ADVERTISEMENT

ಹಿರಿಯರ ಆರೋಗ್ಯದತ್ತ ಕಾಳಜಿವಹಿಸಿ

ವಿಶ್ವ ಹಿರಿಯ ನಾಗರಿಕರ ದಿನಾಚರಣೆಯಲ್ಲಿ ಜಿಲ್ಲಾಧಿಕಾರಿ ಕವಿತಾ ಎಸ್‌. ಮನ್ನಿಕೇರಿ

​ಪ್ರಜಾವಾಣಿ ವಾರ್ತೆ
Published 2 ಅಕ್ಟೋಬರ್ 2022, 4:52 IST
Last Updated 2 ಅಕ್ಟೋಬರ್ 2022, 4:52 IST
ಚಿತ್ರದುರ್ಗದ ತರಾಸು ರಂಗಮಂದಿರದಲ್ಲಿ ಶನಿವಾರ ಆಯೋಜಿಸಿದ್ದ ವಿಶ್ವ ಹಿರಿಯ ನಾಗರಿಕರ ದಿನಾಚರಣೆ ಕಾರ್ಯಕ್ರಮವನ್ನು ಜಿಲ್ಲಾಧಿಕಾರಿ ಕವಿತಾ ಎಸ್‌.ಮನ್ನಿಕೇರಿ ಉದ್ಘಾಟಿಸಿದರು. ಜಿಲ್ಲಾ ಪಂಚಾಯಿತಿ ಸಿಇಒ ಡಾ.ಕೆ.ನಂದಿನಿ ದೇವಿ ಇದ್ದರು.
ಚಿತ್ರದುರ್ಗದ ತರಾಸು ರಂಗಮಂದಿರದಲ್ಲಿ ಶನಿವಾರ ಆಯೋಜಿಸಿದ್ದ ವಿಶ್ವ ಹಿರಿಯ ನಾಗರಿಕರ ದಿನಾಚರಣೆ ಕಾರ್ಯಕ್ರಮವನ್ನು ಜಿಲ್ಲಾಧಿಕಾರಿ ಕವಿತಾ ಎಸ್‌.ಮನ್ನಿಕೇರಿ ಉದ್ಘಾಟಿಸಿದರು. ಜಿಲ್ಲಾ ಪಂಚಾಯಿತಿ ಸಿಇಒ ಡಾ.ಕೆ.ನಂದಿನಿ ದೇವಿ ಇದ್ದರು.   

ಚಿತ್ರದುರ್ಗ: ಹಿರಿಯ ನಾಗರಿಕರನ್ನು ಗೌರವಯುತವಾಗಿ ನಡೆಸಿಕೊಳ್ಳುವ ಮನೋಭಾವವನ್ನು ಪ್ರತಿಯೊಬ್ಬರೂ ಬೆಳೆಸಿಕೊಳ್ಳಬೇಕು. ಅವರ ಆರೋಗ್ಯದ ಬಗ್ಗೆ ಸಹ ಹೆಚ್ಚಿನ ಕಾಳಜಿವಹಿಸಿ ಚೆನ್ನಾಗಿ ನೋಡಿಕೊಳ್ಳಬೇಕು ಎಂದು ಜಿಲ್ಲಾಧಿಕಾರಿ ಕವಿತಾ ಎಸ್‌. ಮನ್ನಿಕೇರಿ ತಿಳಿಸಿದರು.

ನಗರದ ತರಾಸು ರಂಗಮಂದಿರದಲ್ಲಿ ಶನಿವಾರ ಜಿಲ್ಲಾಡಳಿತದಿಂದ ಆಯೋಜಿಸಿದ್ದ ವಿಶ್ವ ಹಿರಿಯ ನಾಗರಿಕರ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

‘ನಿತ್ಯವೂ ಹಿರಿಯರ ಯೋಗಕ್ಷೇಮ ವಿಚಾರಿಸಿಕೊಳ್ಳಬೇಕು. ಈ ಮೂಲಕ ನಾವೆಲ್ಲರೂ ಅವರು ಕ್ಷೇಮಾಭಿವೃದ್ಧಿಗೆ ಕೈ ಜೋಡಿಸೋಣ’ ಎಂದು ಹೇಳಿದರು.

ADVERTISEMENT

‘ಜಿಲ್ಲೆಯಲ್ಲಿ 2011ರ ಜನಗಣತಿ ಪ್ರಕಾರ 16.59 ಲಕ್ಷ ಜನಸಂಖ್ಯೆ ಇದ್ದು, ಅದರಲ್ಲಿ 1.28 ಲಕ್ಷ ಜನ ಹಿರಿಯ ನಾಗರಿಕರಿದ್ದಾರೆ. ಕೇಂದ್ರ ಸರ್ಕಾರದ ಅನುದಾನದಡಿ ನಗರದ ಸದ್ಗುರು ಕಬೀರಾನಂದ ವೃದ್ಧಾಶ್ರಮ, ಹೊಸದುರ್ಗದ ರಾಜ ಯೋಗಿ ಸಿದ್ದಾರ್ಥ ವೃದ್ಧಾಶ್ರಮ ನಡೆಸಲಾಗುತ್ತಿದೆ. ಪ್ರತಿ ಕೇಂದ್ರದಲ್ಲಿ 25 ಜನರಿಗೆ ಊಟ ವಸತಿ ಹಾಗೂ ಔಷಧೋಪಚಾರ ಮಾಡಲಾಗುತ್ತಿದೆ’ ಎಂದುಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿ ಜೆ.ವೈಶಾಲಿ ತಿಳಿಸಿದರು.

ಪ್ರಶಸ್ತಿ ವಿಜೇತರು: ಡಿ.ಸತ್ಯನಾರಾಯಣ 200 ಮೀಟರ್ ನಡಿಗೆಯಲ್ಲಿ ಪ್ರಥಮ, ಮಹಿಳಾ ವಿಭಾಗದಲ್ಲಿ ಟಿ.ಕಮಲಮ್ಮ 200 ಮೀಟರ್‌ ಪ್ರಥಮ, ಸುರೇಗೌಡ ಏಕಪಾತ್ರಾ ಅಭಿನಯ ಪ್ರಥಮ ಹೀಗೆ ಕ್ರೀಡಾ ವಿಭಾಗದಲ್ಲಿ 51 ಹಾಗೂ ಸಾಂಸ್ಕೃತಿಕ ವಿಭಾಗದಲ್ಲಿ 88 ಪ್ರಶಸ್ತಿಗಳನ್ನು ನೀಡಲಾಯಿತು.

ನೂರು ವರ್ಷ ಪೂರೈಸಿದ ಜಿ.ಆರ್‌. ಹಳ್ಳಿಯ ಅಡಿವೆಪ್ಪ, ತಿರುಮಲಾಪುರದ ಶಾಂತಮ್ಮ, ಸೊಂಡೆಕೊಳದ ಸುಶೀಲಮ್ಮ, ಬಸಮ್ಮ, ಕುರುವಿನ ಕಟ್ಟೆ ಸರ್ಕಲ್‌ನ ಕೊಲ್ಲಮ್ಮ, ಆಜಾದ್ ನಗರದ ರೆಹಮಾನ್‌ ಸಾಬ್‌ ಹಾಗೂ ಕಲೆ, ಸಾಹಿತ್ಯ, ವೈದ್ಯಕೀಯ ಕ್ಷೇತ್ರಗಳಲ್ಲಿ ವಿಶೇಷ ಸಾಧನೆಗೈದ ಜಿಲ್ಲೆಯ ಹಿರಿಯ ನಾಗರಿಕರನ್ನುಸನ್ಮಾನಿಸಲಾಯಿತು.

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪ ನಿರ್ದೇಶಕಿ ಭಾರತಿ ಆರ್‌. ಬಣಕಾರ್‌, ನಗರಸಭೆ ಉಪಾಧ್ಯಕ್ಷೆ ಮಂಜುಳಾ, ಸಿಡಿಪಿಒ ಸುಧಾ, ಹಿರಿಯ ನಾಗರಿಕರ ಜಿಲ್ಲಾ ಘಟಕದ ಅಧ್ಯಕ್ಷ ರಂಗಪ್ಪ ರೆಡ್ಡಿ, ರಾಜ್ಯ ಸರ್ಕಾರಿ ನಿವೃತ್ತ ನೌಕರರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ವೈ.ಚಂದ್ರಶೇಖರಯ್ಯ, ನಿವೃತ್ತ ಉಪನ್ಯಾಸಕಿ ಸಿ.ಬಿ.ಶೈಲಾ ಜಯಕುಮಾರ್‌ ಇದ್ದರು.

ಹಿರಿಯ ನಾಗರಿಕರ ಅಭಿವೃದ್ಧಿಗೆ ಸರ್ಕಾರ ಸಾಕಷ್ಟು ಯೋಜನೆ ಜಾರಿಗೆ ತಂದಿದೆ. ಅವರ ರಕ್ಷಣೆಗಾಗಿ ಜಿಲ್ಲಾ ಹಾಗೂ ತಾಲ್ಲೂಕು ಮಟ್ಟಗಳಲ್ಲಿ ಅಧಿಕಾರಿಗಳಿದ್ದಾರೆ. ಯಾವುದೇ ಸಮಸ್ಯೆಗಳಿದ್ದರೂ ಪರಿಹರಿಸಿಕೊಳ್ಳಬಹುದು.

-ಡಾ.ಕೆ.ನಂದಿನಿ ದೇವಿ, ಜಿಲ್ಲಾ ಪಂಚಾಯಿತಿ ಸಿಇಒ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.