ಚಿತ್ರದುರ್ಗ: ಉಪ್ಪಾರ ಜನಾಂಗದ ಕುಲಶಾಸ್ತ್ರೀಯ ಅಧ್ಯಯನ ಅಂತಿಮ ಹಂತಕ್ಕೆ ತಲುಪಿದೆ. ಸರ್ಕಾರಕ್ಕೆ ವರದಿ ಸಲ್ಲಿಸಲು ಎಲ್ಲರ ಸಹಕಾರ ಬೇಕು ಎಂದು ಹೊಸದುರ್ಗ ಬ್ರಹ್ಮವಿದ್ಯಾನಗರ ಭಗೀರಥ ಪೀಠದ ಪುರುಷೋತ್ತಮಾನಂದಪುರಿ ಸ್ವಾಮೀಜಿ ಮನವಿ ಮಾಡಿದರು.
ನಗರದಲ್ಲಿ ಭಾನುವಾರ ನಡೆದ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ನಿರ್ದೇಶಕರಾಗಿ ಸೇವೆ ಸಲ್ಲಿಸಿ ನಿವೃತ್ತಿ ಹೊಂದಿದ ಪಿ.ಶಿವಶಂಕರ್ ಅವರಿಗೆ ಸನ್ಮಾನ ಸಮಾರಂಭದ ಸಾನ್ನಿಧ್ಯ ವಹಿಸಿ ಮಾತನಾಡಿದರು.
ಕುಲಶಾಸ್ತ್ರೀಯ ಅಧ್ಯಯನ ತಂಡ ರಾಜ್ಯದಾದ್ಯಂತ ಸಂಚರಿಸಿ ಸಾಕಷ್ಟು ಶ್ರಮಿಸಿ ಅಧ್ಯಯನ ಮಾಡಿ ವರದಿಯನ್ನು ಸಿದ್ಧಗೊಳಿಸಿದ್ದಾರೆ. ಈ ವರದಿಯನ್ನು ಸರ್ಕಾರಕ್ಕೆ ಸಲ್ಲಿಸುವುದು ಬಾಕಿ ಉಳಿದಿದೆ ಎಂದರು.
ರಾಜ್ಯ ಮತ್ತು ರಾಷ್ಟ್ರಮಟ್ಟದಲ್ಲಿ ಭಗೀರಥ ಪ್ರಶಸ್ತಿ ನೀಡುವ ಸಿದ್ಧತೆಗಳು ನಡೆಯುತ್ತಿವೆ. ಪಿ.ಶಿವಶಂಕರ್ ಚಿತ್ರದುರ್ಗ ಜಿಲ್ಲಾ ಪಂಚಾಯಿತಿಯಲ್ಲಿ ಉಪ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸುತ್ತಿದ್ದ ಸಂದರ್ಭದಲ್ಲಿ ವಿದ್ಯಾರ್ಥಿನಿಲಯ ನಿರ್ಮಾಣಕ್ಕೆ ಸಾಕಷ್ಟು ಕೊಡುಗೆ ನೀಡಿದ್ದಾರೆ. ಜನಾಂಗದ ವಿದ್ಯಾರ್ಥಿಗಳ ಶೈಕ್ಷಣಿಕ ಅನುಕೂಲಕ್ಕಾಗಿ ವಿದ್ಯಾನಿಧಿ ಸ್ಥಾಪಿಸಲಾಗಿದ್ದು, ಇದರಲ್ಲಿ ₹ 40 ಲಕ್ಷವಿದೆ. ಇದನ್ನು ವಿದ್ಯಾರ್ಥಿಗಳ ಶಿಕ್ಷಣಕ್ಕೆ ನೆರವು ನೀಡಲಾಗುವುದು ಎಂದು ಹೇಳಿದರು.
‘ಸನ್ಮಾನದ ಹಿಂದೆ ಅಭಿಮಾನ ಹಾಗೂ ಪ್ರೀತಿಯಿದೆ. ಅಧಿಕಾರವಧಿಯಲ್ಲಿ ಸಾಕಷ್ಟು ಸಮಸ್ಯೆ ಸವಾಲು ಎದುರಿಸಿದ್ದೇನೆ. ಎಲ್ಲದಕ್ಕೂ ಭಗೀರಥ ಪ್ರಯತ್ನವಿರಬೇಕು’ ಎಂದು ಸನ್ಮಾನ ಸ್ವೀಕರಿಸಿದ ಪಿ. ಶಿವಶಂಕರ್ ಹೇಳಿದರು.
‘ಸಮುದಾಯದ ವಿದ್ಯಾರ್ಥಿಗಳು ಶೈಕ್ಷಣಿಕವಾಗಿ ಪ್ರಗತಿ ಸಾಧಿಸಬೇಕು. ಉನ್ನತ ಹುದ್ದೆಯಲ್ಲಿರುವ ನಮ್ಮ ಜನಾಂಗದವರಿಂದ ಸಮಾಜಕ್ಕೆ ಕೊಡುಗೆ ಏನು ಎನ್ನುವುದನ್ನು ಎಲ್ಲರೂ ಆತ್ಮಾವಲೋಕನ ಮಾಡಿಕೊಳ್ಳಬೇಕಿದೆ’ ಎಂದು ಹೇಳಿದರು.
ಜಿಲ್ಲಾ ಉಪ್ಪಾರ ಧಾರ್ಮಿಕ ಟ್ರಸ್ಟ್ ಕಾರ್ಯದರ್ಶಿ ಶಿವಮೂರ್ತಿ, ಟ್ರಸ್ಟ್ ಅಧ್ಯಕ್ಷ ಎಲ್. ಷಣ್ಮುಖ, ರಾಜ್ಯ ಘಟಕದ ಅಧ್ಯಕ್ಷ ಚಂದ್ರಪ್ಪ, ಉಪಾಧ್ಯಕ್ಷ ಅರ್ಜುನ್ ನಾಯಕ್ವಾಡ್, ರಾಜ್ಯ ಕಾರ್ಯಾಧ್ಯಕ್ಷ ಲಕ್ಷ್ಮಣ ಉಪ್ಪಾರ್, ಜಿಲ್ಲಾ ಘಟಕದ ಅಧ್ಯಕ್ಷರಾದ ನಾಗರಾಜ್ ಮಲ್ನಾಡ್, ರಮೇಶ್, ಹನುಮೇಶ್, ಜಿ.ಶರಣಪ್ಪ, ನಳಿನಿ ಪಿ.ಶಿವಶಂಕರ್, ಎನ್.ವೀರೇಶ್,, ಖಜಾಂಚಿ ಅಜ್ಜಪ್ಪ, ನಿವೃತ್ತ ಡಿವೈಎಸ್ಪಿ ನಾಗರಾಜ್, ಮುಖಂಡರಾದ ಗುರುಮೂರ್ತಿ, ಎಲ್.ಮಹೇಶ್, ಎಂ.ಗಂಗಣ್ಣ, ಸಿದ್ದಪ್ಪ, ರಾಮಣ್ಣ, ಪರಪ್ಪ, ಹನುಮಂತಪ್ಪ, ನಿಂಗಪ್ಪ, ಶ್ರೀಪತಿ ನಾಗರಾಜ್, ಸ್ಥಳೀಯ ಲೆಕ್ಕ ಪರಿಶೋಧನಾ ವರ್ತುಲದ ಹಿರಿಯ ಉಪ ನಿರ್ದೇಶಕ ಸಿ.ಜಿ.ಶ್ರೀನಿವಾಸ್, ನಾಗರಾಜ್ ಸಂಗಂ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.