ಚಿತ್ರದುರ್ಗ: ‘ಕೋವಿಡ್ ಅನ್ನು ವಿಪತ್ತು ಎಂಬುದಾಗಿ ಘೋಷಿಸಲಾಗಿದೆ. ಜತೆಗೆ ಅನುದಾನ ಮೀಸಲಿರಿಸಲಾಗಿದೆ. ಯಾವುದೇ ಕೊರತೆ ಇಲ್ಲ. ಆದರೆ, ಸಮರ್ಥವಾಗಿ ನಿಭಾಯಿಸಲು ಅಧಿಕಾರಿಗಳು ಸದಾ ಸಜ್ಜಾಗಿರಬೇಕು’ ಎಂದು ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಎನ್. ಮಂಜುನಾಥ್ ಪ್ರಸಾದ್ ಸೂಚನೆ ನೀಡಿದರು.
ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ವಿವಿಧ ಇಲಾಖೆಗಳ ಅಧಿಕಾರಿಗಳೊಂದಿಗೆ ಕೋವಿಡ್ ಹಾಗೂ ಕೃಷಿ ಚಟುವಟಿಕೆಗಳ ಸಂಬಂಧ ಶನಿವಾರ ನಡೆದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದ ಅವರು, ‘ಕೋವಿಡ್ ಹೆಚ್ಚುತ್ತಿರುವ ಜಿಲ್ಲೆಗಳಿಗೆ ನಿಯಂತ್ರಿಸುವ ಕಾರಣಕ್ಕೆ ಈಗಾಗಲೇ ಸರ್ಕಾರ ₹ 250 ಕೋಟಿ ಅನುದಾನ ಬಿಡುಗಡೆ ಮಾಡಿದೆ. ಅನುದಾನದ ಅಗತ್ಯವಿದ್ದಲ್ಲಿ ಗಮನಕ್ಕೆ ತನ್ನಿ’ ಎಂದರು.
‘ಕೋವಿಡ್ ನಿಯಂತ್ರಣಕ್ಕಾಗಿ ಸರ್ಕಾರ ಮೇ 4ರ ವರೆಗೂ ಯಾವುದೇ ಕ್ರಮ ಕೈಗೊಂಡರು ಅದನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಿ. ಕೋವಿಡ್ ಪರೀಕ್ಷೆ ಸಂಖ್ಯೆ ಮತ್ತಷ್ಟು ಹೆಚ್ಚಿಸಿ. ಆರ್ಟಿಪಿಸಿಆರ್ಗೆ 48 ಗಂಟೆ ಸಮಯ ತೆಗೆದುಕೊಳ್ಳುತ್ತಿದ್ದು, 6 ಗಂಟೆಯೊಳಗೆ ಫಲಿತಾಂಶ ನೀಡಲು ಪರೀಕ್ಷಾ ಕಿಟ್, ಲ್ಯಾಬ್ಗಳನ್ನು ಮೇಲ್ದರ್ಜೆಗೆ ಏರಿಸಿಕೊಳ್ಳಿ. ಆಗ ಮಾತ್ರ ಒಬ್ಬರಿಂದ ಮತ್ತೊಬ್ಬರಿಗೆ ಹರಡುವುದನ್ನು ತಡೆಯಲು ಸಾಧ್ಯ’ ಎಂದು ಹೇಳಿದರು.
‘ಮನೆಗಳಲ್ಲಿ ಪ್ರತ್ಯೇಕ ಕೋಣೆ ಇಲ್ಲದ ಕೋವಿಡ್ ಪಾಸಿಟಿವ್ ಇರುವವರನ್ನು ಕೋವಿಡ್ ಕೇಂದ್ರಗಳಿಗೆ ತಕ್ಷಣ ಕರೆತರಬೇಕು. ಅದಕ್ಕಾಗಿ ಎಲ್ಲೆಲ್ಲಿ ಸಮುದಾಯ ಆರೋಗ್ಯ ಕೇಂದ್ರಗಳಿವೆ ಅಂತಹ ಕಡೆ ಕೋವಿಡ್ ಕೇರ್ ಕೇಂದ್ರ ಹೆಚ್ಚಾಗಿ ತೆರೆಯಬೇಕು’ ಎಂದು ಸೂಚನೆ ನೀಡಿದರು.
‘ಕೋವಿಡ್ ನಿಯಂತ್ರಿಸುವ ಸಂಬಂಧ ಸಂಪೂರ್ಣ ಅಧಿಕಾರ ಆಯಾ ಜಿಲ್ಲೆಗಳ ಜಿಲ್ಲಾಧಿಕಾರಿಗೆ ನೀಡಲಾಗಿದೆ. ಅಗತ್ಯ ಸೇವೆಗಳ ಇಲಾಖೆಗಳು ಶೇ 100ರಷ್ಟು ಸಿಬ್ಬಂದಿ, ಇತರೆ ಇಲಾಖೆಗಳ ಸಿಬ್ಬಂದಿ ಶೇ 50ರಷ್ಟು ಹಾಗೂ ಉಳಿದವರು ಕೋವಿಡ್ ಕರ್ತವ್ಯ ನಿರ್ವಹಿಸಬೇಕು. ಕರ್ತವ್ಯಕ್ಕೆ ನಿಯೋಜಿಸುವ ಮತ್ತು ಅಗತ್ಯವಿರುವ ಮೂಲಸೌಕರ್ಯ ಸ್ವಾಧೀನ ಮಾಡಿಕೊಳ್ಳಲು ಅಧಿಕಾರ ನೀಡಲಾಗಿದೆ’ ಎಂದರು.
‘ಕೋವಿಡ್ಗಾಗಿ ಸರ್ಕಾರಿ ಆಸ್ಪತ್ರೆಯಲ್ಲಿ 785 ಹಾಸಿಗೆ ಕಾಯ್ದಿರಿಸಲಾಗಿದೆ. ಅದರಲ್ಲಿ ಆಮ್ಲಜನಕ ಸಹಿತ 540 ಹಾಸಿಗೆಗಳು, 41 ಐಸಿಯು, 57 ವೆಂಟಿಲೇಟರ್ ಸೌಲಭ್ಯ ಹೊಂದಿವೆ. ಖಾಸಗಿಯಾಗಿ 375 ಬೆಡ್ಗಳನ್ನು ಮೀಸಲಿರಿಸಲಾಗಿದೆ. ಜಿಲ್ಲೆಯಲ್ಲಿ ಪ್ರಸ್ತುತ 610 ಕೋವಿಡ್ ಸಕ್ರಿಯ ಪ್ರಕರಣಗಳಿದ್ದು, 72 ಜನರು ಮಾತ್ರ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ’ ಎಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ. ಫಾಲಾಕ್ಷ ಮಾಹಿತಿ ನೀಡಿದರು.
‘ಪ್ರಧಾನಮಂತ್ರಿ ಗರೀಬ್ ಕಲ್ಯಾಣ ಯೋಜನೆ ಜೊತೆಗೆ ರಾಜ್ಯ ಸರ್ಕಾರ ಮೇ, ಜೂನ್ ತಿಂಗಳಲ್ಲಿ ಅರ್ಹರಿಗೆ 10 ಕೆ.ಜಿ ಆಹಾರ ಧಾನ್ಯ ವಿತರಿಸಲು ಸೂಚಿಸಿದೆ. ಇದು ವ್ಯರ್ಥವಾಗದಂತೆ ನೋಡಿಕೊಳ್ಳಬೇಕು. ಇದನ್ನು ಸಂಪೂರ್ಣವಾಗಿ ಬಯೋಮೆಟ್ರಿಕ್ ಮೂಲಕವೇ ವಿತರಿಸಬೇಕು’ ಎಂದು ಮಂಜುನಾಥ್ ಸೂಚಿಸಿದರು.
‘ಪೂರ್ವ ಮುಂಗಾರು ಈಗಾಗಲೇ ಆರಂಭವಾಗಿದೆ. ಬಿತ್ತನೆಗೆ ಅಗತ್ಯವಿರುವ ಬೀಜ ಹಾಗೂ ರಸಗೊಬ್ಬರದ ದಾಸ್ತಾನು ಇಟ್ಟುಕೊಳ್ಳಬೇಕು. ರೈತರಿಗೆ ಯಾವುದೇ ರೀತಿಯಲ್ಲೂ ತೊಂದರೆ ಆಗದಂತೆ, ಕೃಷಿ ಚಟುವಟಿಕೆಗೆ ಹಿನ್ನಡೆ ಉಂಟಾಗದಂತೆ ಕ್ರಮ ಕೈಗೊಳ್ಳಬೇಕು’ ಎಂದು ಜಂಟಿ ಕೃಷಿ ನಿರ್ದೇಶಕರಿಗೆ ತಾಕೀತು ಮಾಡಿದರು.
ಜಿಲ್ಲಾಧಿಕಾರಿ ಕವಿತಾ ಎಸ್. ಮನ್ನಿಕೇರಿ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಡಾ.ಕೆ. ನಂದಿನಿದೇವಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಿ.ರಾಧಿಕಾ, ಹೆಚ್ಚುವರಿ ಜಿಲ್ಲಾಧಿಕಾರಿ ಬಾಲಕೃಷ್ಣ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.