ಚಿತ್ರದುರ್ಗ: ಕೋಟೆನಾಡಿನಲ್ಲಿ ಮತ್ತೆ ಬೀದಿ ನಾಯಿ, ಬಿಡಾಡಿ ದನಗಳ ಹಾವಳಿ ಮರುಕಳಿಸಿದೆ. ಇಡೀ ಊರನ್ನೇ ತಮ್ಮ ಸಾಮ್ರಾಜ್ಯ ಮಾಡಿಕೊಂಡಿದ್ದು ನಾಗರಿಕರಲ್ಲಿ ನಡುಕ ಹುಟ್ಟಿಸಿವೆ. ಯಾವ ಕ್ಷಣದಲ್ಲಿ ದಾಳಿ ನಡೆಸುತ್ತವೆ ಎಂಬುದನ್ನು ಊಹಿಸಲು ಸಾಧ್ಯವಾಗುತ್ತಿಲ್ಲ.
ಕಳೆದ ನಾಲ್ಕೈದು ತಿಂಗಳಿನಿಂದ ಬೀದಿನಾಯಿಗಳ ಹಾವಳಿ ನಿಯಂತ್ರಣಕ್ಕೆ ಸಿಗದಷ್ಟು ಏರಿಕೆ ಕಾಣುತ್ತಿದೆ. ಯಾವ ಬೀದಿಯಲ್ಲಿ ನೋಡಿದರೂ ನಾಯಿಗಳು, ದನಗಳು ಇಲ್ಲ ಎಂದು ಹುಡುಕುವ ಪರಿಸ್ಥಿತಿ ಬಂದಿದೆ.
ನಗರದ ಚೇಳುಗುಡ್ಡ, ಹೊಳಲ್ಕೆರೆ ರಸ್ತೆ, ಕೆಳಗೋಟೆ, ಬುರಜುನಹಟ್ಟಿ, ಜೋಗಿಮಟ್ಟಿ ರಸ್ತೆ, ಪ್ರಶಾಂತ ನಗರ, ಆಜಾದ್ ನಗರ, ಜೆಸಿಆರ್ ಬಡಾವಣೆ, ಬ್ಯಾಂಕ್ ಕಾಲೊನಿ, ಕೆಳಗೋಟೆ, ಐಯುಡಿಪಿ ಬಡಾವಣೆ, ಕಾಮನಬಾವಿ ಬಡಾವಣೆ, ಕೋಟೆ ಮುಖ್ಯ ರಸ್ತೆ ಸೇರಿ ನಗರದ ಎಲ್ಲ ಬಡಾವಣೆಗಳಲ್ಲೂ ಬೀದಿ ನಾಯಿಗಳು ಕಾರುಬಾರು ನಡೆಸುತ್ತಿವೆ. ಇನ್ನೂ ಮುನ್ಸಿಪಲ್ ಕಾಲೊನಿ, ಹಳೆ ಧರ್ಮಶಾಲಾ ರಸ್ತೆ, ಬುದ್ಧನಗರ, ಸಿ.ಕೆ.ಪುರ ಬಡಾವಣೆ, ಪ್ರಸನ್ನ ಚಿತ್ರಮಂದಿರದ ರಸ್ತೆ, ಮಟನ್ ಮಾರುಕಟ್ಟೆ, ಖಾಸಗಿ ಬಸ್ ನಿಲ್ದಾಣ, ಎಪಿಎಂಸಿ ಆವರಣದಲ್ಲಿ ಹೇಳುವಂತಿಲ್ಲ ಎನ್ನುವಂತಾಗಿದೆ.
ಕೊಳಚೆ ಪ್ರದೇಶಗಳಲ್ಲಿ ಪರಿಸ್ಥಿತಿ ಕೈಮೀರಿದ್ದು, ಬಹುತೇಕ ಕಡೆ ಮಕ್ಕಳೇ ನಿರಂತರವಾಗಿ ಬೀದಿ ನಾಯಿಗಳ ದಾಳಿಗೆ ಒಳಗಾಗುತ್ತಿದ್ದಾರೆ. ಖಾಲಿ ನಿವೇಶನ ಹಾಗೂ ಮೋರಿಗಳು ಹೆಚ್ಚಾಗಿರುವ ಪ್ರದೇಶದ ನಿವಾಸಿಗಳ ನಿದ್ದೆಗೆಡಿಸಿವೆ. ಗುಂಪಾಗಿ ಓಡಾಡುವ ನಾಯಿಗಳು ಹೆಚ್ಚಾಗಿ ಮಕ್ಕಳು, ಮಹಿಳೆಯರು ಹಾಗೂ ವೃದ್ಧರ ಮೇಲೆ ದಾಳಿ ನಡೆಸಿ, ಕಚ್ಚಿ ಗಾಯಗೊಳಿಸುವುದು ಮಾಮೂಲಿ ಎಂಬಂತಾಗಿದೆ.
ಮನೆಯ ಮುಂಭಾಗ ನಾಯಿಗಳ ಹಿಂಡು ಸದಾ ಇರುತ್ತವೆ. ಚಿಕ್ಕಮಕ್ಕಳು ಮನೆಯ ಅಂಗಳದಲ್ಲಿ ನೆಮ್ಮದಿಯಾಗಿ ಆಟವಾಡದ ಸ್ಥಿತಿ ನಿರ್ಮಾಣವಾಗಿದೆ. ಕೈಯಲ್ಲಿ ತಿಂಡಿ ತಿನಿಸುಗಳಿದ್ದರೆ ಏಕಾಏಕಿ ದಾಳಿ ನಡೆಸುತ್ತಿವೆ. ಇದಕ್ಕೆ ಸಾಕ್ಷಿ ಎಂಬಂತೆ ಇತ್ತೀಚಿಗೆ ಜೆಎಂಐಟಿ ಹಿಂಭಾಗ ಮಗುವಿನ ಮೇಲೆ ನಾಯಿಗಳು ದಾಳಿ ನಡೆಸಿ, ಗಾಯಗೊಳಿಸಿವೆ. ದಿನ 24 ತಾಸು ದ್ವಿಚಕ್ರ ವಾಹನ ಸವಾರರ ಮೇಲೆ ಏಕಾಏಕಿ ಎರಗುತ್ತಿವೆ.
ಬಹುತೇಕ ಬಡಾವಣೆಗಳಲ್ಲಿ ಮನೆಯ ಕಾಂಪೌಂಡ್ಗಳನ್ನು ಆಶ್ರಯ ತಾಣವಾಗಿಸಿಕೊಂಡಿವೆ. ಮಳೆ ಬಂದಾಗ ಕಾಂಪೌಂಡ್ ಒಳಗೆ ಬರುವ ನಾಯಿಗಳು ಮಲ, ಮೂತ್ರ ವಿಸರ್ಜಿಸಿ ಗಲೀಜು ಮಾಡುವುದು ಸಾಮಾನ್ಯವಾಗಿದೆ.
ಇನ್ನೂ ಬೀಡಾಡಿ ದನಗಳ ಹಾವಳಿ ಮಿತಿಮೀರಿದೆ. ಜಿಲ್ಲಾ ವ್ಯಾಪ್ತಿಯಲ್ಲಿ ನಿತ್ಯ ಜಾನುವಾರಗಳ ಸಮಸ್ಯೆಗೆ ವಾಹನ ಸವಾರರು ಸಿಲುಕುತ್ತಿದ್ದಾರೆ. ನಗರದ ರಸ್ತೆಯಲ್ಲಿ ಮಾತ್ರ ಸಮಸ್ಯೆ ಸೃಷ್ಟಿಸಿದ್ದ ಬಿಡಾಡಿ ದನಗಳು ಇದೀಗ ತಮ್ಮ ವ್ಯಾಪ್ತಿಯನ್ನು ಹೆದ್ದಾರಿಗೂ ವಿಸ್ತರಿಸಿವೆ.
ನಗರದ ವಿವಿಧ ಬಡಾವಣೆ, ಮುಖ್ಯ ರಸ್ತೆ ಮಾರ್ಗಗಳಲ್ಲಿ ಗುಂಪು ಗುಂಪಾಗಿ ಓಡಾಡುವುದರಿಂದ ವಾಹನ ಸವಾರರು ಕಿರಿಕಿರಿ ಅನುಭವಿಸುತ್ತಿದ್ದಾರೆ. ಬಿ.ಡಿ. ರಸ್ತೆ, ಮೆದೇಹಳ್ಳಿ ರಸ್ತೆ, ಕೆಎಸ್ಆರ್ಟಿಸಿ ಬಸ್ ನಿಲ್ದಾಣದಿಂದ ದಾವಣಗೆರೆ ರಸ್ತೆ ಮಾರ್ಗದ ರೈಲ್ವೆ ಗೇಟ್, ಖಾಸಗಿ ಬಸ್ ನಿಲ್ದಾಣ ಹಿಂಭಾಗ, ಮಹಾತ್ಮ ಗಾಂಧಿ ರಸ್ತೆ, ಸಂಗೊಳ್ಳಿ ರಾಯಣ್ಣ ವೃತ್ತ, ಕರುವಿನಕಟ್ಟೆ ವೃತ್ತ, ಚಿಕ್ಕಪೇಟೆ, ಹೊಳಲ್ಕೆರೆ ರಸ್ತೆ, ಕೆಳಗೋಟೆ, ಜಿಲ್ಲಾ ಆಸ್ಪತ್ರೆ ಮುಂಭಾಗದ ರಸ್ತೆ, ರಾಷ್ಟ್ರೀಯ ಹೆದ್ದಾರಿಯ ಸರ್ವೀಸ್ ರಸ್ತೆ, ಎಪಿಎಂಸಿ ಸೇರಿ ಮೊದಲಾದ ಕಡೆಗಳಲ್ಲಿ ರಸ್ತೆಯಲ್ಲೇ ಮಲಗಿರುತ್ತವೆ. ವಾಹನಗಳ ಸುಗಮ ಸಂಚಾರಕ್ಕೆ ಅಡ್ಡಿಯನ್ನೂ ಉಂಟು ಮಾಡುತ್ತಿವೆ. ವೃತ್ತಗಳನ್ನು ಆಕ್ರಮಿಸಿಕೊಂಡಿರುವ ಜಾನುವಾರುಗಳಿಗೆ ರಸ್ತೆಗಳೇ ಆಶ್ರಯ ತಾಣವಾಗಿದೆ.
ಯಾವುದೇ ಆತಂಕವಿಲ್ಲದೆ ಮುಖ್ಯ ರಸ್ತೆಯಲ್ಲೇ ಸಾಲಾಗಿ ನಿಲ್ಲುವ ದನಗಳು ಯಾವ ಕಡೆ ತಿರುಗಿ ಸಾಗುತ್ತವೆ ಎಂಬುದನ್ನು ಊಹಿಸಲು ಸಾಧ್ಯವಾಗದ ಸ್ಥಿತಿ ನಿರ್ಮಾಣವಾಗಿದೆ. ಏಕಾಏಕಿ ನುಗ್ಗುವ ಜಾನುವಾರುಗಳು ವಾಹನ ಸವಾರರನ್ನು ಇನ್ನಿಲ್ಲದಂತೆ ಕಾಡುತ್ತಿವೆ.
ಮುಖ್ಯ ರಸ್ತೆ ಮಾತ್ರವಲ್ಲದೆ ಬಡಾವಣೆಗಳಲ್ಲೂ ಹಾವಳಿ ಹೆಚ್ಚಾಗಿದೆ. ಕೋಟೆ ರಸ್ತೆ, ದೊಡ್ಡಪೇಟೆ, ಚಿಕ್ಕಪೇಟೆ, ಬುರುಜನಹಟ್ಟಿ, ಜೋಗಿಮಟ್ಟಿ ರಸ್ತೆ, ಗುಮಾಸ್ತರ ಕಾಲೊನಿ, ಜೆಸಿಆರ್ ಬಡಾವಣೆ, ಕೆಳಗೋಟೆ, ಪ್ರಸನ್ನ ಚಿತ್ರಮಂದಿರದ ರಸ್ತೆ, ವೆಂಕಟೇಶ್ವರ ಚಿತ್ರಮಂದಿರ ಸಮೀಪದ ಮಾರ್ಗಗಳಲ್ಲಿ ಸಮಸ್ಯೆ ಉಲ್ಬಣಿಸಿದೆ. ಮಾರುಕಟ್ಟೆ ಪ್ರದೇಶದ ಸ್ಥಿತಿ ಹೇಳ ತೀರದಾಗಿದೆ.
ಬಿಡಾಡಿ ದನಗಳ ಸಂಖ್ಯೆ ಬಗ್ಗೆ ನಗರಸಭೆ ಅಧಿಕಾರಿಗಳ ಬಳಿಯೂ ನಿಖರ ಮಾಹಿತಿ ಇಲ್ಲ. ದೂರಗಳು ಹೆಚ್ಚಾದ ಸಮಯದಲ್ಲಿ ಮಾತ್ರ ನಗರಸಭೆ ಅಧಿಕಾರಿಗಳು ಬಿಡಾಡಿ ದನಗಳ ಮಾಲೀಕರಿಗೆ ಎಚ್ಚರಿಕೆ ನೀಡುವ ಹಾಗೂ ಕೆಲವು ದನಗಳನ್ನು ಹಿಡಿದು ಸಾಗಿಸುವ ನೆಪಮಾತ್ರದ ಕಾರ್ಯಾಚರಣೆ ಕೈಗೊಳ್ಳುವ ಮೂಲಕ ತಾತ್ಕಾಲಿಕವಾಗಿ ಸ್ಪಂದಿಸುವುದು ಸಾಮಾನ್ಯವಾಗಿದೆ. ಹೀಗಾಗಿ, ರಸ್ತೆಗಳಲ್ಲಿ ಬಿಡಾಡಿ ದನ, ಕರುಗಳ ‘ಬಿಡಾರ’ ಮತ್ತೆ ಆರಂಭವಾಗುತ್ತದೆ. ಆದರೆ ಶಾಶ್ವತ ಪರಿಹಾರಕ್ಕೆ ಮಾತ್ರ ಮುಂದಾಗುತ್ತಿಲ್ಲ.
ಜಿಲ್ಲೆಯ ಒಂದಲ್ಲ ಒಂದು ಕಡೆ ನಿತ್ಯವೂ ಬಿಡಾಡಿ ದನ, ನಾಯಿಗಳ ದಾಳಿ ನಡೆಯುತ್ತಿವೆ. ಇಂತಹ ಘಟನೆಗಳಿಂದ ಸಾರ್ವಜನಿಕರು ಸಮಸ್ಯೆ ಅನುಭವಿಸುತ್ತಿದ್ದಾರೆ.
ನಗರದಲ್ಲಿ ಬೀದಿನಾಯಿ ಬಿಡಾಡಿ ದನಗಳ ಹಾವಳಿ ಹೆಚ್ಚಾಗಿರುವುದು ಗಮನಕ್ಕೆ ಬಂದಿದೆ. ಅಧಿಕಾರಿಗಳ ಸಭೆ ನಡೆಸಿ ಶೀಘ್ರವೇ ನಿಯಂತ್ರಣಕ್ಕೆ ಕಾರ್ಯ ಆರಂಭಿಸಲಾಗುವುದುಬಿ.ಎನ್.ಸುಮಿತಾಅಧ್ಯಕ್ಷೆ ನಗರಸಭೆ ಚಿತ್ರದುರ್ಗ
ಮುಂಜಾನೆ ಪತ್ರಿಕೆ ವಿತರಣೆ ಕಷ್ಟವಾಗಿದೆ. ರಸ್ತೆಗಳಲ್ಲಿ ಗುಂಪಾಗಿ ಬರುವ ನಾಯಿಗಳು ಏಕಾಏಕಿ ದಾಳಿ ನಡೆಸುತ್ತವೆ. ಇವುಗಳ ನಿಯಂತ್ರಣಕ್ಕೆ ಕ್ರಮವಹಿಸಬೇಕುಟಿ.ಕರಿಬಸಪ್ಪ ಬಣಕಾರ್ ಪತ್ರಿಕಾ ವಿತರಕ ಚಿತ್ರದುರ್ಗ
ಕೋಳಿ ಮಾಂಸದ ಅಂಗಡಿಗಳ ತ್ಯಾಜ್ಯವನ್ನು ಪಟ್ಟಣದ ಎಲ್ಲೆಂದರಲ್ಲಿ ಬಿಸಾಡುತ್ತಿದ್ದು ಬೀದಿನಾಯಿಗಳ ಹಾವಳಿ ಹೆಚ್ಚಾಗಲು ಕಾರಣವಾಗಿದೆ.ಪಿ.ಟಿ.ವಿನಯ್ ನಿವಾಸಿ ನಾಯಕನಹಟ್ಟಿ
ಕೋಳಿ ಮತ್ತು ಮಾಂಸದಂಗಡಿಗಳಲ್ಲಿನ ಸಮರ್ಪಕ ತ್ಯಾಜ್ಯ ವಿಲೇವಾರಿಗೆ ಮತ್ತು ಬಿಡಾಡಿ ದನಗಳ ಮಾಲೀಕರಿಗೆ ನೋಟಿಸ್ ನೀಡಲಾಗುವುದು. ನಾಯಿ ದನಗಳ ಹಾವಳಿಗೆ ಕಡಿವಾಣ ಹಾಕಲಾಗುವುದು.ಒ.ಶ್ರೀನಿವಾಸ್ ಮುಖ್ಯಾಧಿಕಾರಿ ನಾಯಕನಹಟ್ಟಿ ಪ.ಪಂ.
ಗ್ರಾಮದಲ್ಲಿ ಬೀದಿ ನಾಯಿಗಳ ಹಾವಳಿಯಿಂದಾಗಿ ವಯಸ್ಸಾದವರು ಮಕ್ಕಳು ಓಡಾಡುವುದೇ ಕಷ್ಟವಾಗಿದೆ. ಪಂಚಾಯಿತಿಯವರು ನಿಯಂತ್ರಣಕ್ಕೆ ಕ್ರಮ ಕೈಗೊಂಡಿಲ್ಲ.ಜಿ.ಟಿ.ಪ್ರೇಮಲೀಲಾ ಚಿಕ್ಕಜಾಜೂರು ನಿವಾಸಿ
- ವಿ.ಧನಂಜಯ
ನಾಯಕನಹಟ್ಟಿ: ಜಿಲ್ಲೆಯ ಪ್ರಮುಖ ಧಾರ್ಮಿಕ ಕ್ಷೇತ್ರವಾಗಿರುವ ಪಟ್ಟಣದಲ್ಲಿ ಬಿಡಾಡಿ ದನಗಳ ಹಾವಳಿ ಹೆಚ್ಚಾಗಿದೆ. ಐತಿಹಾಸಿಕ ಹಿನ್ನೆಲೆ ಮತ್ತು ಪರಂಪರೆಯಿರುವ ಗುರುತಿಪ್ಪೇರುದ್ರಸ್ವಾಮಿ ಹೊರಮಠ ಮತ್ತು ಒಳಮಠ ದೇಗುಲಗಳಿದ್ದು ನಿತ್ಯ ಸಾವಿರಾರು ಭಕ್ತರು ಮತ್ತು ಪ್ರವಾಸಿಗರು ಭೇಟಿ ನೀಡುತ್ತಾರೆ. ಇಲ್ಲಿನ ಪಾದಗಟ್ಟೆ ತೇರುಬೀದಿ ಜಿಸಿ ರಸ್ತೆಯಲ್ಲಿ ಹಲವು ತಿಂಗಳಿನಿಂದ ಇವುಗಳ ಸಂಖ್ಯೆ ಹೆಚ್ಚಾಗಿದೆ. ಇದರಿಂದ ಮಹಿಳೆಯರು ಮಕ್ಕಳು ವಾಹನ ಸವಾರರು ಜೀವಭಯದಲ್ಲಿ ಸಂಚರಿಸುವ ಪರಿಸ್ಥಿತಿ ಎದುರಾಗಿದೆ.
ಪಟ್ಟಣದ ಹತ್ತೂ ವಾರ್ಡ್ಗಳಲ್ಲಿಯೂ ಬೀದಿನಾಯಿಗಳ ಹಿಂಡುಗಳು ಕಂಡು ಬರುತ್ತಿವೆ. ಹೀಗೆ ಗುಂಪಲ್ಲಿರುವ ನಾಯಿಗಳು ಜನ ಓಡಾಡುವಾಗ ಮತ್ತು ವಾಹನ ಚಲಾಯಿಸುವ ವೇಳೆ ಬೊಗಳುತ್ತಾ ಹಿಂಬಾಲಿಸುತ್ತವೆ. ವಿದ್ಯಾರ್ಥಿಗಳು ಶಾಲಾ–ಕಾಲೇಜುಗಳಿಗೆ ವಯೋವೃದ್ಧರು ವಾಯು ವಿಹಾರಕ್ಕೆ ಮಹಿಳೆಯರು ತರಕಾರಿ ದಿನಸಿ ಸಾಮಗ್ರಿಗಳಿಗಾಗಿ ತೆರಳುವಾಗಲು ಕಾಟ ಹೆಚ್ಚಿದೆ. ಕೈಯಲ್ಲಿ ಬ್ಯಾಗ್ ಪ್ಲಾಸ್ಟಿಕ್ ಕವರು ನೋಡಿದರೆ ದಾಳಿ ಮಾಡಿ ಕಿತ್ತುಕೊಳ್ಳುತ್ತಿವೆ. ಇಂಥ ಘಟನೆಯಲ್ಲಿ ಹಲವು ಮಂದಿ ಬಿದ್ದು ಗಾಯಗೊಂಡಿದ್ದಾರೆ. ಸೈಕಲ್ ಮತ್ತು ಬೈಕ್ಗಳು ಸಂಚರಿಸುವಾಗ ಹಿಂಬಾಲಿಸಿಕೊಂಡು ಬಂದು ದಾಳಿ ನಡೆಸುತ್ತವೆ. ಇದರಿಂದ ಜನರು ಹೈರಾಣಾಗಿದ್ದಾರೆ.
ಕೋಲಮ್ಮನಹಳ್ಳಿ ರಸ್ತೆಯಲ್ಲಿರುವ ಕಸದರಾಶಿ ಮತ್ತು ಚಿಕ್ಕಕೆರೆಯ ಸಮೀಪದ ಸುರಿಯುವ ಕೋಳಿ ಮಾಂಸದಂಗಡಿಗಳ ತ್ಯಾಜ್ಯ ಕಲ್ಯಾಣಮಂಟಪಗಳ ಹಿಂಬದಿ ನಾಯಿಗಳ ಅಡ್ಡೆಯಾಗಿದ್ದು ತ್ಯಾಜ್ಯದಲ್ಲಿನ ಆಹಾರ ತಿನ್ನಲು ಶ್ವಾನಗಳ ಗುಂಪುಗಳ ನಡುವೆ ಜಿದ್ದಾಜಿದ್ದಿ ನಡೆದಿರುತ್ತವೆ. ರಾತ್ರಿ ವೇಳೆ ನಾಯಿಗಳ ಕೂಗಾಟ ಚೀರಾಟದಿಂದ ನೆಮ್ಮದಿಯ ನಿದ್ದೆ ಮಾಡಲು ಸಾಧ್ಯವಾಗುವುದಿಲ್ಲ. ನಾಯಿಗಳ ಉಪಟಳಕ್ಕೆ ಕಡಿವಾಣ ಹಾಕಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.
- ಜೆ. ತಿಮ್ಮಪ್ಪ
ಚಿಕ್ಕಜಾಜೂರು: ಬೀದಿ ನಾಯಿಗಳ ಹಾವಳಿಗೆ ಗ್ರಾಮಸ್ಥರು ಬೇಸತ್ತು ಹೋಗಿದ್ದು ಇವುಗಳ ತಡೆಗೆ ಗ್ರಾಮ ಪಂಚಾಯಿತಿಯವರು ಕ್ರಮ ಕೈಗೊಳ್ಳದಿರುವ ಬಗ್ಗೆ ಹಲವರು ಬೇಸರ ವ್ಯಕ್ತಪಡಿಸಿದಾರೆ. ಪ್ರತಿ ಓಣಿಯಲ್ಲೂ ಹತ್ತಾರು ನಾಯಿಗಳ ಹಿಂಡು ಕಚ್ಚಾಡುತ್ತಾ ಜನರಿಗೆ ಕಿರಿಕಿರಿ ಮಾಡುತ್ತಿವೆ. ಮಕ್ಕಳು ಮಹಿಳೆಯರು ಹಾಗೂ ವೃದ್ಧರು ಮತ್ತು ದ್ವಿಚಕ್ರ ವಾಹನ ಸವಾರರು ರಸ್ತೆಯಲ್ಲಿ ಸಂಚರಿಸುವುದೇ ದುಸ್ತರವಾಗಿದೆ. ಕೆಲ ನಾಯಿಗಳಿಗೆ ಗಂಭೀರವಾದ ಗಾಯಗಳಾಗಿವೆ. ಗಾಯಗೊಂಡ ಜಾಗದಲ್ಲಿ ಹುಳುಗಳಾಗಿ ದುರ್ನಾತ ಬೀರುತ್ತಿದ್ದು ಕೆಲ ನಾಯಿಗಳಿಗೆ ರೇಬಿಸ್ ತಗುಲಿವೆ ಎಂಬುದು ಗ್ರಾಮಸ್ಥರ ಆರೋಪವಾಗಿದೆ. ಕಳೆದ ವಾರ ಚಿಕ್ಕಂದವಾಡಿ ರಸ್ತೆಯಲ್ಲಿ ಉಮೇಶಪ್ಪ ಎಂಬ ವೃದ್ಧರು ರಸ್ತೆ ಬದಿಯಲ್ಲಿ ಹೋಗುತ್ತಿರುವಾಗ ನಾಯಿಗಳ ಹಿಂಡು ಕಚ್ಚಾಡುತ್ತಾ ಬಂದು ಉಮೇಶಪ್ಪ ಅವರಿಗೆ ಕಚ್ಚಿವೆ. ‘ಗ್ರಾಮದ ಬನಶಂಕರಿ ದೇವಸ್ಥಾನದ ಬಳಿ ಚಿಗನಾರಪ್ಪ ಸರ್ಕಲ್ನ ಅಮ್ಮನಕಟ್ಟೆ ನಾಯಕರ ಬೀದಿ ಅಂಬೇಡ್ಕರ್ ಬೀದಿ ಮೊದಲಾದ ಕಡೆಗಳಲ್ಲಿ ನಾಯಿಗಳ ಹಾವಳಿ ಹೆಚ್ಚಾಗಿದ್ದು ಬೆಳಿಗ್ಗೆ ಮಕ್ಕಳನ್ನು ಶಾಲಾ ಬಸ್ಗೆ ಹತ್ತಿಸಲು ಹೋದರೆ ನಾಯಿಗಳಿಗೆ ಹೆದರುವಂತಾಗಿದೆ’ ಎನ್ನುತ್ತಾರೆ ವಿಜಯಮ್ಮ ನಾಗವೇಣಿ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.