್ಯ ವೈ.ಎ.ನಾರಾಯಣಸ್ವಾಮಿ ಇದ್ದಾರೆ.
ಚಿತ್ರದುರ್ಗದ ಭೋವಿ ಗುರುಪೀಠಕ್ಕೆ ಭೇಟಿ ನೀಡಿದ್ದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಇಮ್ಮಡಿ ಸಿದ್ದರಾಮೇಶ್ವರ ಸ್ವಾಮೀಜಿ ಅವರೊಂದಿಗೆ ಚರ್ಚೆ ನಡೆಸಿದರು. ವಿಧಾನಪರಿಷತ್‌ ಸದಸ್ಯ ವೈ.ಎ.ನಾರಾಯಣಸ್ವಾಮಿ ಇದ್ದಾರೆ.   

ಚಿತ್ರದುರ್ಗ: ವೃತ್ತಿ ಆಧಾರಿತ ಕುಲಕಸುಬು ತರಬೇತಿ ನೀಡಲು ವಿಶೇಷ ಕೇಂದ್ರಗಳನ್ನು ತೆರೆಯಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಆಶ್ವಾಸನೆ ನೀಡಿದರು.

ಇಲ್ಲಿನ ಹೊರವಲಯದ ಭೋವಿ ಗುರುಪೀಠಕ್ಕೆ ಈಚೆಗೆ ಭೇಟಿ ನೀಡಿದ್ದ ಅವರು ಇಮ್ಮಡಿ ಸಿದ್ದರಾಮೇಶ್ವರ ಸ್ವಾಮೀಜಿ ಅವರೊಂದಿಗೆ ಈ ಬಗ್ಗೆ ಚರ್ಚೆ ನಡೆಸಿದರು.

‘ಕಟ್ಟಡ ನಿರ್ಮಾಣ, ಕಲ್ಲು ಕೆತ್ತನೆ, ಶಿಲ್ಪಕಲೆ ಹೀಗೆ ವೃತ್ತಿ ಆಧಾರಿತ ಕಸುಬುಗಳಿಗೆ ತರಬೇತಿಯ ಅಗತ್ಯವಿದೆ. ಇಂತಹ ಕೇಂದ್ರಗಳನ್ನು ತೆರೆದರೆ ಅನುಕೂಲವಾಗಲಿದೆ. ಅರೆ ಅಲೆಮಾರಿ ಸಮುದಾಯಗಳು ನಿರಂತರವಾಗಿ ವಲಸೆ ಹೋಗುತ್ತವೆ. ಈ ವಲಸೆ ಪ್ರವೃತ್ತಿಯನ್ನು ತಪ್ಪಿಸಿ ಸ್ಥಿರ ಜೀವನ ನಡೆಸಲು ವಿಶೇಷ ಪ್ಯಾಕೇಜ್ ನೀಡಲಾಗುವುದು’ ಎಂದು ಹೇಳಿದರು.

ADVERTISEMENT

‘ಭೋವಿ ಜನಾಂಗದ ಸರ್ವಾಂಗೀಣ ಅಭಿವೃದ್ಧಿಗೆ ಸರ್ಕಾರ ಬದ್ಧವಾಗಿದೆ. ಭೋವಿ ಜನಾಂಗದ ಸಮಸ್ಯೆಗಳ ಬಗ್ಗೆ ಮನವಿ ಸಲ್ಲಿಸಿದ ವಿಚಾರಗಳ ಕುರಿತು ಕ್ರಮವಹಿಸಲು ಅಧಿಕಾರಿಗಳಿಗೆ ಸೂಚಿಸಲಾಗಿದೆ’ ಎಂದು ಹೇಳಿದರು.

ಇಮ್ಮಡಿ ಸಿದ್ದರಾಮೇಶ್ವರ ಸ್ವಾಮೀಜಿ ಮಾತನಾಡಿ, ‘ಭೋವಿ ಜನಾಂಗದ ಅಭಿವೃದ್ಧಿ ನಿಗಮಕ್ಕೆ ಅಧ್ಯಕ್ಷ ಮತ್ತು ನಿರ್ದೇಶಕರನ್ನು ನೇಮಕ ಮಾಡಬೇಕು. ಸಿದ್ಧರಾಮೇಶ್ವರರ ಅಧ್ಯಯನ ಪೀಠ, ಭೋವಿ ಸಂಸ್ಕೃತಿ ಸಂಶೋಧನಾ ಕೇಂದ್ರ ಸ್ಥಾಪಿಸಬೇಕು. ಕಟ್ಟಡ ಕಾರ್ಮಿಕರು, ರಸ್ತೆ, ಚರಂಡಿ ಕಾರ್ಮಿಕರು, ವಡ್ಡರ ಸಮೀಕ್ಷೆ ನಡೆಸಬೇಕು. ಕಲ್ಲು, ಗಣಿಗಾರಿಕೆ ಕೆಲಸ ಮಾಡುವವರಿಗೆ ಯಂತ್ರಖರೀದಿಯಲ್ಲಿ ಶೇ 75ರಷ್ಟು ಸಹಾಯಧನ ಒದಗಿಸಬೇಕು’ ಎಂದು ಮನವಿ ಮಾಡಿದರು.

ಮುಖಂಡರಾದ ತಿಮ್ಮಣ್ಣ, ಡಿ.ಸಿ.ಮೋಹನ್, ಭೋವಿ ಗುರುಪೀಠದ ಸಿಇಓ ಗೌನಹಳ್ಳಿ ಗೋವಿಂದಪ್ಪ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.