ADVERTISEMENT

ರಂಗಭೂಮಿಯಂಥ ಶಕ್ತಿಶಾಲಿ ಮಾಧ್ಯಮ ಇನ್ನೊಂದಿಲ್ಲ: ಡಾ.ಭರತ್‌ಕುಮಾರ್‌ ಪೊಲಿಪು

ಸಾಣೇಹಳ್ಳಿಯಲ್ಲಿ ನಡೆದ ರಾಷ್ಟ್ರೀಯ ಅಂತರ್ಜಾಲ ನಾಟಕೋತ್ಸವದಲ್ಲಿ ರಂಗಕರ್ಮಿ ಡಾ.ಭರತ್‌ಕುಮಾರ್‌ ಪೊಲಿಪು ಅಭಿಮತ

​ಪ್ರಜಾವಾಣಿ ವಾರ್ತೆ
Published 4 ನವೆಂಬರ್ 2020, 3:29 IST
Last Updated 4 ನವೆಂಬರ್ 2020, 3:29 IST
ಸಾಣೇಹಳ್ಳಿ ಶಿವದೇಶ–ಕಲಾವಿದರು ಅಭಿನಯಿಸಿದ ಮರಣ್‌ ಹೀ ಮಹಾನವಮಿ(ಹಿಂದಿ) ನಾಟಕದ ದೃಶ್ಯ.
ಸಾಣೇಹಳ್ಳಿ ಶಿವದೇಶ–ಕಲಾವಿದರು ಅಭಿನಯಿಸಿದ ಮರಣ್‌ ಹೀ ಮಹಾನವಮಿ(ಹಿಂದಿ) ನಾಟಕದ ದೃಶ್ಯ.   

ಹೊಸದುರ್ಗ: ‘ಸಮಾಜದ ಆರೋಗ್ಯಕ್ಕೆ ದಿವ್ಯ ಔಷಧದಂತಿರುವ ಶರಣರ ತತ್ವ ಸಾರವನ್ನು ಜನರಿಗೆ ತಲುಪಿಸಲು ರಂಗಭೂಮಿ ಬಹುಮುಖ್ಯ ಮಾಧ್ಯಮವಾಗಿದೆ. ಇದರಂತಹ ಶಕ್ತಿಶಾಲಿ ಮಾಧ್ಯಮ ಇನ್ನೊಂದಿಲ್ಲ. ದೇಶದ ಯಾವುದೇ ರಂಗತಂಡ ಸಾಣೇಹಳ್ಳಿ ತಂಡದಂತೆ ಸಾಹಸಗಳನ್ನು ಮಾಡಿದ ಉದಾಹರಣೆಗಳಿಲ್ಲ’ ಎಂದು ಮುಂಬೈ ರಂಗಕರ್ಮಿ ಭರತ್‌ಕುಮಾರ್ ಪೊಲಿಪು ತಿಳಿಸಿದರು.

ತಾಲ್ಲೂಕಿನ ಸಾಣೇಹಳ್ಳಿ ತರಳಬಾಳು ಶಾಖಾ ಮಠದಲ್ಲಿ ಮಂಗಳವಾರ ಸಂಜೆ ನಡೆದ ರಾಷ್ಟ್ರೀಯ ಅಂತರ್ಜಾಲ ನಾಟಕೋತ್ಸವದಲ್ಲಿ ‘ಕನ್ನಡ ರಂಗಭೂಮಿಯ ಮುಂದಿನ ಹೆಜ್ಜೆಗಳು’ ಕುರಿತು ಅವರು ಉಪನ್ಯಾಸ ನೀಡಿದರು.

‘ಪ್ರಸ್ತುತ ಶೈಕ್ಷಣಿಕ ಸವಾಲುಗಳು’ ಕುರಿತು ಉಪನ್ಯಾಸ ನೀಡಿದ ಬೆಂಗಳೂರಿನ ಜೆಎಸ್ಎಸ್ ಕಾಲೇಜಿನ ನಿವೃತ್ತ ಪ್ರಾಂಶುಪಾಲರಾದ ಆರ್.ಜಯಕುಮಾರಿ, ‘ಮುಂದಿನ ಪ್ರಜೆಗಳನ್ನು ಉತ್ತಮ ನಾಗರಿಕನ್ನಾಗಿಸುವ ಶಿಕ್ಷಣ ಜೀವನದ ಅವಿಭಾಜ್ಯ ಅಂಗ. ಆದರೆ, ಕೋವಿಡ್ ಎಲ್ಲರ ಶಿಕ್ಷಣ ಸ್ಥಗಿತಗೊಳಿಸಿದೆ. ಆನ್‌ಲೈನ್ ತರಗತಿ ಗಳು ತಾಂತ್ರಿಕ ಅಸಮರ್ಪಕತೆ, ಮೊಬೈಲ್‌ಗಳು ಇಲ್ಲದಿರುವುದರಿಂದ ಶೇ 40ರಷ್ಟು ವಿದ್ಯಾರ್ಥಿಗಳು ಶಿಕ್ಷಣದಿಂದ ವಂಚಿತರಾಗಿದ್ದಾರೆ. ಇಂಗ್ಲಿಷ್ ಮಾಧ್ಯಮದ ತರಗತಿಗಳು ಆನ್‌ಲೈನ್‌ನಲ್ಲಿ ನಡೆಯುತ್ತಿವೆಯಾದರೂ ಶೇ 40 ವಿದ್ಯಾರ್ಥಿಗಳು ಸಮಯಕ್ಕೆ ಸರಿಯಾಗಿ ಲಾಗಿನ್ ಆಗುತ್ತಿಲ್ಲ. ಮಕ್ಕಳು ಹದಿಹರೆಯದ ವರಾಗಿದ್ದರಿಂದ ಮೊಬೈಲ್‌ನ ದುರ್ಬಳಕೆ ಹೆಚ್ಚಾಗುತ್ತಿದೆ’ ಎಂದು ವಿವರಿಸಿದರು.

ADVERTISEMENT

ನೇತೃತ್ವ ವಹಿಸಿದ್ದ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಮಾತನಾಡಿದರು.

ಶಿವಸಂಚಾರ ಕಲಾವಿದರಾದ ಕೆ.ಜ್ಯೋತಿ, ಕೆ.ದಾಕ್ಷಾಯಣಿ, ಎಚ್‌.ಎಸ್.ನಾಗರಾಜ್ ವಚನಗೀತೆ, ಭಾವಗೀತೆ ಮತ್ತು ರಂಗಗೀತೆಗಳನ್ನು ಹಾಡಿದರು. ಸಾಣೇಹಳ್ಳಿ ಶಿವದೇಶ- ಕಲಾವಿದರು ‘ಮರಣ್‌ ಹೀ ಮಹಾನವಮಿ’ (ಹಿಂದಿ) ನಾಟಕ ಪ್ರದರ್ಶಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.