
ಹಿರಿಯೂರು: ಸ್ವಾಮಿ ವಿವೇಕಾನಂದರಿಗೆ ತಾವು ಓದಿದ ವಿಷಯ ಯಾವ ಪುಸ್ತಕದ ಎಷ್ಟನೇ ಪುಟದಲ್ಲಿದೆ ಎಂದು ಸ್ಮರಣೆಯಲ್ಲಿರುತ್ತಿತ್ತು. ವಿದ್ಯಾರ್ಥಿಗಳು ವಿವೇಕಾನಂದರಲ್ಲಿದ್ದಂತಹ ಏಕಾಗ್ರತೆ ರೂಢಿಸಿಕೊಂಡರೆ ಕಲಿಕೆ ಸುಲಭವಾಗುತ್ತದೆ ಎಂದು ಸಂಪನ್ಮೂಲ ವ್ಯಕ್ತಿಯಾದ ಉಡುಪಿಯ ಸಾಲಿಗ್ರಾಮದ ಡಿವೈನ್ ಪಾರ್ಕ್ನ ಕವಿತಾ ಹೇಳಿದರು.
ನಗರದ ಹುಳಿಯಾರು ರಸ್ತೆಯಲ್ಲಿರುವ ರಾಷ್ಟ್ರೀಯ ಅಕಾಡೆಮಿ ಶಾಲೆಯಲ್ಲಿ ಮಂಗಳವಾರ ಹಿರಿಯೂರು ಜಾಗೃತಿ ಬಳಗದ ವತಿಯಿಂದ ಹಮ್ಮಿಕೊಂಡಿದ್ದ ವಿದ್ಯಾರ್ಥಿ ದೀಪ ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿದರು.
ವಿದ್ಯಾಭ್ಯಾಸ ನಮ್ಮ ಶಕ್ತಿ. ಅದನ್ನು ಕಲಿಯಲು ಯುಕ್ತಿಯು ಬೇಕಿದೆ. ತರಗತಿಯಲ್ಲಿ ಶಿಕ್ಷಕರು ಬೋಧನೆ ಮಾಡುವಾಗ ಏಕಾಗ್ರತೆಯಿಂದ ಕೇಳಿಸಿಕೊಂಡು, ಮನೆಗೆ ಹೋಗಿ ಸ್ವಲ್ಪ ವಿರಾಮ ಪಡೆದ ನಂತರ ಶಿಕ್ಷಕರ ಪಾಠವನ್ನು ಮನನ ಮಾಡಬೇಕು. ಅರ್ಥವಾಗದ ವಿಷಯಗಳನ್ನು ಬರೆದುಕೊಂಡು ಮಾರನೆಯ ದಿನ ತರಗತಿಯಲ್ಲಿ ಶಿಕ್ಷಕರ ಮೂಲಕ ಪರಿಹರಿಸಿಕೊಂಡಲ್ಲಿ ಓದಿನ ಬಗ್ಗೆ ಆಸಕ್ತಿಯ ಜೊತೆಗೆ ಧೈರ್ಯ ಬರುತ್ತದೆ. ಕಲಿಕೆಯನ್ನು ಭಾರ, ಶಿಕ್ಷೆ ಎಂದು ಭಾವಿಸದೆ, ಇದು ನಮ್ಮ ಭವಿಷ್ಯಕ್ಕೆ ಬೇಕಿರುವ ಅಡಿಗಲ್ಲು ಎಂದು ತಿಳಿದು ಮುಂದೆ ಸಾಗಬೇಕು ಎಂದು ಸಲಹೆ ನೀಡಿದರು.
ಜಾಗೃತಿ ಬಳಗದ ಚಂದ್ರಶೇಖರ್ ಕಾರ್ಯಕ್ರಮ ಉದ್ಘಾಟಿಸಿದರು. ಮುಖ್ಯ ಶಿಕ್ಷಕಿ ಮಗೇಶ್ವರಿ ಅಧ್ಯಕ್ಷತೆ ವಹಿಸಿದ್ದರು. ಬಳಗದ ಸದಸ್ಯೆ ಅನಿತಾ ಶಿವಮೂರ್ತಿ, ಶಶಿಕಲಾ ಹಾಜರಿದ್ದರು. ದೈಹಿಕ ಶಿಕ್ಷಣ ಶಿಕ್ಷಕ ಪರಮೇಶ್ ಕಾರ್ಯಕ್ರಮ ನಿರೂಪಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.