ADVERTISEMENT

ವೇದಾವತಿ ನದಿಯಲ್ಲಿ ತಿಂಗಳು ಹರಿದ ನೀರು: ದಾಖಲೆ ನಿರ್ಮಾಣ

ಮತ್ತೊಂದು ದಾಖಲೆ ನಿರ್ಮಾಣ; ತಡೆಗೋಡೆ ನಿರ್ಮಿಸಲು ಆಗ್ರಹ

​ಪ್ರಜಾವಾಣಿ ವಾರ್ತೆ
Published 4 ಅಕ್ಟೋಬರ್ 2022, 4:55 IST
Last Updated 4 ಅಕ್ಟೋಬರ್ 2022, 4:55 IST
ಹಿರಿಯೂರು ತಾಲ್ಲೂಕಿನ ವಾಣಿವಿಲಾಸ ಜಲಾಶಯದ ಕೋಡಿಯಲ್ಲಿ ಒಂದು ತಿಂಗಳ ನಂತರವೂ ಹರಿಯುತ್ತಿರುವ ನೀರು.
ಹಿರಿಯೂರು ತಾಲ್ಲೂಕಿನ ವಾಣಿವಿಲಾಸ ಜಲಾಶಯದ ಕೋಡಿಯಲ್ಲಿ ಒಂದು ತಿಂಗಳ ನಂತರವೂ ಹರಿಯುತ್ತಿರುವ ನೀರು.   

ಹಿರಿಯೂರು: ತಾಲ್ಲೂಕಿನಲ್ಲಿ ಹಾದು ಹೋಗಿರುವ ವೇದಾವತಿ ನದಿಯಲ್ಲಿ ಬರೋಬ್ಬರಿ ಒಂದು ತಿಂಗಳು ನೀರು ಹರಿಯುವ ಮೂಲಕ ಹೊಸದೊಂದು ದಾಖಲೆ ನಿರ್ಮಾಣವಾಗಿದೆ.

ವೇದಾವತಿ ನದಿಗೆ ತಾಲ್ಲೂಕಿನ ಮಾರಿಕಣಿವೆ ಎಂಬಲ್ಲಿ ನಿರ್ಮಿಸಿರುವ ವಾಣಿವಿಲಾಸ ಜಲಾಶಯ 1933ರಲ್ಲಿ ಒಮ್ಮೆ ಮಾತ್ರ ಭರ್ತಿಯಾಗಿತ್ತು. 2022ರ ಸೆ. 2ರಂದು ಮತ್ತೊಮ್ಮೆ ಕೋಡಿ ಹರಿಯುವ ಮೂಲಕ ಎರಡನೇ ಬಾರಿ ಜಲಾಶಯ ಭರ್ತಿಯಾದ ದಾಖಲೆ ನಿರ್ಮಾಣವಾಗಿತ್ತು.

ಸಮೃದ್ಧ ಮಳೆಗಾಲದಲ್ಲಿ ಹೆಚ್ಚೆಂದರೆ ಐದಾರು ದಿನ ಹರಿಯುತ್ತಿದ್ದ ವೇದಾವತಿ ನದಿ ಈ ಬಾರಿ ಸೆ. 2ರಿಂದ ಅ. 2ರವರೆಗೆ ಸುಮಾರು 15.50 ಟಿಎಂಸಿ ಅಡಿಯಷ್ಟು ನೀರು ಹರಿಯುವ ಮೂಲಕ ಹೊಸ ದಾಖಲೆ ನಿರ್ಮಾಣವಾಗಿದೆ. ಇಂದಿಗೂ ಎರಡು ಅಡಿಯಷ್ಟು ನೀರು ನದಿಯಲ್ಲಿ ಹರಿಯುತ್ತಿದೆ.

ADVERTISEMENT

ಮಳೆ ಮುಂದುವರಿದಲ್ಲಿ ಅಪಾಯ: 1999–2000ದಲ್ಲಿ ಸುರಿದ ಮಳೆಗೆ ವೇದಾವತಿ ನದಿ ತುಂಬಿ ಹರಿದ ಪ್ರಯುಕ್ತ ನದಿ ತೀರದಲ್ಲಿನ 20ಕ್ಕೂ ಹೆಚ್ಚು ಮನೆಗಳು ನೀರಿನಲ್ಲಿ ಮುಳುಗಡೆ ಆಗಿದ್ದವು. ಪ್ರಸಕ್ತ ವರ್ಷ ಸೆ. 7ರಂದು ನದಿಯಲ್ಲಿ 11,000 ಕ್ಯುಸೆಕ್‌, 8ರಂದು 14,891 ಕ್ಯುಸೆಕ್‌, 9ರಂದು 14,892 ಹಾಗೂ ಸೆ. 10ರಂದು 13,767 ಕ್ಯುಸೆಕ್ ನೀರು ಹರಿದು ಪ್ರವಾಹ ಉಂಟಾಗಿದ್ದರಿಂದ ನದಿ ದಡದಲ್ಲಿರುವ 132 ಮನೆಗಳಿಗೆ ನೀರು ನುಗ್ಗಿದ್ದರೆ, 30 ಮನೆಗಳು ಸಂಪೂರ್ಣ ಜಲಾವೃತವಾಗಿದ್ದವು. ನಿರಾಶ್ರಿತರಿಗೆ ನಗರದಲ್ಲಿ ಎರಡು ಕಡೆ ಹಾಗೂ ಗ್ರಾಮೀಣ ಭಾಗದಲ್ಲಿ ಮೂರು ಕಡೆ ಕಾಳಜಿ ಕೇಂದ್ರಗಳನ್ನು ತೆರೆಯಲಾಗಿತ್ತು. ಹೀಗಾಗಿ ಹಿಂಗಾರು ಮಳೆ ಬಿರುಸು ಪಡೆದಲ್ಲಿ ಅಪಾಯ ತಪ್ಪಿದ್ದಲ್ಲ.

ತಡೆಗೋಡೆ ಅನಿವಾರ್ಯ, ಅಗತ್ಯ: ‘ಈ ಭಾಗದಲ್ಲಿ ಮುಂಗಾರಿಗಿಂತ ಹಿಂಗಾರು ಮಳೆ ಉತ್ತಮವಾಗಿ ಆಗುತ್ತದೆ. ವಾಣಿವಿಲಾಸ ಜಲಾಶಯ ಭರ್ತಿ ಆಗಿರುವ ಕಾರಣ ಮಳೆಯಿಂದ ಬೀಳುವ ನೀರು ವೇದಾವತಿ ನದಿಯಲ್ಲಿ ಹರಿದು ಬಂದು ಮತ್ತೆ ಪ್ರವಾಹ ಪರಿಸ್ಥಿತಿ ನಿರ್ಮಾಣವಾಗುವುದು ಖಚಿತ. ಆದ್ದರಿಂದ ಶಿವಮೊಗ್ಗ ನಗರದಲ್ಲಿ ತುಂಗಾ ನದಿಗೆ ತಡೆಗೋಡೆ ನಿರ್ಮಿಸಿರುವಂತೆ ಹಿರಿಯೂರಿನಲ್ಲಿ ಲಕ್ಕವ್ವನಹಳ್ಳಿಯಿಂದ ಬೈಪಾಸ್ ರಸ್ತೆವರೆಗೆ ತಡೆಗೋಡೆ ನಿರ್ಮಾಣವಾಗಬೇಕು. ಇದರಿಂದ ನದಿ ತೀರದ ಒತ್ತುವರಿ, ಪ್ರವಾಹದಿಂದ ಆಗುವ ಹಾನಿ ಎರಡನ್ನೂ ತಪ್ಪಿಸಬಹುದು’ ಎನ್ನುವುದು ಸಾರ್ವಜನಿಕರ ಅನಿಸಿಕೆ.

Lok Sabha Elections Results 2024 |ನರೇಂದ್ರ ಮೋದಿ ಅವರ 'ವಿಕಸಿತ ಭಾರತ' ಅಥವಾ ರಾಹುಲ್ ಗಾಂಧಿ ಅವರ ಇಂಡಿಯಾ ಐಕ್ಯ ಭಾರತ? ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವದ 18ನೇ ಲೋಕಸಭೆಗೆ ನಡೆದ ಚುನಾವಣೆ ಫಲಿತಾಂಶದ ಕ್ಷಣ ಕ್ಷಣದ ಮಾಹಿತಿ, ವಿಶ್ವಾಸಾರ್ಹ ವಿಶ್ಲೇಷಣೆ, ಅಂಕಿ ಅಂಶಗಳಿಗಾಗಿ ಪ್ರಜಾವಾಣಿ ನೋಡಿ. ಇದರ ಜೊತಗೆ, ಆಂಧ್ರಪ್ರದೇಶ ಮತ್ತು ಒಡಿಶಾ ವಿಧಾನಸಭೆ ಚುನಾವಣೆಯ ಫಲಿತಾಂಶವೂ ಇಲ್ಲೇ ಲಭ್ಯ. ಪ್ರಜಾವಾಣಿಯನ್ನು ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಫಾಲೋ ಮಾಡಲು ಮರೆಯದಿರಿ.