ಸಿರಿಗೆರೆ: ಭದ್ರಾ ಮೇಲ್ಡಂಡೆ ನೀರಾವರಿ ಹೋರಾಟ ಸಮಿತಿಯ ಜಿಲ್ಲಾ ಘಟಕದ ಪದಾಧಿಕಾರಿಗಳು ಭದ್ರಾ ಮೇಲ್ಡಂಡೆ ಯೋಜನಾ ಪ್ರದೇಶಕ್ಕೆ ಭಾನುವಾರ ಭೇಟಿ ನೀಡಿ ವೀಕ್ಷಿಸಿದರು.
ಅಜ್ಜಂಪುರ ರೈಲ್ವೆ ಬ್ರಿಡ್ಜ್ ಬಳಿಯ ಚಿತ್ರದುರ್ಗ ಶಾಖಾ ಕಾಲುವೆ ವೈ ಜಂಕ್ಷನ್ ವೀಕ್ಷಿಸಿದ ನಂತರ ಅಬ್ಬಿನಹೊಳಲು ಗ್ರಾಮದ ಸಮೀಪ ನಿಂತಿರುವ 100 ಮೀಟರ್ ಕಾಮಗಾರಿ ವೀಕ್ಷಿಸಿದರು.
ಕಾಮಗಾರಿಗೆ ಭೂಮಿ ನೀಡಿದ್ದಕ್ಕೆ ಅತ್ಯಂತ ಕಡಿಮೆ ಪರಿಹಾರ ನಿಗದಿಪಡಿಸಲಾಗಿದೆ ಎಂದು ಭೂ ಮಾಲೀಕರು ಕಾಮಗಾರಿಗೆ ತಡೆವೊಡ್ಡಿದ್ದಾರೆ. ಜೂನ್ 4ರಂದು ಬೆಂಗಳೂರಿನಲ್ಲಿ ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿ ಅವರ ಅಧ್ಯಕ್ಷತೆಯಲ್ಲಿ ಗ್ರಾಮದ ರೈತರು, ಎಂಜಿನಿಯರ್ಗಳ ಸಭೆ ಕರೆಯಲಾಗಿದೆ. ಆ ಸಭೆಯಲ್ಲಿ ರೈತರು ಒಪ್ಪಿಗೆ ಸೂಚಿಸಿದರೆ ಆದಷ್ಟು ಬೇಗ ಕಾಮಗಾರಿ ಪೂರ್ಣಗೊಳಿಸಲಾಗುವುದು ಎಂದು ಯೋಜನಾ ಪ್ರದೇಶದ ವ್ಯವಸ್ಥಾಪಕ ಅನಿಲ್ ಕುಮಾರ್ ಹೇಳಿದರು.
ತಂಡವು ನಂತರ ಮುಗಳಿ, ಹೆಬ್ಬೂರು ಗ್ರಾಮದ ಬಳಿ ಪ್ರಗತಿಯಲ್ಲಿರುವ ಕಾಮಗಾರಿ ವೀಕ್ಷಿಸಿತು.
ಈ ವೇಳೆ ಸಮಿತಿಯ ಮುಖಂಡರಾದ ಚಿಕ್ಕಬ್ಬಿಗೆರೆ ನಾಗರಾಜ್, ಡಿ.ಎಸ್. ಹಳ್ಳಿ ಮಲ್ಲಿಕಾರ್ಜುನ್, ಲವಕುಮಾರ್, ತಿಮ್ಮಯ್ಯ, ಸುರೇಶ್, ಆಡನೂರು ಶಿವಕುಮಾರ್, ರಾಜಶೇಖರ್, ಹೊಳಲ್ಕೆರೆ ಪಟ್ಟಣ ಪಂಚಾಯಿತಿ ಅಧ್ಯಕ್ಷ ಸಿದ್ದರಾಮಪ್ಪ, ಅಜಯ್, ರಾಮರೆಡ್ಡಿ, ಮಲ್ಲಿಕಾರ್ಜುನ್, ಸಿದ್ದಪ್ಪ, ನಾಗಣ್ಣ ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.