ಚಿತ್ರದುರ್ಗ: ನಗರದ ಕರುವಿನಕಟ್ಟೆ ವೃತ್ತದಲ್ಲಿ ಮಂಗಳವಾರ ಸಾವಿರಾರು ಭಕ್ತರು ತ್ರಿಪುರಸುಂದರಿ ತಿಪ್ಪಿನಘಟ್ಟಮ್ಮನ ಮುಂದೆ ಶ್ರದ್ಧಾ, ಭಕ್ತಿಯಿಂದ ಹೋಳಿಗೆ ಅಮ್ಮನ ಹಬ್ಬ ಆಚರಣೆ ಮಾಡಿದರು.
ನಗರದ ವಿವಿಧ ಬಡಾವಣೆಗಳಿಂದ ಬಂದಿದ್ದ ಭಕ್ತರು ಹೋಳಿಗೆ ಅರ್ಪಿಸಿ ‘ಹೋಳಿಗೆ ಅಮ್ಮ ನಾಡಿಗೆ ಸಮೃದ್ಧಿ ತಾರಮ್ಮ’ ಘೋಷಣೆ ಮೊಳಗಿಸಿದರು. ಅಡಕೆ ತಟ್ಟೆ, ಊಟದ ಎಲೆಗಳಲ್ಲಿ ಎಡೆಯ ಜೊತೆ ಮಣ್ಣಿನ ಕುಡಿಕೆಯಲ್ಲಿ ಬೇವಿನ ಸೊಪ್ಪು ಇಟ್ಟು, ಅರಿಶಿಣ, ಕುಂಕುಮ, ಬಳೆ, ತೆಂಗಿನ ಕಾಯಿ, ಬಾಳೆ ಹಣ್ಣು ಅರ್ಪಿಸುವ ಮೂಲಕ ಅಮ್ಮನ ಪೂಜೆ ನೆರವೇರಿಸಿದರು.
ವೃತ್ತದ ಸಮೀಪವಿರುವ ಏಕನಾಥೇಶ್ವರಿ ದೇವಿಯ ಪಾದದ ಗುಡಿ ಮುಂಭಾಗ ಘಮಘಮಿಸುವ ಹೋಳಿಗೆಗಳನ್ನು ಸಾಲು ಸಾಲಾಗಿ ಇಡಲಾಗಿತ್ತು. ಈ ಸುಂದರ ದೃಶ್ಯವನ್ನು ಹಲವರು ಕಣ್ತುಂಬಿಕೊಂಡರು. ಮಹಿಳೆಯರು, ಯುವತಿಯರು ಉಪವಾಸ ವ್ರತ ಆಚರಿಸಿದರು. ಹೋಳಿಗೆ–ತುಪ್ಪ, ಅನ್ನ–ಮೊಸರು ಎಡೆಯೊಂದಿಗೆ ವೃತ್ತಕ್ಕೆ ಬೆಳಿಗ್ಗೆಯಿಂದ ಸಂಜೆಯವರೆಗೂ ಸಾವಿರಾರು ಮಂದಿ ಬಂದು ಸಮರ್ಪಿಸಿದ ಕಾರಣ ಇಡೀ ವೃತ್ತ ಹೋಳಿಗೆಗಳಿಂದಲೇ ಆವರಿಸಿಕೊಂಡಿತು.
ಏಕನಾಥೇಶ್ವರಿ, ಅಂತರಘಟ್ಟಮ್ಮ, ಗಾಳಿ ಮಾರಮ್ಮ ದೇವತೆಗಳಿಗೆ ವಿಶೇಷ ಪೂಜೆ ನೆರವೇರಿತು. ಸಂಜೆ 6.30ರ ನಂತರ ತಿಪ್ಪಿನಘಟ್ಟಮ್ಮ ದೇವಿ ಜೊತೆಗೆ ಹೋಳಿಗೆ ಅಮ್ಮನನ್ನು ಊರಿಂದ ಹೊರಗೆ ಕರೆದೊಯ್ಯಲಾಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.