
ಚಿತ್ರದುರ್ಗ: ‘ಗಣಿಬಾಧಿತ ಪ್ರದೇಶದಲ್ಲಿರುವ ಶಾಲೆಗಳ 1ರಿಂದ 10ನೇ ತರಗತಿ ವಿದ್ಯಾರ್ಥಿಗಳಿಗೆ ಪೂರಕ ಪೌಷ್ಟಿಕ ಆಹಾರ ವಿತರಿಸುವ ಕಾರ್ಯಕ್ರಮ ನ.3ರಿಂದ ಆರಂಭವಾಗಲಿದೆ. ಅಧಿಕಾರಿಗಳು ಈ ಮಹತ್ವಪೂರ್ಣ ಯೋಜನೆಯನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಬೇಕು’ ಎಂದು ಜಿಲ್ಲಾಧಿಕಾರಿ ಟಿ.ವೆಂಕಟೇಶ್ ಶಾಲಾ ಶಿಕ್ಷಣ ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಿದರು.
ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಗುರುವಾರ ನಡೆದ ಗಣಿಬಾಧಿತ ತಾಲ್ಲೂಕುಗಳ ಪ್ರಾಥಮಿಕ ಮತ್ತು ಪ್ರೌಢಶಾಲೆಗಳ ವಿದ್ಯಾರ್ಥಿಗಳಿಗೆ ಪೂರಕ ಪೌಷ್ಟಿಕ ಆಹಾರ ವಿತರಿಸುವ ಕಾರ್ಯಕ್ರಮದ ಅನುಷ್ಠಾನದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
‘ಕರ್ನಾಟಕ ಗಣಿ ಪರಿಸರ ಪುನಶ್ಚೇತನ ನಿಗಮ (ಕೆಎಂಇಆರ್ಸಿ)ದ ಸಿಇಪಿಎಂಐಜೆಡ್ ಯೋಜನೆಯ ಆರ್ಥಿಕ ಅನುದಾನದಡಿ ಜಿಲ್ಲೆಯ ಗಣಿಬಾಧಿತ ತಾಲ್ಲೂಕುಗಳಾದ ಚಿತ್ರದುರ್ಗ, ಹೊಸದುರ್ಗ, ಹೊಳಲ್ಕೆರೆ ಮತ್ತು ಮೊಳಕಾಲ್ಮುರು ತಾಲ್ಲೂಕು ವ್ಯಾಪ್ತಿಯ ಸರ್ಕಾರಿ ಪ್ರಾಥಮಿಕ ಮತ್ತು ಪ್ರೌಢಶಾಲೆ ವಿದ್ಯಾರ್ಥಿಗಳಿಗೆ ಅನುಕೂಲವಾಗಲಿದೆ. ಅಪೌಷ್ಟಿಕತೆ, ರಕ್ತಹೀನತೆ ಮತ್ತು ಬಹು ಪೋಷಕಾಂಶಗಳ ನ್ಯೂನತೆಗಳಿಂದ ಬಳಲುತ್ತಿರುವ ಮಕ್ಕಳ ಆರೋಗ್ಯ ಕಾಪಾಡಲು ಯೋಜನೆ ಜಾರಿಗೊಳಿಸಲಾಗಿದೆ’ ಎಂದರು.
‘ಗಣಿಭಾದಿತ ಪ್ರದೇಶಗಳ ಆರೋಗ್ಯ ಮತ್ತು ಬೆಳವಣಿಗೆಯ ಗುಣಮಟ್ಟವನ್ನು ಸುಧಾರಿಸಿ, ಶೈಕ್ಷಣಿಕವಾಗಿ ಅಭಿವೃದ್ಧಿಗೊಳಿಸಲು ಯೋಜನೆ ಅನುಕೂಲವಾಗಲಿದೆ. ಸರ್ಕಾರದ ಸುತ್ತೊಲೆ ಅನ್ವಯ ಕಟ್ಟುನಿಟ್ಟಾಗಿ ಮಾರ್ಗಸೂಚಿಯನ್ನು ಪಾಲಿಸಬೇಕು. ಶಾಲಾ ಶಿಕ್ಷಣ ಇಲಾಖೆಯ ಯೋಜನೆಗಳ ಜೊತೆಯಲ್ಲಿಯೇ ಹೆಚ್ಚುವರಿಯಾಗಿ ಪೂರಕ ಪೌಷ್ಟಿಕ ಆಹಾರ ವಿತರಣೆ ಕಾರ್ಯಕ್ರಮವನ್ನು ಅನುಷ್ಠಾನಗೊಳಿಸಬೇಕು. ಯೋಜನೆಯಲ್ಲಿ ಯಾವುದೇ ಲೋಪದೋಷಗಳು, ವ್ಯತ್ಯಾಸಗಳು ಆಗದಂತೆ ಕ್ರಮವಹಿಸಬೇಕು’ ಎಂದು ಸೂಚಿಸಿದರು.
‘ಶಾಲಾ ಮಕ್ಕಳಿಗೆ ಪೂರಕ ಪೌಷ್ಟಿಕ ಆಹಾರ ಬಹಳ ಮುಖ್ಯವಾಗಿದ್ದು, ದೈಹಿಕವಾಗಿ ಮತ್ತು ಮಾನಸಿಕವಾಗಿ ಸದೃಢರಾಗುವುದು ಅವಶ್ಯಕತೆ ಇದೆ. ಇದು ಮಕ್ಕಳು ಚಟುವಟಿಕೆಯಿಂದ ಇರಲು ಸಾಧ್ಯವಾಗಲಿದೆ. ಇದರ ಜೊತೆಗೆ ಕಲಿಕೆಯ ಗುಣಮಟ್ಟವೂ ಉತ್ತಮವಾಗಲಿದೆ . ಆಹಾರ ವಿತರಣೆಯ ಆಕರ್ಷಣೆಯಿಂದ ಮಕ್ಕಳು ಶಾಲೆಯಿಂದ ಹೊರಗುಳಿಯುವುದು ಸೇರಿದಂತೆ ಬಹಳಷ್ಟು ಬದಲಾಣೆಗಳು ಆಗಲಿದೆ. ಜಿಲ್ಲೆಯಲ್ಲಿ ಎಸ್ಎಸ್ಎಲ್ಸಿ ಪರೀಕ್ಷಾ ಫಲಿತಾಂಶವು ಹೆಚ್ಚಳವಾಗಲು ಸಹಕಾರಿಯಾಗಲಿದೆ’ ಎಂದರು.
‘ಪೂರಕ ಪೌಷ್ಟಿಕ ಆಹಾರ ವಿತರಣೆ ಕಾರ್ಯಕ್ರಮಕ್ಕೆ ಮುಖ್ಯ ಶಿಕ್ಷಕರು ಹಾಗೂ ಎಸ್ಡಿಎಂಸಿ ಅಧ್ಯಕ್ಷರು, ಪೋಷಕ ಪ್ರತಿನಿಧಿಗಳು, ತಾಯಂದಿರು ಸೇರಿ ರಚಿಸಲಾದ ಖರೀದಿ ಸಮಿತಿಯ ವಿತರಣಾ ಕಾರ್ಯ ನಡೆಯಬೇಕು. ಆಹಾರ ಪದಾರ್ಥಗಳ ಗುಣಮಟ್ಟ ಪರಿಶೀಲಿಸಿ ನಿಗಧಿತ ಘಟಕ ವೆಚ್ಚ ಮೀರದಂತೆ ಅಗತ್ಯ ಪ್ರಮಾಣದಲ್ಲಿ ಖರೀದಿಸಲು ಕ್ರಮವಹಿಸಬೇಕು’ ಎಂದರು.
‘ಸ್ಥಳೀಯ ರೈತರಿಂದ, ಮಾರಾಟ ಮಳಿಗೆಗಳಿಂದ, ಬೆಳೆಗಾರರಿಂದ ಹಾಗೂ ತೋಟಗಾರಿಕೆ ಇಲಾಖೆಯ ಮಾರಾಟ ಮಳಿಗೆಯಿಂದ ಉತ್ತಮ ಗುಣಮಟ್ಟದ ಹಣ್ಣು, ಕಾಳುಗಳು, ಸೊಪ್ಪು, ತರಕಾರಿಗಳನ್ನು ನೇರವಾಗಿ ಖರೀದಿಸಬೇಕು. ಶಾಲೆಯಲ್ಲಿ ಬಿಲ್, ವೋಚರ್ಗಳನ್ನು ಪ್ರತ್ಯೇಕ ದಾಖಲೆಯಲ್ಲಿ ಧೃಢೀಕರಿಸಿ ನಿರ್ವಹಿಸಬೇಕು. ಆಹಾರ ಪದಾರ್ಥಗಳ ಖರೀದಿಯ ಬಿಲ್ ವೋಚರ್ಗಳನ್ನು ಮುಖ್ಯ ಶಿಕ್ಷಕರ ಹಾಗೂ ಎಸ್ಡಿಎಂಸಿ ಅಧ್ಯಕ್ಷರ ದೃಢೀಕರಣ ಸಹಿ ಮಾಡಿಸಬೇಕು’ ಎಂದರು.
‘ಖರೀದಿ ಸಮಿತಿಯ ಪರಿಶೀಲನೆಗೆ ಒಳಪಡಿಸಿ ಶಾಲೆಯಲ್ಲಿ ಮುಖ್ಯ ಶಿಕ್ಷಕರು ದಾಖಲೆಗಳನ್ನು ತಪ್ಪದೇ ನಿರ್ವಹಿಸಬೇಕು. ಪ್ರತಿ ದಿನ ಶಾಲಾ ಅವಧಿಯ ನಂತರ ಸಿಇಪಿಎಂಐಜೆಡ್ ಯೋಜನೆಯಡಿಯಲ್ಲಿ ಪೂರಕ ಪೌಷ್ಟಿಕ ಆಹಾರ ವಿತರಿಸಲು ಕ್ರಮ ವಹಿಸಬೇಕು. ಮಧ್ಯಾಹ್ನ ಬಿಸಿಯೂಟ ಯೋಜನೆ ನಿರ್ವಹಣೆ ಮಾಡಿದಂತೆಯೇ ಶಾಲಾ ಶಿಕ್ಷಕರು ಮತ್ತು ಎಸ್ಡಿಎಂಸಿ ಯವರು ಪೂರಕ ಪೌಷ್ಟಿಕ ಆಹಾರ ವಿತರಿಸುವ ಕಾರ್ಯಕ್ರಮವನ್ನು ನಿರ್ವಹಣೆ ಮಾಡಬೇಕು’ ಎಂದರು.
‘ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿಗಳು, ಕ್ಷೇತ್ರ ಶಿಕ್ಷಣಾಧಿಕಾರಿಗಳು, ಪಿಎಂ ಪೋಷಣ್ ಸಹಾಯಕ ನಿರ್ದೇಶಕರು, ಕ್ಷೇತ್ರ ಸಮನ್ವಾಯಾಧಿಕಾರಿ, ಕ್ಲಸ್ಟರ್ ಸಂಪನ್ಮೂಲ ವ್ಯಕ್ತಿ, ಮುಖ್ಯ ಶಿಕ್ಷಕರು ಹಾಗೂ ಎಸ್ಡಿಎಂಸಿ ಸಮಿತಿಯ ಅಧ್ಯಕ್ಷರು ಒಳಗೊಂಡ ತಾಲ್ಲೂಕು ಹಂತದ ಸಮಿತಿಗಳು ಕ್ರಿಯಾಶೀಲವಾಗಿ ಕಾರ್ಯನಿರ್ವಹಿಸಬೇಕು’ ಎಂದು ಜಿಪಂ ಸಿಇಒ ಡಾ.ಎಸ್.ಆಕಾಶ್ ಸೂಚನೆ ನೀಡಿದರು.
ಸಭೆಯಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿಳಾದ ಗಿರಿಜಾ, ನಿರ್ಮಲಾ ದೇವಿ, ಶ್ರೀನಿವಾಸ್, ಕ್ಷೇತ್ರ ಸಮನ್ವಯಾಧಿಕಾರಿಗಳಾದ ಸಂಪತ್ ಕುಮಾರ್, ಸುರೇಂದ್ರ ನಾಯ್ಕ್, ಶ್ರೀನಿವಾಸ್, ತಿಪ್ಪೇಸ್ವಾಮಿ ಇದ್ದರು.
ವಿವಿಧ ಕಾಳು ಹಣ್ಣು...
ಶಾಲಾ ಶಿಕ್ಷಣ ಇಲಾಖೆ ಉಪ ನಿರ್ದೇಶಕ ಎಂ.ಆರ್.ಮಂಜುನಾಥ್ ಮಾತನಾಡಿ ‘ಪೂರಕ ಪೌಷ್ಟಿಕ ಆಹಾರ ಯೋಜನೆಯಡಿ ಪ್ರತಿ ದಿನ 50 ಗ್ರಾಂನಂತೆ ಸೋಮವಾರ ಕಡಲೆಕಾಳು ಉಸುಳಿ, ಮಂಗಳವಾರ ಹೆಸರು ಕಾಳು ಉಸುಳಿ, ಬುಧವಾರ ಶೇಂಗಾ ಉಸುಳಿ, ಗುರುವಾರ ಕಡಲೆಕಾಳು ಉಸುಳಿ, ಶುಕ್ರವಾರ ಹೆಸರು ಕಾಳು ಉಸುಳಿ ಹಾಗೂ ವಿವಿಧ ಬಗೆಯ ಹಣ್ಣುಗಳನ್ನು ನೀಡಲಾಗುವುದು. ಬಿಸಿಯೂಟ ನಿರ್ವಹಣೆ ಮಾಡಿದಂತೆಯೇ ಪೂರ ಪೌಷ್ಟಿಕ ಆಹಾರ ಯೋಜನೆಯನ್ನು ಅನುಷ್ಠಾನಗೊಳಿಸಲಾಗವುದು’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.