
ಹರಿಹರ: ಮಾನವ ಬಂಧುತ್ವ ವೇದಿಕೆ ಕರ್ನಾಟಕ ಹಾಗೂ ಪ್ರೊ.ಬಿ.ಕೃಷ್ಣಪ್ಪ ಟ್ರಸ್ಟ್, ಮೈತ್ರಿವನ ಹರಿಹರ ಇವರ ಸಹಯೋಗದಲ್ಲಿ ಫೆ.27 ಮತ್ತು 28 ರಂದು ನಗರದ ಹೊರವಲಯದ ಪ್ರೊ.ಬಿ.ಕೃಷ್ಣಪ್ಪ ಭವನದ ಮೈತ್ರಿವನದಲ್ಲಿ ‘ಸಂಶೋಧನೆ: ಸಮಕಾಲೀನ ಆಯಾಮಗಳು’ ವಿಷಯ ಕುರಿತು ರಾಜ್ಯ ಮಟ್ಟದ ಕಾರ್ಯಾಗಾರ ಆಯೋಜಿಸಿದೆ.
ಫೆ. 27ರಂದು ಬೆಳಿಗ್ಗೆ 10ಕ್ಕೆ ವಿಮರ್ಶಕ, ಚಿಂತಕ ಪ್ರೊ.ರಹಮತ್ ತರೀಕೆರೆ ಉದ್ಘಾಟಿಸುವರು. ಮಾನವ ಬಂಧುತ್ವ ವೇದಿಕೆ ಸಂಚಾಲಕ ಪ್ರೊ.ಎ.ಬಿ.ರಾಮಚಂದ್ರಪ್ಪ ಅಧ್ಯಕ್ಷತೆ ವಹಿಸುವರು. ಪ್ರೊ.ಬಿ.ಕೃಷ್ಣಪ್ಪ ಭವನ ಟ್ರಸ್ಟ್ನ ಟ್ರಸ್ಟಿ ಹನಗವಾಡಿ ರುದ್ರಪ್ಪ ಮುಖ್ಯ ಅತಿಥಿಯಾಗಿ ಭಾಗವಹಿಸುವರು. ದಾವಣಗೆರೆ ವಿಶ್ವವಿದ್ಯಾಲಯದ ಸಹಾಯಕ ಪ್ರಾಧ್ಯಾಪಕ ವಿಜಯಕುಮಾರ ಪ್ರಸ್ತಾವಿಕವಾಗಿ ಮಾತನಾಡುವರು.
ನಂತರ ನಡೆಯುವ 1ನೇ ಗೋಷ್ಠಿಯಲ್ಲಿ ‘ಸಂಶೋಧನೆ ಬರವಣಿಗೆಯ ತಾತ್ವಿಕತೆ’ ಕುರಿತು ಹಂಪಿ ಕನ್ನಡ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಪ್ರೊ.ಬಿ.ಎಂ.ಪುಟ್ಟಯ್ಯ ಮಾತನಾಡುವರು, 2ನೇ ಗೋಷ್ಠಿಯಲ್ಲಿ ‘ಮಾನವ ಬಂಧುತ್ವದ ಆಶಯಗಳು’ ಕುರಿತು ಪ್ರೊ.ಎ.ಬಿ.ರಾಮಚಂದ್ರಪ್ಪ ಮಾತನಾಡುವರು.
ನಂತರ ನಡೆಯುವ ಶಿಬಿರಾರ್ಥಿಗಳ ಗುಂಪು ಚರ್ಚೆ ಹಾಗೂ ಸಂವಾದದಲ್ಲಿ ಸಂಪನ್ಮೂಲ ವ್ಯಕ್ತಿಗಳಾಗಿ ದಾವಣಗೆರೆ ವಿಶ್ವವಿದ್ಯಾಲಯದ ಪ್ರಾಧ್ಯಾಪಕರಾದ ವಿಜಯಕುಮಾರ್ ಎಚ್.ಜಿ., ನಾಗರಾಜು ಎನ್., ಮದಕರಿ ನಾಯಕ ಎಚ್.ಆರ್., ಫಕಿರೇಶ್ ಹಳ್ಳಳ್ಳಿ, ಹೊನ್ನೂರು ಸ್ವಾಮಿ, ರೂಪೇಶ್ ಕುಮಾರ್ ಭಾಗವಹಿಸುವರು. ಸಂಜೆ 6.30ರಿಂದ ‘ಭಾರತದ ಪ್ರಜೆಗಳಾದ ನಾವು’ ಎಂಬ ಸಿನಿಮಾ ಪ್ರದರ್ಶನ ನಡೆಯಲಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.