ಹೊಳಲ್ಕೆರೆ: ಭದ್ರಾ ಮೇಲ್ದಂಡೆ ಯೋಜನೆಯಲ್ಲಿ ತಾಲ್ಲೂಕಿನ ಫೀಡರ್ ಕಾಲುವೆ ಅಡಿಯಲ್ಲಿ ಬರುವ 28 ಕೆರೆಗಳನ್ನು ತುಂಬಿಸಲು ಬಜೆಟ್ನಲ್ಲಿ ಅನುದಾನ ಮೀಸಲಿಟ್ಟಿರುವುದರಿಂದ ಇಲ್ಲಿನ ರೈತರಲ್ಲಿ ಹರ್ಷ ಮೂಡಿದೆ.
ತಾಲ್ಲೂಕಿನ 28 ಕೆರೆಗಳನ್ನು ತುಂಬಿಸುವ ಯೋಜನೆಯ ಶೇ 90ರಷ್ಟು ಪೈಪ್ಲೈನ್ ಕಾಮಗಾರಿ ಮುಗಿದಿದೆ. ಹೆಚ್ಚುವರಿಯಾಗಿ ತಾಳ್ಯ ಹೋಬಳಿಯ 7 ಕೆರೆಗಳನ್ನು ಸೇರ್ಪಡೆ ಮಾಡಿದ್ದು, ಟಿ. ಎಮ್ಮಿಗನೂರು ಗುಡ್ಡದಲ್ಲಿ ಹೊಸಕೆರೆ ನಿರ್ಮಿಸಲಾಗು
ತ್ತಿದೆ. ಈ ಕಾಮಗಾರಿಯೂ ಶೇ 80ರಷ್ಟು ಮುಗಿದಿದೆ. ಪಟ್ಟಣದ ಚಿಕ್ಕಕೆರೆಯಲ್ಲಿ ಜಾಕ್ವೆಲ್ ನಿರ್ಮಿಸಲಾಗಿದೆ. ಇಲ್ಲಿಂದ ತಾಳ್ಯ ಹೋಬಳಿಯ ಕೆರೆಗಳಿಗೆ ಏತ ನೀರಾವರಿ ಮೂಲಕ ನೀರು ಹರಿಸಲು ಯೋಜನೆ ರೂಪಿಸಲಾಗಿದೆ.
‘ತಾಲ್ಲೂಕಿನಲ್ಲಿ ಒಟ್ಟು 104 ಕಿ.ಮೀ. ಪೈಪ್ಲೈನ್ ಕಾಮಗಾರಿ ಇದ್ದು, 7 ಕಿ.ಮೀ. ಪೈಪ್ಲೈನ್ ಅಳವಡಿಸುವ ಕಾರ್ಯ ಮಾತ್ರ ಉಳಿದಿದೆ. ಬೂದಿಪುರ ಸಮೀಪ ನಿರ್ಮಾಣವಾಗುತ್ತಿರುವ 7 ಕಿ.ಮೀ. ಮುಖ್ಯ ಕಾಲುವೆ ಕಾಮಗಾರಿಯಲ್ಲಿ 2.5 ಕಿ.ಮೀ. ಬಾಕಿ ಇದೆ. ಚಿಕ್ಕ ಯಗಟಿ ಮುಖ್ಯ ಕಾಲುವೆಯಿಂದ ಗಂಗಸಮುದ್ರ ಕೆರೆಗೆ ಸಂಪರ್ಕ ಕಲ್ಪಿಸುವ 4.53 ಕಿ.ಮೀ. ಫೀಡರ್ ಚಾನಲ್ ಕಾಮಗಾರಿಯಲ್ಲಿ ಅರ್ಧ ಕಿ.ಮೀ. ಕಾಮಗಾರಿ ಮಾತ್ರ ಉಳಿದಿದೆ. ಭೂ ಸ್ವಾದೀನ ಪ್ರಕ್ರಿಯೆ ಮುಗಿದಿದ್ದು, ಪರಿಹಾರ ವಿತರಣೆ ಕಾರ್ಯ ಪ್ರಗತಿಯಲ್ಲಿದೆ’ ಎಂದು ಭದ್ರಾ ಮೇಲ್ದಂಡೆ ಯೋಜನೆಯ ಎಇಇ ನಾಗರಾಜ್ ತಿಳಿಸಿದ್ದಾರೆ.
***
ತಾಲ್ಲೂಕಿನ ಕೆರೆಗಳಿಗೆ ನೀರು ತುಂಬಿಸಲು ಬಜೆಟ್ನಲ್ಲಿ ಹಣ ಮೀಸಲಿಟ್ಟಿರುವುದರಿಂದ ತ್ವರಿತ ಕಾಮಗಾರಿ ನಡೆಸಲು ಅನುಕೂಲ ಆಗಲಿದೆ. ದೊಡ್ಡ ಮೊತ್ತದ ಹಣ ಘೋಷಿಸಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಆಭಾರಿಯಾಗಿದ್ದೇನೆ.
ಎಂ. ಚಂದ್ರಪ್ಪ, ಶಾಸಕ
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.