ADVERTISEMENT

ಚಿಕ್ಕಜಾಜೂರು: ವೈದ್ಯರೇ ಇಲ್ಲದ ಬಿ.ದುರ್ಗ ಪಶು ಆಸ್ಪತ್ರೆ,ಜಾನುವಾರುಗಳಿಗೆ ಸಂಕಷ್ಟ

ಬ್ರಿಟಿಷ್‌ ಆಡಳಿತಾವಧಿಯ ಕಟ್ಟಡ ಶಿಥಿಲಾವಸ್ಥೆಗೆ

ಜೆ.ತಿಮ್ಮಪ್ಪ
Published 9 ಅಕ್ಟೋಬರ್ 2025, 6:36 IST
Last Updated 9 ಅಕ್ಟೋಬರ್ 2025, 6:36 IST
ಚಿಕ್ಕಜಾಜೂರು ಸಮೀಪದ ಬಿ. ದುರ್ಗ ಗ್ರಾಮದಲ್ಲಿ ಬ್ರಿಟಿಷರ ಕಾಲದಲ್ಲಿ ನಿರ್ಮಾಣಗೊಂಡಿದ್ದ ಪಶುಚಿಕಿತ್ಸಾ ಕೇಂದ್ರದ ಕಟ್ಟಡ ಶಿಥಿಲಾವಸ್ಥೆಯಲ್ಲಿರುವುದು 
ಚಿಕ್ಕಜಾಜೂರು ಸಮೀಪದ ಬಿ. ದುರ್ಗ ಗ್ರಾಮದಲ್ಲಿ ಬ್ರಿಟಿಷರ ಕಾಲದಲ್ಲಿ ನಿರ್ಮಾಣಗೊಂಡಿದ್ದ ಪಶುಚಿಕಿತ್ಸಾ ಕೇಂದ್ರದ ಕಟ್ಟಡ ಶಿಥಿಲಾವಸ್ಥೆಯಲ್ಲಿರುವುದು    

ಚಿಕ್ಕಜಾಜೂರು: ಬ್ರಿಟಿಷರ ಆಡಳಿತದ ಅವಧಿಯಲ್ಲಿ ನಿರ್ಮಾಣಗೊಂಡಿದ್ದ ಬಿ.ದುರ್ಗ ಪಶುಚಿಕಿತ್ಸಾ ಕೇಂದ್ರದ ಕಟ್ಟಡವು ಶಿಥಿಲಾವಸ್ಥೆ ತಲುಪಿದೆ. ಜಾನುವಾರುಗಳಿಗೆ ಚಿಕಿತ್ಸೆ ನೀಡಲು ಇಲ್ಲಿ ಪಶು ವೈದ್ಯರೂ ಇಲ್ಲದ ಕಾರಣ ರೈತರು ಬೇಸರ ವ್ಯಕ್ತಪಡಿಸಿದ್ದಾರೆ.

ಪಶುಚಿಕಿತ್ಸಾ ಕೇಂದ್ರದ ವ್ಯಾಪ್ತಿಗೆ ಬಿ. ದುರ್ಗ ಸೇರಿದಂತೆ ಒಟ್ಟು 6 ಗ್ರಾಮಗಳು ಬರುತ್ತವೆ. ಈ ಕೇಂದ್ರದ ವ್ಯಾಪ್ತಿಯಲ್ಲಿ ಸುಮಾರು 2,100 ಜಾನುವಾರುಗಳು, 800ಕ್ಕೂ ಹೆಚ್ಚು ಕುರಿ, ಮೇಕೆಗಳು, 250 ಕ್ಕೂ ಹೆಚ್ಚು ಬೀದಿನಾಯಿಗಳು, 20 ಸಾಕು ನಾಯಿಗಳು ಇವೆ ಎಂದು ಪಶುಚಿಕಿತ್ಸಾ ಕೇಂದ್ರದ ಕಿರಿಯ ಪಶುವೈದ್ಯಕೀಯ ಪರೀಕ್ಷಕ ಉಮೇಶ್‌ ಮಾಹಿತಿ ನೀಡಿದ್ದಾರೆ.

ಪಶುಚಿಕಿತ್ಸಾ ಕೇಂದ್ರದ ಕಟ್ಟಡ ಸಂಪೂರ್ಣವಾಗಿ ಶಿಥಿಲಾವಸ್ಥೆ ತಲುಪಿದೆ. ಇದರ ಆವರಣ ತಗ್ಗು– ಗುಂಡಿಗಳಿಂದ ಕೂಡಿದ್ದು, ಮಳೆ ಸುರಿಯುವಾಗ ಆವರಣದಲ್ಲಿ ಒಂದೆರಡು ಅಡಿಗಳಷ್ಟು ನೀರು ನಿಲ್ಲುತ್ತದೆ. ಇದರಿಂದ, ಜಾನುವಾರುಗಳನ್ನು ಚಿಕಿತ್ಸೆಗೆ ಕರೆತರುವುದೇ ದುಸ್ತರವಾಗಿದೆ. ಅಲ್ಲದೆ, ಹೆಂಚುಗಳು ಅಲ್ಲಲ್ಲಿ ಉದುರಿ ಹೋಗಿದ್ದು, ಮಳೆ ನೀರು ಚಿಕಿತ್ಸಾ ಕೇಂದ್ರದಲ್ಲಿ ನಿಂತು ಇಲಾಖೆಯ ದಾಖಲೆಗಳು ಹಾಗೂ ಔಷಧಿಗಳು ನೆನೆಯುವಂತಾಗಿದೆ.

ADVERTISEMENT

ಪಶುವೈದ್ಯರಿಲ್ಲ: ಇಲ್ಲಿನ ಪಶುಚಿಕಿತ್ಸಾ ಕೇಂದ್ರಕ್ಕೆ ಪಶುವೈದ್ಯರನ್ನು ಸರ್ಕಾರ ಇದುವರೆಗೂ ನೇಮಕ ಮಾಡಿಲ್ಲ. ಈ ಹಿಂದೆ ಹಿರಿಯ ಇನ್‌ಸ್ಪೆಕ್ಟರ್‌ ಆಗಿದ್ದ ರಾಜಪ್ಪ ಎಂಬವರು ಕರ್ತವ್ಯ ನಿರ್ವಹಿಸುತ್ತಿದ್ದು, ನಿವೃತ್ತಿ ಹೊಂದಿದ ನಂತರ ಇಲ್ಲಿಗೆ ಯಾವುದೇ ವೈದ್ಯರನ್ನು ಇಲಾಖೆ ನೇಮಕ ಮಾಡಿಲ್ಲ. ಈಗಿರುವ ಕಿರಿಯ ಪಶುವೈದ್ಯಕೀಯ ಪರೀಕ್ಷಕ ಉಮೇಶ್‌ ಅವರು ಜಾನುವಾರುಗಳ ಚಿಕಿತ್ಸೆಗೆಂದು ಹಳ್ಳಿಗಳಿಗೆ ಹೋದರೆ, ಚಿಕಿತ್ಸಾ ಕೇಂದ್ರದಲ್ಲಿ ಕೇಳುವವರೇ ಇಲ್ಲದಂತಾಗುತ್ತದೆ. ವೈದ್ಯರಿಲ್ಲದೆ ಆಗಸ್ಟ್‌ ತಿಂಗಳಿನಲ್ಲಿ ಸರಿಯಾದ ಚಿಕಿತ್ಸೆ ದೊರೆಯದೆ 4-5 ಹಸುಗಳು ಸತ್ತುಹೋಗಿವೆ ಎಂದು ರೈತರು ಆರೋಪಿಸಿದ್ದಾರೆ.

ಪಶುಚಿಕಿತ್ಸಾ ಕೇಂದ್ರದ ಹಿಂಭಾಗದಲ್ಲಿ ಸಿಬ್ಬಂದಿಗಳಿಗಾಗಿ ವಸತಿ ಗೃಹ ನಿರ್ಮಿಸಲಾಗಿತ್ತು. ಆದರೆ ನಿರ್ವಹಣೆ ಇಲ್ಲದೆ, ವಸತಿಗೃಹದ ಚಾವಣಿ ಸಂಪೂರ್ಣವಾಗಿ ಕುಸಿದು ಬಿದ್ದಿದೆ. ಸುತ್ತಲೂ ಗಿಡ–ಗಂಟಿ ಬೆಳೆದು ನಿಂತಿವೆ. ಆಸ್ಪತ್ರೆಯ ಆವರಣಕ್ಕೆ ಗ್ರಾವಲ್‌ ಹಾಕಿಸುವಂತೆ ವರ್ಷದ ಹಿಂದೆ ಗ್ರಾಮ ಪಂಚಾಯಿತಿ ಅಧಿಕಾರಿಗಳಿಗೆ ಮನವಿ ಸಲ್ಲಿಸಿದರೂ ಕ್ರಮ ಕೈಗೊಂಡಿಲ್ಲ. ಹಿಂಭಾಗದಲ್ಲಿದ್ದ ಕಲ್ಲು ಚಪ್ಪಡಿಗಳ ಕಾಂಪೌಂಡ್‌ ಕಿತ್ತು, ಹೊಸದಾಗಿ ಕಾಂಪೌಂಡ್‌ ನಿರ್ಮಿಸುವುದಾಗಿ ಹೇಳಿ, ಮೂರು ವರ್ಷಗಳ ಹಿಂದೆ ಕಲ್ಲು ಚಪ್ಪಡಿ ಕಿತ್ತುಹಾಕಲಾಗಿತ್ತು. ಆದರೆ, ಈವರೆಗೂ ಕಾಂಪೌಂಡ್‌ ನಿರ್ಮಾಣವಾಗಿಲ್ಲ.

‘ಇಲಾಖೆ ಸಿಬ್ಬಂದಿ ಹಾಗೂ ಗ್ರಾಮ ಪಂಚಾಯಿತಿಯವರು ನಿರ್ಲಕ್ಷ್ಯ ತೋರದೆ, ಮೂಕ ಪ್ರಾಣಿಗಳ ಜೀವ ಉಳಿಸಲು ಮತ್ತು ಅರ್ಹ ಫಲಾನುಭವಿಗಳಿಗೆ ಇಲಾಖೆಯ ಸೌಲಭ್ಯ ನೀಡಲು ಸೂಕ್ತ ಕ್ರಮ ಕೈಗೊಂಡು, ವೈದ್ಯರನ್ನು ತಕ್ಷಣ ನೇಮಕ ಮಾಡಬೇಕು’ ಎಂದು ಗ್ರಾಮ ಪಂಚಾಯಿತಿ ಮಾಜಿ ಸದಸ್ಯ ಬಿ.ಎಸ್‌. ಮಾರುತಿ, ರುದ್ರೇಶ್‌, ರಾಜಪ್ಪ, ಸುರೇಶ್‌ ಒತ್ತಾಯಿಸಿದ್ದಾರೆ.

ಚಿಕ್ಕಜಾಜೂರು ಸಮೀಪದ ಬಿ. ದುರ್ಗ ಗ್ರಾಮದ ಪಶುಚಿಕಿತ್ಸಾ ಕೇಂದ್ರದ ಸಿಬ್ಬಂದಿ ವಸತಿಗೃಹ ಶಿಥಿಲಗೊಂಡಿರುವುದು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.