ಚಿತ್ರದುರ್ಗ: ಇಲ್ಲಿನ ನಗರಸಭೆ ಸದಸ್ಯರ ಪ್ರಸಕ್ತ ಅಧಿಕಾರದ ಅವಧಿ ಇದೇ 31ಕ್ಕೆ ಕೊನೆಗೊಳ್ಳಲಿದೆ. ಆದರೆ, ಸದಸ್ಯರ ತಂಡ ಅ. 23ರಿಂದ 30ರವರೆಗೆ ₹ 54 ಲಕ್ಷ ವೆಚ್ಚದಲ್ಲಿ ಘನತ್ಯಾಜ್ಯ ನಿರ್ವಹಣೆಯ ಕುರಿತ ಅಧ್ಯಯನ ಪ್ರವಾಸ ಕೈಗೊಂಡಿದೆ.
ಸ್ವಚ್ಛ ಭಾರತ ಮಿಷನ್ 2.0 ಯೋಜನೆ, ಸಾಮರ್ಥ್ಯಾಭಿವೃದ್ಧಿ ಉಪ ಘಟಕದಡಿ ಅತ್ಯುತ್ತಮ ಸಾಧನೆ ಮಾಡಿರುವ ನಗರಗಳ ಪ್ರವಾಸ ಕೈಗೊಳ್ಳಲು ಸದಸ್ಯರಿಗೆ ಅವಕಾಶವಿದೆ. ಗುಜರಾತ್ನ ಅಹಮದಾಬಾದ್ ಹಾಗೂ ಪಂಜಾಬ್ನ ಚಂಡೀಗಡ ನಗರಗಳಲ್ಲಿ ಅಳವಡಿಸಿಕೊಂಡಿರುವ ಘನತ್ಯಾಜ್ಯ ನಿರ್ವಹಣೆಯ ಮಾದರಿ ಕ್ರಮವನ್ನು ಅಧ್ಯಯನ ಮಾಡಿ ಅದನ್ನು ಕೋಟೆನಾಡಿನಲ್ಲೂ ಅನುಷ್ಠಾನ ಮಾಡುವುದು ಪ್ರವಾಸದ ಉದ್ದೇಶ.
ನಗರಸಭೆ ಅಧ್ಯಕ್ಷೆ, ಉಪಾಧ್ಯಕ್ಷೆ ಸೇರಿ 35 ಸದಸ್ಯರು, ಐವರು ನಾಮ ನಿರ್ದೇಶಿತ ಸದಸ್ಯರು ಪ್ರವಾಸಕ್ಕೆ ತೆರಳಬಹುದು. ಇದಕ್ಕೆ ನಗರಾಭಿವೃದ್ಧಿ ಇಲಾಖೆಯೇ ಅವಕಾಶ ನೀಡಿದೆ. ಆದರೆ, ‘5 ವರ್ಷಗಳಿಂದ ನಗರದ ಸ್ವಚ್ಛತೆಗೆ ಯಾವುದೇ ಕ್ರಮ ಕೈಗೊಳ್ಳದ ಸದಸ್ಯರು ಈಗ ಕಡೇ ಕ್ಷಣದಲ್ಲಿ ಅಧ್ಯಯನ ಕೈಗೊಂಡಿರುವುದು ಏಕೆ?’ ಎಂದು ಇತರ ಕೆಲವು ಸದಸ್ಯರೇ ಪ್ರಶ್ನಿಸುತ್ತಿದ್ದಾರೆ.
‘ಈ ಸದಸ್ಯರು ಪ್ರವಾಸದಿಂದ ಹಿಂದಿರುಗಿದ ಬಳಿಕ ಉಳಿಯುವುದೇ ಒಂದು ದಿನದ ಅಧಿಕಾರದ ಅವಧಿ. ಅವರ ಪ್ರವಾಸದ ಅನುಭವವನ್ನು ಇಲ್ಲಿ ಕಾರ್ಯಕತಗೊಳಿಸಲೂ ಅವಕಾಶ ವಿರಳ. ಅದಕ್ಕಾಗಿ ₹ 54 ಲಕ್ಷ ವೆಚ್ಚ ಮಾಡಬೇಕಾ?, ತೆರಿಗೆ ಹಣವನ್ನು ವ್ಯರ್ಥ ಮಾಡಿದಂತಾಗುವುದಿಲ್ಲವೇ?, ಈ ರೀತಿ ಹಣ ವೆಚ್ಚ ಮಾಡಿದರೆ ಜನರು ನಮ್ಮನ್ನು ಮೆಚ್ಚುತ್ತಾರಾ?’ ಎಂಬ ಪ್ರಶ್ನೆಗಳನ್ನು ಕೆಲ ಸದಸ್ಯರು ಎತ್ತಿದ್ದಾರೆ.
ಕೆಲ ಸದಸ್ಯೆಯರು ತಮ್ಮ ಜೊತೆಯಲ್ಲಿ ಪತಿಯನ್ನೂ, ಸದಸ್ಯರು ಪತ್ನಿಯನ್ನೂ ಕರೆದೊಯ್ಯುತ್ತಿರುವುದು ವಿರೋಧಕ್ಕೆ ಕಾರಣವಾಗಿದೆ. ಅಧ್ಯಯನ ಪ್ರವಾಸದ ನೆಪದಲ್ಲಿ ಅಹಮದಾಬಾದ್, ಚಂಡೀಗಡ ಆಸುಪಾಸಿನ ಹೋಂ ಸ್ಟೇ, ರೆಸಾರ್ಟ್ಗಳನ್ನೂ ಕಾಯ್ದಿರಿಸಿದ್ದಾರೆ. ಟೂರ್ ಪ್ಯಾಕೇಜ್ ಏಜೆನ್ಸಿಗೆ ಜವಾಬ್ದಾರಿ ನೀಡಿ ಮೋಜು– ಮಸ್ತಿ ಅನುಭವಿಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಅಧ್ಯಯನ ಪ್ರವಾಸ ಸಂಬಂಧ ಪೌರಾಯುಕ್ತರು ಒಪ್ಪಿಗೆ ಪತ್ರವೊಂದನ್ನು ಸಿದ್ಧಪಡಿಸಿದ್ದು, ಅದನ್ನು ಎಲ್ಲ ಸದಸ್ಯರಿಗೆ ಕಳುಹಿಸಿದ್ದಾರೆ. ಶೇ 90ರಷ್ಟು ಸದಸ್ಯರು ಒಪ್ಪಿಗೆ ಸೂಚಿಸಿದ್ದರೆ, ಬೆರಳೆಣಿಕೆಯಷ್ಟು ಮಂದಿ ಮಾತ್ರ ನಿರಾಕರಿಸಿದ್ದಾರೆ.
‘ಮೊದಲೇ ಪ್ರವಾಸ ಕೈಗೊಂಡಿದ್ದರೆ ನಾನೂ ಹೋಗುತ್ತಿದ್ದೆ. ಮಾದರಿ ನಗರಗಳ ಅಧ್ಯಯನ ಮಾಡಿ ನಮ್ಮ ನಗರದಲ್ಲೂ ಅನುಷ್ಠಾನ ಮಾಡಬಹುದಿತ್ತು. ಅವಧಿಯ ಕೊನೆಗೆ ಪ್ರವಾಸ ಮಾಡುತ್ತೇವೆ ಎಂದರೆ ಜನ ಶಪಿಸುತ್ತಾರೆ. ಅಧ್ಯಯನ ಪ್ರವಾಸದ ಹೆಸರಿನಲ್ಲಿ ಜನರ ತೆರಿಗೆ ಹಣವನ್ನು ದುರುಪಯೋಗ ಮಾಡಿಕೊಳ್ಳಲು ನನಗಿಷ್ಟವಿಲ್ಲ. ಒಪ್ಪಿಗೆ ಪತ್ರಕ್ಕೆ ನಾನು ಇದೇ ಉತ್ತರ ನೀಡಿದ್ದೇನೆ’ ಎಂದು 33ನೇ ವಾರ್ಡ್ ಸದಸ್ಯೆ ಶ್ರೀದೇವಿ ಚಕ್ರವರ್ತಿ ‘ಪ್ರಜಾವಾಣಿ’ಗೆ ತಿಳಿಸಿದರು.
‘ಅಧ್ಯಯನ ಪ್ರವಾಸದ ವೇಳೆ ಅವಲೋಕಿಸಿದ ಅಂಶಗಳನ್ನು ಅನುಷ್ಠಾನಗೊಳಿಸಲು ಅಧಿಕಾರವೇ ಇರುವುದಿಲ್ಲ. ಹೀಗಾಗಿ ನಾನು ಪ್ರವಾಸಕ್ಕೆ ತೆರಳುತ್ತಿಲ್ಲ’ ಎಂದು 21 ವಾರ್ಡ್ನ ಅನುರಾಧಾ ರವಿಕುಮಾರ್ ಹೇಳಿದರು.
ಸಾಮಾನ್ಯ ಸಭೆಯಲ್ಲಿ ನಿರ್ಧಾರ ಕೈಗೊಂಡು ₹ 54 ಲಕ್ಷ ಅನುದಾನವನ್ನು ಕಾಯ್ದಿರಿಸಲಾಗಿದೆ. ಸರ್ಕಾರ ನೀಡಿರುವ ಅವಕಾಶವನ್ನು ಬಳಸಿಕೊಂಡು ಅಧ್ಯಯನ ಪ್ರವಾಸಕ್ಕೆ ತೆರಳುತ್ತಿದ್ದೇವೆಅನಿತಾ ರಮೇಶ್ ನಗರಸಭೆ ಅಧ್ಯಕ್ಷೆ
ಅಹಮದಾಬಾದ್ ಚಂಡೀಗಡ ಸ್ಥಳೀಯ ಸಂಸ್ಥೆಗಳ ಜೊತೆ ಈಗಾಗಲೇ ಮಾತುಕತೆ ನಡೆಸಲಾಗಿದೆ. ಎಷ್ಟು ಜನರು ಬರುತ್ತಾರೆ ಎಂಬುದನ್ನು ನೋಡಿಕೊಂಡು ಮುಂದಿನ ಕ್ರಮ ವಹಿಸಲಾಗುವುದುಎಸ್.ಲಕ್ಷ್ಮಿ ಪೌರಾಯುಕ್ತೆ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.