ADVERTISEMENT

ವೇದಾವತಿ ನದಿ ಅಕ್ರಮ ದಂಧೆ: ಅಸ್ಥಿ ಪಂಜರವನ್ನೂ ಬಿಡದ ಮರಳು ಗಣಿಗಾರಿಕೆ

ಪರಶುರಾಂಪುರ: ತೇಲಿದ ಅಸ್ಥಿ ಪಂಜರಗಳು

ತಿಮ್ಮಯ್ಯ .ಜೆ ಪರಶುರಾಂಪುರ
Published 16 ಮಾರ್ಚ್ 2019, 20:10 IST
Last Updated 16 ಮಾರ್ಚ್ 2019, 20:10 IST
ವೇದಾವತಿ ನದಿಯಲ್ಲಿ ಅಕ್ರಮ ಗಣಿಗಾರಿಕೆಯಿಂದ ಹೊರಬಂದಿರುವ ಅಸ್ಥಿಪಂಜರಗಳು
ವೇದಾವತಿ ನದಿಯಲ್ಲಿ ಅಕ್ರಮ ಗಣಿಗಾರಿಕೆಯಿಂದ ಹೊರಬಂದಿರುವ ಅಸ್ಥಿಪಂಜರಗಳು   

ಪರಶುರಾಂಪುರ: ಪರಶುರುರಾಂಪುರದ ವೇದಾವತಿ ನದಿ ದಡದಲ್ಲಿರುವ ಸ್ಮಶಾನದಲ್ಲಿ ಮರಳು ಅಕ್ರಮ ಗಣಿಗಾರಿಕೆಯಿಂದಾಗಿ ಅಸ್ಥಿ ಪಂಜರಗಳೆಲ್ಲ ತೇಲಿ ಬಂದಿವೆ. ಇದರಿಂದ ಅಲ್ಲಿ ಓಡಾಡುವ ರೈತರಿಗೆ ಭಯ, ಭೀತಿ ಉಂಟಾಗಿದೆ.

4-5 ತಿಂಗಳಿಂದ ಪರಶುರಾಂಪುರ ಹೊರವಲಯದಲ್ಲಿ ನಡೆಯುತ್ತಿರುವ ಮೊರಾರ್ಜಿ ದೇಸಾಯಿ ಕಟ್ಟಡ ಕಾಮಗಾರಿ ನೆಪದಲ್ಲಿ ಎತ್ತಿನ ಗಾಡಿಯ ಮೂಲಕ ಮರಳನ್ನು ಅಲ್ಲಿ ಸಂಗ್ರಹಿಸಿ ಅಲ್ಲಿಂದ ಟಿಪ್ಪರ್ ಲಾರಿಗಳ ಮೂಲಕ ಬೇರೆ ಕಡೆ ಮರಳನ್ನು ಅಕ್ರಮವಾಗಿ ಸಾಗುಸುತ್ತಿದ್ದರು. ಹೀಗಾಗಿ ಸ್ಮಶಾನದಲ್ಲಿದ್ದ ಮರಳು ಖಾಲಿಯಾಗಿದ್ದು, ಶವ ಸಂಸ್ಕಾರ ಮಾಡಿದ ಅಸ್ಥಿಪಂಜರಗಳೆಲ್ಲ ಮೇಲಕ್ಕೆ ಬಂದಿವೆ.

ಗ್ರಾಮಸ್ಥರ ಸಮಾಧಿಗಳ ಕುರುಹುಗಳೇ ಇಲ್ಲದಂತೆ ಮರಳು ಗಣಿಗಾರಿಕೆ ಮಾಡುತ್ತಿರುವುದು ಜನ ಸಾಮಾನ್ಯರ ಕೆಂಗಣ್ಣಿಗೆ ಗುರಿಯಾಗಿದೆ. ಈ ಮಟ್ಟಕ್ಕೆ ಮರಳು ದಂಧೆ ನಡೆಯುತ್ತಿದ್ದು, ಕೂಡಲೇ ಸಂಬಂಧಪಟ್ಟ ಅಧಿಕಾರಿಗಳು ಸೂಕ್ತ ಕ್ರಮ ಕೈಗೊಂಡು ಅಕ್ರಮ ಮರಳು ದಂಧೆಗೆ ಕಡಿವಾಣ ಹಾಕಬೇಕು ಎಂಬುವುದು ಸಾರ್ವಜನಿಕರ ಆಗ್ರಹ.

ADVERTISEMENT

ಟಿಪ್ಪರ್ ಲಾರಿಯಲ್ಲಿ ಅಕ್ರಮ ಮರಳು ಸಾಗಣೆ

ಮೊರಾರ್ಜಿ ದೇಸಾಯಿ ಶಾಲೆಯ ಕಟ್ಟದ ಬಳಿ ಅಕ್ರಮವಾಗಿ ಮರಳು ಸಂಗ್ರಹಿಸಿ ಹಗಲು ವೇಳೆ ಮರಳಿನ ಮೇಲೆ ಎಂ ಸ್ಯಾಂಡ್ ಹಾಕಿಕೊಂಡು ಅಲ್ಲಿಂದ ಬೇರೆ ಕಡೆಗೆ ನಿರಂತರವಾಗಿ ಮರಳನ್ನು ಸಾಗಿಸಲಾಗಿದೆ.

ಅನುಮಾನ ಬಂದ ಗ್ರಾಮಸ್ಥರು ಇದೇ ಗುರುವಾರ ಪರಶುರಾಂಪುರದಲ್ಲಿ ಟಿಪ್ಪರ್ ಲಾರಿಯನ್ನು ಹಿಡಿದು ಪರೀಶಿಲಿಸಿದಾಗ ಮರಳು ಇರುವುದು ಖಚಿತವಾಗಿದೆ. ಆಗ ಸಂಬಂಧಪಟ್ಟ ಪೋಲಿಸ್ ಇಲಾಖೆಗೆ ಮಾಹಿತಿ ನೀಡಿ ಲಾರಿಯನ್ನು ಪೋಲಿಸರು ವಶಕ್ಕೆ ನೀಡಲಾಗಿದೆ. ಈ ಸಂಬಂಧ ಪರಶುರಾಂಪುರ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆದರೆ ಇದುವರೆಗೂ ಎಷ್ಟು ಬಾರಿ ಅಕ್ರಮ ಮರಳನ್ನು ಬೇರೆಕಡೆ ಸಾಗಿಸಿದ ಸಂಪೂರ್ಣ ತನಿಖೆ ನಡೆಸಬೇಕೆಂದು ಪರಶುರಾಂಪುರದ ಗ್ರಾಮಸ್ಥರಾದ ಕಿಚ್ಚ ಸುದೀಪ್ ಅಭಿಮಾನ ಬಳಗದ ಅಧ್ಯಕ್ಷ ಸುಧಾಕರ್, ಜೈ ಕರ್ನಾಟಕ ಸಂಘಟನೆಯ ಸದಸ್ಯ ವೆಂಕಟೇಶ್ ಗ್ರಾಮಸ್ಥರಾದ ತಿಪ್ಪೇಸ್ವಾಮಿ, ಜಯವೀರಾಚಾರಿ ರವಿ, ವೆಂಕಟೇಶ್ ಆಗ್ರಹಿಸಿದರು.

**
ಪರಶುರಾಂಪುರದ ನದಿ ದಡದಲ್ಲಿರುವ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ ಸಂಬಂಧಪಟ್ಟವರ ಮೇಲೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು.
–ತುಷಾರ್ ಬಿ. ಹೊಸೂರ್, ತಹಶೀಲ್ದಾರ್‌ ಚಳ್ಳಕೆರೆ.

**
ವೇದಾವತಿ ನದಿ ದಡದಲ್ಲಿ ಗಿಡಮರಗಳನ್ನು ನಾಶ ಮಾಡಿ ಅಕ್ರಮ ಮರಳು ದಂಧೆ ಮಾಡಿದ್ದಾರೆ. ಈ ಬಗ್ಗೆ ಸೂಕ್ತ ತನಿಖೆ ನಡೆಸಬೇಕು.
–ಪ್ರಸನ್ನ ಕುಮಾರ್ ಗ್ರಾಮ ಪಂಚಾಯಿತಿ ಸದಸ್ಯ. ಪರಶುರಾಂಪುರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.