ADVERTISEMENT

‘ಬಿಜೆಪಿ ಸಂಘಟನೆ ಬಲಪಡಿಸಿ’

​ಪ್ರಜಾವಾಣಿ ವಾರ್ತೆ
Published 21 ಸೆಪ್ಟೆಂಬರ್ 2020, 13:14 IST
Last Updated 21 ಸೆಪ್ಟೆಂಬರ್ 2020, 13:14 IST
ಭರಮಸಾಗರದ ಪ್ರವಾಸಿ ಮಂದಿರದಲ್ಲಿ ಸೋಮವಾರ ಮಂಡಲ ಬಿಜೆಪಿಯಿಂದ ಗೋಪೂಜೆ, ಸಸಿನೆಡುವ ಕಾರ್ಯಕ್ರಮ ನಡೆಯಿತು
ಭರಮಸಾಗರದ ಪ್ರವಾಸಿ ಮಂದಿರದಲ್ಲಿ ಸೋಮವಾರ ಮಂಡಲ ಬಿಜೆಪಿಯಿಂದ ಗೋಪೂಜೆ, ಸಸಿನೆಡುವ ಕಾರ್ಯಕ್ರಮ ನಡೆಯಿತು   

ಭರಮಸಾಗರ: ಮಹಿಳೆಯರು ಏನನ್ನು ಬೇಕಾದರೂ ಸಾಧಿಸಬಹುದು. ಬಿಜೆಪಿ ಮಹಿಳಾ ಮೋರ್ಚಾದಿಂದ ಮಹಿಳಾ ಶಕ್ತಿಯ ಅನಾವರಣವಾಗಬೇಕು ಎಂದು ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಮುರುಳಿ ಹೇಳಿದರು.

ಪಟ್ಟಣದ ಪ್ರವಾಸಿ ಮಂದಿರದಲ್ಲಿ ಸೋಮವಾರ ಮಂಡಲ ಮಹಿಳಾ ಮೋರ್ಚಾ ಪದಾಧಿಕಾರಿಗಳ ಸಭೆ ಹಾಗೂ ಪ್ರಧಾನಿ ನರೇಂದ್ರ ಮೋದಿ ಅವರ ಜನ್ಮದಿನ ಸಪ್ತಾಹದ ಅಂಗವಾಗಿ ಹಮ್ಮಿಕೊಂಡಿದ್ದ ವಿವಿಧಕಾರ್ಯಕ್ರಮದಲ್ಲಿ ಮಾತನಾಡಿದರು.

‘ಮಹಿಳೆಯರ ಸಮಸ್ಯೆಗಳು ದೂರಾಗುವ ದಿನಗಳು ಹತ್ತಿರವಾಗುತ್ತಿವೆ. ಜವಾಬ್ದಾರಿಯನ್ನು ತೆಗೆದುಕೊಂಡ ಎಲ್ಲಾ ಪದಾಧಿಕಾರಿಗಳು ಹೆಚ್ಚಿನ ಸಂಘಟನೆ ಕೈಗೊಳ್ಳಬೇಕು. ಈ ಮೂಲಕ ಕೇಂದ್ರ, ರಾಜ್ಯದ ವಿವಿಧ ಯೋಜನೆಗಳನ್ನು ಜನಸಾಮಾನ್ಯರಿಗೆ ತಿಳಿಸುವ ಕೆಲ ಆಗಬೇಕು’ ಎಂದು ಸಲಹೆ ನೀಡಿದರು.

ADVERTISEMENT

ಜಿಲ್ಲಾ ಪ್ರಧಾನ ಕಾರ್ಯದರ್ಶಿ ಜಿ.ಟಿ. ಸುರೇಶ್, ‘ಪ್ರಧಾನಿಯ ಆತ್ಮನಿರ್ಭರ ಭಾರತ ಪರಿಕಲ್ಪನೆಯಲ್ಲಿ ಸ್ವ ಉದ್ಯೋಗ ಕಲ್ಪಿಸುವ ಅವಕಾಶದ ಜೊತೆಗೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ವಿವಿಧ ಸೌಲಭ್ಯಗಳನ್ನು ಮಹಿಳೆಯರ ಅಭ್ಯುದಯಕ್ಕಾಗಿ ಜಾರಿಗೆ ತರಲಾಗಿದೆ. ಇದನ್ನು ಅರ್ಹರಿಗೆ ತಲುಪಿಸುವಲ್ಲಿ ಮಹಿಳಾ ಮೋರ್ಚಾದ ಪಾತ್ರ ಮಹತ್ವದ್ದಾಗಿದೆ’ ಎಂದರು.

ತಾಲ್ಲೂಕು ಪಂಚಾಯಿತಿ ಮಾಜಿ ಅಧ್ಯಕ್ಷೆ ಸುಧಾ ಶೈಲೇಶ್, ‘ಬಿಜೆಪಿ ಸರ್ಕಾರದಿಂದ ಮಹಿಳೆಯರಿಗೆ ಸಾಕಷ್ಟು ಸೌಲಭ್ಯಗಳು ದೊರೆತಿವೆ. ಇದನ್ನು ಪದಾಧಿಕಾರಿಗಳು ಮನೆ ಮನೆಗೆ ತಲುಪಿಸಿ ಸರ್ಕಾರವನ್ನು ಬಲಗೊಳಿಸಬೇಕು’ ಎಂದರು.

ಮಂಡಲ ಅಧ್ಯಕ್ಷ ಶೈಲೇಶ್ ಮಾತನಾಡಿದರು.

ಕಾರ್ಯಕ್ರಮಕ್ಕೂ ಮೊದಲು ಮಹಿಳಾ ಮೋರ್ಚಾ ಪದಾಧಿಕಾರಿಗಳಿಂದ ಗೋಪೂಜೆ, ಸಸಿನಡುವ ಹಾಗೂ ಮಹಿಳೆಯರಿಗೆ ಉಡಿ ತುಂಬುವ ಕಾರ್ಯಕ್ರಮ ನಡೆಯಿತು.

ಜಿಲ್ಲಾ ಮಹಿಳಾ ಮೋರ್ಚಾ ಪ್ರಧಾನ ಕಾರ್ಯದರ್ಶಿ ಲೋಲಾಕ್ಷಮ್ಮ ಪ್ರಾಸ್ತಾವಿಕವಾಗಿ ಮಾತನಾಡಿದರು. ಮಂಡಲ ಅಧ್ಯಕ್ಷೆ ರಾಜೇಶ್ವರಿ ಮಾತನಾಡಿದರು.

ಜಿಲ್ಲಾ ಪಂಚಾಯಿತಿ ಸದಸ್ಯ ಡಿ.ವಿ. ಶರಣಪ್ಪ, ಟಿಎಪಿಎಂಸಿಯ ಎಚ್.ಎಂ. ಮಂಜುನಾಥ್, ಮಾಧ್ಯಮ ವಕ್ತಾರ ನಾಗರಾಜ ಬೇದ್ರೆ, ಮಂಡಲ ಪ್ರಧಾನ ಕಾರ್ಯದರ್ಶಿ ವೀರೇಶ್, ಕರಿಯಮ್ಮ, ಉಷಾ ಸಿದ್ದೇಶ್, ಪವಿತ್ರ, ಕವಿತಾ, ಕಮಲಮ್ಮ, ರೇಖಾ, ಜ್ಯೋತಿ, ನಾಗರತ್ನ, ಮಂಜಮ್ಮ, ಅಕ್ಕಮ್ಮ, ಶಾಂತಮ್ಮ, ಮಂಜುಳಮ್ಮ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.