ADVERTISEMENT

ಹೊಸದುರ್ಗ: ವಿವಿಧ ಬೇಡಿಕೆ- ರೈತರ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 22 ಜೂನ್ 2021, 6:26 IST
Last Updated 22 ಜೂನ್ 2021, 6:26 IST
ಹೊಸದುರ್ಗ ಪಟ್ಟಣದ ತಾಲ್ಲೂಕು ಕಚೇರಿ ಎದುರು ತಾಲ್ಲೂಕು ರೈತ ಸಂಘದಿಂದ ಸೋಮವಾರ ಪ್ರತಿಭಟನೆ ನಡೆಸಲಾಯಿತು
ಹೊಸದುರ್ಗ ಪಟ್ಟಣದ ತಾಲ್ಲೂಕು ಕಚೇರಿ ಎದುರು ತಾಲ್ಲೂಕು ರೈತ ಸಂಘದಿಂದ ಸೋಮವಾರ ಪ್ರತಿಭಟನೆ ನಡೆಸಲಾಯಿತು   

ಹೊಸದುರ್ಗ: ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ರೈತ ಸಂಘ ಹಾಗೂ ಹಸಿರು ಸೇನೆ ತಾಲ್ಲೂಕು ಘಟಕದ ಮುಖಂಡರು ಸೋಮವಾರ ಪಟ್ಟಣದ ತಾಲ್ಲೂಕು ಕಚೇರಿ ಎದುರು ಪ್ರತಿಭಟನೆ ನಡೆಸಿ ಮನವಿ ಸಲ್ಲಿಸಿದರು.

ಡೀಸೆಲ್‌, ಪೆಟ್ರೋಲ್‌ ದರ ಗಗನಕ್ಕೇರಿದ್ದು, ಕೃಷಿ ‌ಯಂತ್ರೋಪಕರಣಗಳು ಮತ್ತು ಅದರ ಬಿಡಿ ಭಾಗಗಳ ದರ ಕಡಿಮೆ ಮಾಡಬೇಕು. ಬಗರ್‌ಹುಕುಂ ಸಾಗುವಳಿ ಪತ್ರ ವಿತರಿಸಬೇಕು. ಬೆಳೆ ವಿಮೆ ಸೌಲಭ್ಯವನ್ನು ಸಮರ್ಪಕವಾಗಿ ಜಾರಿಗೊಳಿಸಬೇಕು. ರೈತರ ಸಾಲದಲ್ಲಿ ಬಡ್ಡಿ ಕೈಬಿಟ್ಟು ಅಸಲಿನಲ್ಲಿ ರಿಯಾಯತಿ ಕೊಟ್ಟು ಮರುಪಾವತಿಗೆ ಅವಕಾಶ ಕೊಡಬೇಕು. ಬೆಂಬಲ ಬೆಲೆಗೆ 4 ತಿಂಗಳ ಹಿಂದೆ ಖರೀದಿಸಿರುವ ರೈತರ ರಾಗಿ ಹಣ ಕೂಡಲೇ ಕೊಡಬೇಕು ಎಂದು ಒತ್ತಾಯಿಸಿದರು.

ತಾಲ್ಲೂಕಿನ ಎರಡು ಲಕ್ಷ ಎಕರೆ ಜಮೀನಿನಲ್ಲಿ ಪೂರ್ವ ಮುಂಗಾರು ಹೆಸರು ಕಾಳು ಬಿತ್ತನೆ ಮಾಡಲಾಗಿದೆ. ಮುಂದಿನ ಜುಲೈನಲ್ಲಿ ಈ ಬೆಳೆ ಕಟಾವು ಮಾಡಲಾಗುವುದು. ಹಾಗಾಗಿ ಸರ್ಕಾರ ಮುಂಚಿತವಾಗಿಯೇ ಖರೀದಿ ಕೇಂದ್ರ ತೆರೆದು ರೈತರಿಂದ ಹೆಸರು ಕಾಳು ಖರೀದಿಸಬೇಕು. ಈ ಕ್ರಮ ಕೈಗೊಳ್ಳದ್ದಿದ್ದರೆ ಕೃಷಿ ಇಲಾಖೆ ಎದುರು ಅನಿರ್ದಿಷ್ಟಾವಧಿ ಧರಣಿ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದರು.

ADVERTISEMENT

ತಾಲ್ಲೂಕು ರೈತ ಸಂಘದ ಅಧ್ಯಕ್ಷ ಕೆ.ಸಿ.ಮಹೇಶ್ವರಪ್ಪ, ಕಾರ್ಯದರ್ಶಿ ನಾಗಲಿಂಗಮೂರ್ತಿ, ಜಿಲ್ಲಾ ಸಂಘದ ಕಾರ್ಯಾಧ್ಯಕ್ಷ ಬಯಲಪ್ಪ, ಸಂಪನ್ಮೂಲ ಅಧ್ಯಕ್ಷ ಎನ್‌.ಎಸ್‌.ಕರಿಸಿದ್ದಯ್ಯ, ಕಾರ್ಯದರ್ಶಿ ಎನ್‌.ರಮೇಶ್‌ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.