ಚಳ್ಳಕೆರೆ: ಸಂಸ್ಕಾರ, ಸಂಸ್ಕೃತಿ ಜತೆಗೆ ದೇಸಿ ಕಲೆಗಳ ಬಗ್ಗೆ ಆಸಕ್ತಿ ಬೆಳೆಸಿಕೊಳ್ಳಬೇಕು ಎಂದು ಶಾಸಕ ಟಿ.ರಘುಮೂರ್ತಿ ಸಲಹೆ ನೀಡಿದರು.
ಕಾಲೇಜು ಶಿಕ್ಷಣ ಇಲಾಖೆ, ದಾವಣಗೆರೆ ವಿಶ್ವವಿದ್ಯಾಲಯ ಮತ್ತು ಕಾಲೇಜು ಸಾಂಸ್ಕೃತಿಕ ಸಮಿತಿ ಸಹಯೋಗದಲ್ಲಿ ಎಚ್ಪಿಪಿಸಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಬುಧವಾರ ಆಯೋಜಿಸಿದ್ದ ಜಾನಪದ ಸಂಭ್ರಮ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಎಷ್ಟೇ ಹಣವಿದ್ದರೂ ಬಾಲ್ಯದಲ್ಲಿ ಉಂಡು ಸಂತಸಪಟ್ಟ ಊಟ ಉಪಚಾರಗಳು ಇಂದು ದೊರೆಯುತ್ತಿಲ್ಲ. ಅಂದಿನ ಆಟಗಳು ಬಾಲ್ಯದ ಭವ್ಯ ನೆನಪು ಕಟ್ಟಿಕೊಡುತ್ತವೆ. ಮೊಬೈಲ್, ವಾಟ್ಸ್ಆ್ಯಪ್, ಫೇಸ್ಬುಕ್ ಸಾಮಾಜಿಕ ಜಾಲತಾಣಗಳಲ್ಲಿ ಮುಳುಗದೆ ಮೌಲ್ಯಯುತ ವಿದ್ಯೆ ಕಲಿಯಬೇಕು ಎಂದರು.
ಸಾಂಸ್ಕೃತಿಕ ಸಮಿತಿ ಸಂಚಾಲಕ ಪ್ರೊ.ಕೆ.ಆರ್.ಜೆ.ರಾಜಕುಮಾರ್, ಪ್ರಾಂಶುಪಾಲ ಪ್ರೊ.ಬಿ.ಎಸ್.ಮಂಜುನಾಥ್, ಇತಿಹಾಸ ಪ್ರಾಧ್ಯಾಪಕಿ ಪ್ರೊ.ಬಿ.ಜಯಮ್ಮ, ಕನ್ನಡ ಪ್ರಾಧ್ಯಾಪಕ ಪ್ರೊ.ಚಿತ್ತಯ್ಯ ಮಾತನಾಡಿದರು.
ಪೂರ್ಣಕುಂಭ, ತಮಟೆ, ಕಹಳೆ, ಉರುಮೆ, ಗೊರವರ ಕುಣಿತ, ಜಾನಪದ ವಾದ್ಯ ಮತ್ತು ಅಲಂಕರಿಸಿದ ಜೋಡೆತ್ತು ಗಾಡಿ ಮೂಲಕ ಶಾಸಕರನ್ನು ನಗರದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸಲಾಯಿತು.
ದೇಸಿ ದಿರಿಸಿನ ಬಣ್ಣ ಬಣ್ಣದ ಸೀರೆ ಉಟ್ಟಿದ್ದ ವಿದ್ಯಾರ್ಥಿನಿಯರು, ಬಿಳಿ ಬಣ್ಣದ ಶರ್ಟ್, ಪಂಚೆ ತೊಟ್ಟಿದ್ದ ವಿದ್ಯಾರ್ಥಿಗಳು ವಾದ್ಯದ ತಾಳಕ್ಕೆ ಹೆಜ್ಜೆ ಹಾಕುತ್ತಾ ಮೆರವಣಿಗೆಯಲ್ಲಿ ಸಾಗಿದರು.
ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಬಿ.ಪಿ.ಪ್ರಕಾಶಮೂರ್ತಿ, ಪಂಚ ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ತಾಲ್ಲೂಕು ಘಟಕದ ಅಧ್ಯಕ್ಷ ಗದ್ದಿಗೆ ತಿಪ್ಪೇಸ್ವಾಮಿ, ಬ್ಲಾಕ್ ಕಾಂಗ್ರೆಸ್ ತಾಲ್ಲೂಕು ಸಮಿತಿ ಅಧ್ಯಕ್ಷ ಕೆ.ವೀರಭದ್ರಯ್ಯ, ಪರಶುರಾಂಪುರ ಹೋಬಳಿ ಸಮಿತಿ ಅಧ್ಯಕ್ಷ ಜಿ.ಟಿ.ಶಶಿಧರ್, ನಗರಸಭೆ ಅಧ್ಯಕ್ಷೆ ಮಂಜುಳಾ ಆರ್., ಉಪಾಧ್ಯಕ್ಷೆ ಕವಿತಾ ಬೋರಯ್ಯ, ಸ್ಥಾಯಿ ಸಮಿತಿ ಅಧ್ಯಕ್ಷ ಮಲ್ಲಿಕಾರ್ಜುನ, ಎಂ.ಜೆ.ರಾಘವೇಂದ್ರ, ರಮೇಶ್ಗೌಡ, ಸದಸ್ಯೆ ಸುಜಾತಾ, ಹಿರಿಯ ಪ್ರಾಧ್ಯಪಕ ಪ್ರೊ.ಮಂಜುನಾಥ್, ಪ್ರೊ.ಬಣಕರ್, ಪ್ರೊ.ರಂಗಸ್ವಾಮಿ ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.