ಚಿತ್ರದುರ್ಗ: ಬೆಳಗೆರೆ ಗ್ರಾಮ ಪಂಚಾಯಿತಿಯ 14ನೇ ಹಣಕಾಸಿನ ಉಳಿಕೆ ಹಣದಲ್ಲಿ ರೂಪಿಸಿದ ಕ್ರಿಯಾ ಯೋಜನೆಗೆ ಅನುಮೋದನೆ ನೀಡಲು ಪಿಡಿಒ ಬಳಿ ₹ 20 ಸಾವಿರ ಲಂಚ ಪಡೆಯುತ್ತಿದ್ದ ಚಳ್ಳಕೆರೆ ತಾಲ್ಲೂಕು ಪಂಚಾಯಿತಿ ಇ.ಓ .ಶ್ರೀಧರ್ ಐ ಬಾರ್ ಕೇರ್ ಎಂಬುವರು ಭ್ರಷ್ಟಾಚಾರ ನಿಗ್ರಹ ದಳದ (ಎಸಿಬಿ) ಬಲೆಗೆ ಬಿದ್ದಿದ್ದಾರೆ.
ಶ್ರೀಧರ್ ಅವರ ಮನೆ, ಕಚೇರಿ ಸೇರಿ ಹಲವೆಡೆ ದಾಳಿ ನಡೆಸಿದ ಎಸಿಬಿ ಅಧಿಕಾರಿಗಳಿಗೆ ಆಸ್ತಿ ಪತ್ರಗಳು, ಬ್ಯಾಂಕ್ ಖಾತೆ ಹಾಗೂ ₹ 6 ಲಕ್ಷ ನಗದು ಪತ್ತೆಯಾಗಿದೆ. ನಗದು ಹಣದ ಬಗ್ಗೆ ಸೂಕ್ತ ಮಾಹಿತಿ ನೀಡದ ಕಾರಣ ಶ್ರೀಧರ್ ಅವರನ್ನು ಎಸಿಬಿ ಬಂಧಿಸಿದೆ.
ಚಳ್ಳಕೆರೆ ತಾಲ್ಲೂಕಿನ ಬೆಳಗೆರೆ ಗ್ರಾಮ ಪಂಚಾಯಿತಿಯಲ್ಲಿ 14ನೇ ಹಣಕಾಸಿನಲ್ಲಿ ₹ 7.71 ಲಕ್ಷ ಅನುದಾನ ಉಳಿದಿತ್ತು. ಉಳಿಕೆ ಹಣದಲ್ಲಿ ಹತ್ತು ಅಭಿವೃದ್ಧಿ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲು ಕ್ರಿಯೆಯೋಜನೆ ಸಿದ್ಧಪಡಿಸಿ ಜಿಲ್ಲಾ ಪಂಚಾಯಿತಿಗೆ ಸಲ್ಲಿಸಲಾಗಿತ್ತು. ಕ್ರಿಯಾ ಯೋಜನೆಗೆ ಅನುಮೋದನೆ ನೀಡಿದ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಅವರು ಶ್ರೀಧರ್ ಅವರಿಗೆ ರವಾನೆ ಮಾಡಿದ್ದರು.
ಕ್ರಿಯಾ ಯೋಜನೆಗೆ ಅನುಮೋದನೆ ನೀಡಿದ ಪ್ರತಿಯನ್ನು ಹಸ್ತಾಂತರಿಸಲು ಬೆಳಗೆರೆ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಗುಂಡಪ್ಪ ಅವರಿಗೆ ₹ 20 ಸಾವಿರ ಲಂಚಕ್ಕೆ ಬೇಡಿಕೆ ಇಟ್ಟಿದ್ದರು. ಶುಕ್ರವಾರ ರಾತ್ರಿ 10 ಗಂಟೆಗೆ ಲಂಚದ ಹಣವನ್ನು ಪಡೆಯುತ್ತಿದ್ದಾಗ ಎಸಿಬಿ ಡಿವೈಎಸ್ಪಿ ಬಸವರಾಜ್ ಆರ್.ಮಗದುಮ್ ನೇತೃತ್ವದ ತಂಡ ದಾಳಿ ನಡೆಸಿತ್ತು. ಬಳಿಕ ಚಿತ್ರದುರ್ಗದ ಮಹಾವೀರ ಬಡಾವಣೆಯಲ್ಲಿರುವ ಶ್ರೀಧರ್ ಮನೆ ಮೇಲೆಯೂ ದಾಳಿ ನಡೆಸಲಾಗಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.