ADVERTISEMENT

ಬಿಹಾರ ಮೂಲದ ಕೂಲಿ ಕಾರ್ಮಿಕನ ಭೀಕರ ಹತ್ಯೆ

​ಪ್ರಜಾವಾಣಿ ವಾರ್ತೆ
Published 8 ಜುಲೈ 2021, 4:17 IST
Last Updated 8 ಜುಲೈ 2021, 4:17 IST

ಚಳ್ಳಕೆರೆ: ನಗರದ ಕುರುಬರ ವಿದ್ಯಾರ್ಥಿನಿಲಯದ ಆವರಣದಲ್ಲಿ ಬುಧವಾರ ಮಧ್ಯಾಹ್ನ ಬಿಹಾರ ಮೂಲದ 25ರಿಂದ 30 ವರ್ಷದ ಯುವಕನೊಬ್ಬನನ್ನು ದೊಣ್ಣೆಯಿಂದ ಹೊಡೆದು ಕಲ್ಲಿನಿಂದ ಜಜ್ಜಿ ಬರ್ಬರವಾಗಿ ಹತ್ಯೆ ಮಾಡಲಾಗಿದೆ.

ವಿದ್ಯಾರ್ಥಿನಿಲಯದ ಆವರಣದ ಕನಕ ಭವನದ ಬಳಿ ಯುವಕನ ತಲೆಗೆ ದೊಣ್ಣೆಯಿಂದ ಭೀಕರವಾಗಿ ಹೊಡೆಯಲಾಗಿದ್ದು, ತಲೆಯಿಂದ ಹೆಚ್ಚು ರಕ್ತಸ್ರಾವವಾಗಿದೆ. ಮುಖವನ್ನು ಕಲ್ಲಿನಿಂದ ಜಜ್ಜಲಾಗಿದೆ. ಯುವಕ ಕೆಂಪು ಬಣ್ಣದ ಟೀ ಶರ್ಟ್ ಹಾಗೂ ಕಪ್ಪುಬಣ್ಣದ ಪ್ಯಾಂಟ್ ಧರಿಸಿದ್ದು, ಹೆಸರು ಮತ್ತು ಹತ್ಯೆ ಮಾಡಿದ ಆರೋಪಿಗಳ ಸುಳಿವು ಸಿಕ್ಕಿಲ್ಲ.

ಡಿವೈಎಸ್‌ಪಿ ಕಚೇರಿಯ ಕೂಗಳತೆಯ ದೂರದಲ್ಲೇ ಕೊಲೆ ನಡೆದಿದ್ದು, ನಾಗರಿಕರಿಗೆ ಆಚ್ಚರಿ ಮೂಡಿಸಿದೆ. ಕೂಲಿ ಕಾರ್ಮಿಕ ಇರಬಹುದು ಎಂದು ಮೇಲ್ನೋಟಕ್ಕೆ ತಿಳಿದು ಬಂದಿದೆ. ಜಿಲ್ಲಾ ಬೆರಳಚ್ಚು ತಜ್ಞರ ತಂಡ ಹಾಗೂ ಶ್ವಾನ ದಳದ ತಂಡ ಬಂದು ಸ್ಥಳವನ್ನು ಪರಿಶೀಲಿಸಿತು.

ADVERTISEMENT

‘ಕೊಲೆ ಪ್ರಕರಣದ ತನಿಖೆಗೆ ವಿಶೇಷ ಅಧಿಕಾರಿಗಳ ತಂಡವನ್ನು ರಚಿಸಲಾಗುವುದು. ಅಧಿಕಾರಿಗಳು ಹಾಗೂ ತಾಂತ್ರಿಕ ಸಹಾಯದಿಂದ ಹತ್ಯೆ ಮಾಡಿದ ಆರೋಪಿಗಳನ್ನು ಪತ್ತೆ ಹಚ್ಚಲಾಗುವುದು’ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಿ.ರಾಧಿಕಾ ಸುದ್ದಿಗಾರರಿಗೆ ತಿಳಿಸಿದ್ದಾರೆ.

ಶಾಸಕ ಟಿ.ರಘುಮೂರ್ತಿ, ಜಿಲ್ಲಾ ರಕ್ಷಣಾ ಇಲಾಖೆ ಹೆಚ್ಚುವರಿ ಅಧಿಕಾರಿ ಮಹಾಲಿಂಗ ನಂದಗಾವಿ ಅವರು ಭೇಟಿ ನೀಡಿ ಸ್ಥಳ ಪರಿಶೀಲಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.