ADVERTISEMENT

ರಾಜ್ಯಕ್ಕೆ ರೇಷ್ಮೆ ಪರಿಚಯಿಸಿದ್ದು ಟಿಪ್ಪು

ಟಿಪ್ಪು ಸುಲ್ತಾನ್‌ ಜಯಂತಿಯುಲ್ಲಿ ಯುವ ಚಿಂತಕ ರಾ.ಚಿಂತನ್‌ ಅಭಿಮತ

​ಪ್ರಜಾವಾಣಿ ವಾರ್ತೆ
Published 11 ನವೆಂಬರ್ 2022, 6:25 IST
Last Updated 11 ನವೆಂಬರ್ 2022, 6:25 IST
ಚಿತ್ರದುರ್ಗದ ತರಾಸು ರಂಗಮಂದಿರದಲ್ಲಿ ರಾಜ್ಯ ಟಿಪ್ಪುಸುಲ್ತಾನ್‌ ಅಭಿಮಾನಿಗಳ ಮಹಾವೇದಿಕೆಯಿಂದ ಗುರುವಾರ ಆಯೋಜಿಸಿದ್ದ ಮೈಸೂರು ಹುಲಿ ಹಜರತ್ ಟಿಪ್ಪುಸುಲ್ತಾನ್‌ 272ನೇ ಜಯಂತಿ ಹಾಗೂ ಕರ್ನಾಟಕ ರಾಜ್ಯೋತ್ಸವ ಸಮಾರಂಭವನ್ನು ಯುವ ಚಿಂತಕ ರಾ.ಚಿಂತನ್‌ ಉದ್ಘಾಟಿಸಿದರು.
ಚಿತ್ರದುರ್ಗದ ತರಾಸು ರಂಗಮಂದಿರದಲ್ಲಿ ರಾಜ್ಯ ಟಿಪ್ಪುಸುಲ್ತಾನ್‌ ಅಭಿಮಾನಿಗಳ ಮಹಾವೇದಿಕೆಯಿಂದ ಗುರುವಾರ ಆಯೋಜಿಸಿದ್ದ ಮೈಸೂರು ಹುಲಿ ಹಜರತ್ ಟಿಪ್ಪುಸುಲ್ತಾನ್‌ 272ನೇ ಜಯಂತಿ ಹಾಗೂ ಕರ್ನಾಟಕ ರಾಜ್ಯೋತ್ಸವ ಸಮಾರಂಭವನ್ನು ಯುವ ಚಿಂತಕ ರಾ.ಚಿಂತನ್‌ ಉದ್ಘಾಟಿಸಿದರು.   

ಚಿತ್ರದುರ್ಗ: ನಿರಂತರ ಅಧ್ಯಯನಶೀಲತೆ ಗುಣ ಬೆಳೆಸಿಕೊಂಡಿದ್ದ ಟಿಪ್ಪು ಸುಲ್ತಾನ್‌ ಮಾದರಿ ಆಡಳಿತ ನೀಡಿದ್ದಾರೆ. ಆಸ್ಥಾನದ ಪ್ರಮುಖ ಹುದ್ದೆಗಳನ್ನು ಹಿಂದೂಗಳಿಗೆ ನೀಡಿದ್ದರು ಎಂದು ಯುವ ಚಿಂತಕ ರಾ.ಚಿಂತನ್‌ ಹೇಳಿದರು.

ನಗರದ ತರಾಸು ರಂಗಮಂದಿರದಲ್ಲಿ ರಾಜ್ಯ ಟಿಪ್ಪುಸುಲ್ತಾನ್‌ ಅಭಿಮಾನಿಗಳ ಮಹಾವೇದಿಕೆಯಿಂದ ಗುರುವಾರ ಆಯೋಜಿಸಿದ್ದ ಮೈಸೂರು ಹುಲಿ ಹಜರತ್ ಟಿಪ್ಪುಸುಲ್ತಾನ್‌ 272ನೇ ಜಯಂತಿ, ಕರ್ನಾಟಕ ರಾಜ್ಯೋತ್ಸವ ಉದ್ಘಾಟಿಸಿ ಮಾತನಾಡಿದರು.

‘ಮತ ಬ್ಯಾಂಕ್‌ ರಾಜಕಾರಣ ಮಾಡುತ್ತಿರುವ ಪಕ್ಷಗಳು ಟಿಪ್ಪು ಬಗ್ಗೆ ನಿರಂತರ ಅಪಪ್ರಚಾರ ಮಾಡುತ್ತಿವೆ. ಯಾವುದೇ ಕ್ಷಣಕ್ಕೂ ಪ್ರಚೋದನೆಗೆ ಒಳಗಾಗದೆ, ಟೀಕೆಗಳಿಗೆ ಸಮಾಧಾನದಿಂದ ಉತ್ತರಿಸುವ ಗುಣ ಬೆಳೆಸಿಕೊಳ್ಳಬೇಕು. ಏಕೆಂದರೆ ಇಸ್ಲಾಂ ಶಾಂತಿಯನ್ನು ಬಯಸುತ್ತದೆ’ ಎಂದು ತಿಳಿಸಿದರು.

ADVERTISEMENT

‘ಟಿಪ್ಪು ಹಿಂದೂಗಳನ್ನು ಹತ್ಯೆ ಮಾಡಿದ್ದು, ಮತಾಂತರ ಹೆಚ್ಚಾಗಿತ್ತು ಎಂದು ಕೋಮುವಾದಿ ಧ್ವನಿಗಳು ಸುಳ್ಳನ್ನು ಪ್ರಚಾರ ಮಾಡುತ್ತಿವೆ. ಹಿಂದೂಗಳಿಗೆ ಅಧಿಕಾರ ನೀಡಿದ್ದ ಟಿಪ್ಪು ಹಿಂದೂಗಳನ್ನು ಹತ್ಯೆ ಮಾಡಲು ಹೇಗೆ ಸಾಧ್ಯ ಎಂದು ಪ್ರಶ್ನಿಸಿದರು. ಮತಾಂತರ ಸಹ ಹೆಚ್ಚಾಗಿದ್ದರೆ ಶ್ರೀರಂಗಪಟ್ಟಣದಲ್ಲಿ ಮುಸ್ಲಿಮರ ಸಂಖ್ಯೆ ಹೆಚ್ಚಾಗಿರಬೇಕಿತ್ತು’ ಎಂದು ತಿರುಗೇಟು ನೀಡಿದರು.

‘ಶೈಕ್ಷಣಿಕ ಕ್ರಾಂತಿ ಮಾಡಿದ ಟಿಪ್ಪು ಅಂದೇ ಶಿಕ್ಷಣಕ್ಕೆ ಒತ್ತು ಕೊಟ್ಟಿದ್ದರು. ಇಸ್ಲಾಂ, ಮಂದಿರ, ಮಸೀದಿ, ಮದರಸಾ ಎಂದರೆ ಏನು ಎಂದು ಮೊದಲು ಟಿಪ್ಪು ವಿರೋಧಿಗಳು ತಿಳಿದುಕೊಳ್ಳಲಿ. ಟಿಪ್ಪು ಈ ನಾಡಿನ ಅಸ್ಮಿತೆಯ ಗುರುತಾಗಿ ಉಳಿಯಬೇಕಾದರೆ ಟಿಪ್ಪು ಕುರಿತು ತಿಳಿವಳಿಕೆ ನೀಡುವ ಕೆಲಸವಾಗಬೇಕು. ಎಂತಹ ಸಂದರ್ಭದಲ್ಲಿಯೂ ಪ್ರಚೋದನೆಗೆ ಒಳಗಾಗುವುದು ಬೇಡ’ ಎಂದು ಯುವಕರಿಗೆ ಕರೆ ನೀಡಿದರು.

‘ಪ್ರತಿಯೊಬ್ಬ ರಾಜಮಹಾರಾಜರ ಕಾಲದಲ್ಲಿ ಕಾನೂನಿತ್ತು. ಆ ಕಾನೂನು ಮೀರಿದವರಿಗೆ ಶಿಕ್ಷೆ ಕೊಡಲಾಗುತ್ತಿತ್ತು. ವಿರೋಧಿಗಳು ಅದನ್ನೇ ಹತ್ಯೆ ಎಂದು ಬಿಂಬಿಸುತ್ತಿದ್ದಾರೆ. ರೈತರು ಇಂದು ನೆಮ್ಮದಿಯಿಂದ ಬದುಕುತ್ತಿದ್ದಾರೆಂದರೆ ಅದಕ್ಕೆ ಟಿಪ್ಪು ಕಾರಣ. ರೇಷ್ಮೆಯನ್ನು ನಮ್ಮ ನಾಡಿಗೆ ಮೊಟ್ಟ ಮೊದಲು ಪರಿಚಯಿಸಿದ್ದಾರೆ. ಈ ಎಲ್ಲ ಅಭಿವೃದ್ಧಿ ಕೆಲಸಗಳನ್ನು ವಿರೋಧಿಗಳಿಗೆ ತಿಳಿಸುವ ಕೆಲಸವಾಗಬೇಕು’ ಎಂದರು.

ಚಿತ್ರದುರ್ಗ ನಗರಾಭಿವೃದ್ದಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಬಿ.ಟಿ.ಜಗದೀಶ್‌, ಎಸ್‌ಡಿಪಿಐ ಜಿಲ್ಲಾ ಘಟಕದ ಅಧ್ಯಕ್ಷ ಬಾಳೆಕಾಯಿ ಶ್ರೀನಿವಾಸ್‌, ನಗರಸಭೆ ಮಾಜಿ ಉಪಾಧ್ಯಕ್ಷ ಎನ್‌.ಬಿ.ಟಿ.ಜಮೀರ್‌, ಸದಸ್ಯ ಮಹಮದ್ ಅಹಮದ್ ಪಾಷ, ಆರ್‌.ಶೇಷಣ್ಣ ಕುಮಾರ್‌, ವಕೀಲ ಬಿ.ಕೆ.ರಹಮತ್‌ವುಲ್ಲಾ, ಕಾಂಗ್ರೆಸ್‌ ಜಿಲ್ಲಾ ಘಟಕದ ಅಧ್ಯಕ್ಷ ಎಂ.ಕೆ.ತಾಜ್‌ಪೀರ್‌ ಇದ್ದರು.

31 ಜನರ ಬಂಧನ

ಟಿಪ್ಪು ಸುಲ್ತಾನ್‌ ಜನ್ಮದಿನಾಚರಣೆಯ ಪ್ರಯುಕ್ತ ಮೆರವಣಿಗೆ ನಡೆಸುತ್ತಿದ್ದ 31 ಜನರನ್ನು ನಗರ ಠಾಣೆಯ ಪೊಲೀಸರು ಗುರುವಾರ ಬಂಧಿಸಿ ಬಿಡುಗಡೆ ಮಾಡಿದರು.

ಗಾಂಧಿ ವೃತ್ತದಿಂದ ಹೊರಟಿದ್ದ ಮೆರವಣಿಗೆಯಲ್ಲಿ ಟಿಪ್ಪು ಅಭಿಮಾನಿಗಳು ಘೋಷಣೆ ಕೂಗುತ್ತಿದ್ದರು. ಪೊಲೀಸರ ಸೂಚನೆಯನ್ನು ಉಲ್ಲಂಘಿಸಿದ ಆರೋಪದ ಮೇರೆಗೆ ಅವರನ್ನು ವಶಕ್ಕ ಪಡೆದು ನಗರ ಠಾಣೆಯಲ್ಲಿ ಕೆಲ ಕಾಲ ಇಡಲಾಗಿತ್ತು. ಎಚ್ಚರಿಕೆ ನೀಡಿ ಬಿಡುಗಡೆ ಮಾಡಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.