ADVERTISEMENT

ಚಿಕ್ಕಸಿದ್ದವ್ವನಹಳ್ಳಿ ಕೆರೆಗೆ ಭದ್ರಾ ಮೇಲ್ದಂಡೆ ನೀರು ಹರಿಸಲು ಆಗ್ರಹ

​ಪ್ರಜಾವಾಣಿ ವಾರ್ತೆ
Published 3 ಜುಲೈ 2025, 15:34 IST
Last Updated 3 ಜುಲೈ 2025, 15:34 IST
ಹಿರಿಯೂರು ತಾಲ್ಲೂಕಿನ ಚಿಕ್ಕಸಿದ್ದವ್ವನಹಳ್ಳಿ ಕೆರೆಗೆ ಭದ್ರಾ ಮೇಲ್ದಂಡೆ ಯೋಜನೆ ನಾಲೆಯ ಮೂಲಕ ನೀರು ಹರಿಸುವಂತೆ ಒತ್ತಾಯಿಸಿ ಬುರುಜನರೊಪ್ಪ ಗ್ರಾಮ ಪಂಚಾಯಿತಿ ವ್ಯಾಪ್ತಿಯ ನೂರಾರು ರೈತರು ಗುರುವಾರದಿಂದ ಅನಿರ್ದಿಷ್ಟ ಧರಣಿ ಆರಂಭಿಸಿರುವುದು.
ಹಿರಿಯೂರು ತಾಲ್ಲೂಕಿನ ಚಿಕ್ಕಸಿದ್ದವ್ವನಹಳ್ಳಿ ಕೆರೆಗೆ ಭದ್ರಾ ಮೇಲ್ದಂಡೆ ಯೋಜನೆ ನಾಲೆಯ ಮೂಲಕ ನೀರು ಹರಿಸುವಂತೆ ಒತ್ತಾಯಿಸಿ ಬುರುಜನರೊಪ್ಪ ಗ್ರಾಮ ಪಂಚಾಯಿತಿ ವ್ಯಾಪ್ತಿಯ ನೂರಾರು ರೈತರು ಗುರುವಾರದಿಂದ ಅನಿರ್ದಿಷ್ಟ ಧರಣಿ ಆರಂಭಿಸಿರುವುದು.   

ಹಿರಿಯೂರು: ತಾಲ್ಲೂಕಿನ ಬುರುಜನರೊಪ್ಪ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಚಿಕ್ಕಸಿದ್ದವ್ವನಹಳ್ಳಿ ಕೆರೆಗೆ ಭದ್ರಾ ಮೇಲ್ದಂಡೆ ಯೋಜನೆಯ ನಾಲೆಯ ಮೂಲಕ ನೀರು ಹರಿಸುವಂತೆ ಒತ್ತಾಯಿಸಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹಳ್ಳಿಗಳ ರೈತರು ಭದ್ರಾ ನಾಲೆಯ ಸಮೀಪ ಗುರುವಾರದಿಂದ ಅನಿರ್ದಿಷ್ಟ ಧರಣಿ ಆರಂಭಿಸಿದ್ದಾರೆ.

ಚಿಕ್ಕಸಿದ್ದವ್ವನಹಳ್ಳಿ ಹಿರಿಯೂರು ಮತ್ತು ಚಿತ್ರದುರ್ಗ ತಾಲ್ಲೂಕುಗಳ ಗಡಿ ಗ್ರಾಮವಾಗಿದ್ದು, ಸದರಿ ಕೆರೆಯನ್ನು ತುಂಬಿಸಿದಲ್ಲಿ ಚಿಕ್ಕಸಿದ್ದವ್ವನಹಳ್ಳಿ, ಕೋವೇರಹಟ್ಟಿ, ಹೊಸನಾಯಕರಹಟ್ಟಿ, ಹಳೇಊರು, ಮ್ಯಾಸರಹಟ್ಟಿ,ಪಾಲವ್ವನಹಳ್ಳಿ, ಹೋ.ಚಿ. ಬೋರಯ್ಯನಹಟ್ಟಿ, ಬುರುಜನರೊಪ್ಪ, ಸಾಲುಹುಣಿಸೆ, ಸಾಲುಹುಣಿಸೆ ಗೊಲ್ಲರಹಟ್ಟಿ, ಲಂಬಾಣಿಹಟ್ಟಿ, ಕಲ್ಲಹಟ್ಟಿ ಗ್ರಾಮಗಳ ಎಂಟತ್ತು ಸಾವಿರ ಜನರಿಗೆ, ಮೂರ್ನಾಲ್ಕು ಸಾವಿರ ಜಾನುವಾರುಗಳಿಗೆ, ನೂರಾರು ಎಕರೆಯಲ್ಲಿರುವ ಪಂಪ್ ಸೆಟ್ ಆಧಾರಿತ ತೋಟದ ಬೆಳೆಗಳಿಗೆ ಅನುಕೂಲವಾಗುತ್ತದೆ ಎಂದು ಧರಣಿ ನಿರತರು ಹೇಳಿದರು.

ಚಿಕ್ಕಸಿದ್ದವ್ವನಹಳ್ಳಿ ಕೆರೆಗೆ ಮಳೆಯನ್ನು ಹೊರತು ಪಡಿಸಿದರೆ ಬೇರೆ ನೀರು ಬರುವುದಿಲ್ಲ. ಭದ್ರಾ ನಾಲೆಯಿಂದ ಕೆರೆಗೆ ನೀರು ಹರಿಸುತ್ತೇವೆ ಎಂದು ಸರ್ಕಾರ ನೀಡಿದ್ದ ಭರವಸೆ ಮೇರೆಗೆ ಈ ಭಾಗದ ಜನರು ಭದ್ರಾ ನಾಲೆ ನಿರ್ಮಾಣಕ್ಕೆ 140–150 ಹೆಕ್ಟೇರ್ ಭೂಮಿಯನ್ನು ಬಿಟ್ಟುಕೊಟ್ಟಿದ್ದಾರೆ. ಸರ್ಕಾರ ತನ್ನ ಮಾತಿನಂತೆ ಕೆರೆಗೆ ನೀರು ಹರಿಸಬೇಕು. ಜೊತೆಗೆ ಪಂಚಾಯಿತಿ ವ್ಯಾಪ್ತಿಯ ಎಲ್ಲಾ ಹಳ್ಳಿಗಳ ಗೋಕಟ್ಟೆಗಳಿಗೆ, ಚೆಕ್ ಡ್ಯಾಂಗಳಿಗೆ ನೀರು ತುಂಬಿಸಬೇಕು. ನಮ್ಮ ಬೇಡಿಕೆ ಈಡೇರಿಸುವ ಭರವಸೆ ನೀಡುವವರೆಗೆ ಧರಣಿ ನಡೆಸುತ್ತೇವೆ ಎಂದು ರೈತರು ಸ್ಪಷ್ಟಪಡಿಸಿದರು.

ADVERTISEMENT

ಧರಣಿಯಲ್ಲಿ ದ್ಯಾಮೇಗೌಡ, ಎನ್.ಆರ್. ಲಕ್ಷ್ಮೀಕಾಂತ್, ತಿಪ್ಪೇಸ್ವಾಮಿ, ಮಂಜಣ್ಣ, ಶಿವಣ್ಣ, ಮಂಜುನಾಥ್, ಅಮರಗೌಡ, ನಾಗಣ್ಣ, ಉಪೇಂದ್ರ, ಗ್ರಾಮ ಪಂಚಾಯಿತಿ ಅಧ್ಯಕ್ಷೆ ಕವಿತ ಒಳಗೊಂಡಂತೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ನೂರಾರು ರೈತರು ಪಾಲ್ಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.