ಯರಬಳ್ಳಿ (ಹಿರಿಯೂರು): ತಾಲ್ಲೂಕಿನ ಯರಬಳ್ಳಿಯ ಪೂಜಾರ್ ಮಾರಣ್ಣ ಎಂಬುವವರ ಮನೆಯಲ್ಲಿ ಹುತ್ತವೊಂದು ಬೆಳೆಯುತ್ತಿದೆ. ಎರಡು ದಿನಗಳಿಂದ ಈ ಹುತ್ತದಿಂದ ನೀರು ಚಿಮ್ಮುತ್ತಿದ್ದು, ಜನರಲ್ಲಿ ಅಚ್ಚರಿಮೂಡಿಸಿದೆ.
ಗ್ರಾಮದ ಹಂಪಮ್ಮ (ಹುತ್ತದ ಮಾರಮ್ಮ) ದೇವಸ್ಥಾನದ ಪೂಜಾರಿಯಾಗಿರುವ ಮಾರಣ್ಣನ ಮನೆಯಲ್ಲಿನ ಹುತ್ತ ಬೃಹತ್ ಗಾತ್ರಕ್ಕೆ ಬೆಳೆದಿದೆ. ಮಾರಣ್ಣ ಮತ್ತು ಅವರ ಪತ್ನಿ ಪುರದಮ್ಮ ನಿತ್ಯ ಇದಕ್ಕೆ ಪೂಜೆ ಸಲ್ಲಿಸುತ್ತಾರೆ.
ಮನೆಯ ಒಳಗಡೆ ತಳಭಾಗದಿಂದ ನೀರು ಉಕ್ಕುತ್ತಿದೆ. ನೀರು ತುಂಬಿ ಹೊರಗೆ ಹಾಕಿದರೂಖಾಲಿಯಾಗುತ್ತಿಲ್ಲ. ವಿಷಯ ತಿಳಿದ ಜನರು ಗುಂಪು ಗುಂಪಾಗಿ ಬಂದು ನೀರು ಉಕ್ಕುವ ದೃಶ್ಯವನ್ನು ಕಣ್ತುಂಬಿಕೊಳ್ಳುತ್ತಿದ್ದಾರೆ.
ತಾಲ್ಲೂಕಿನಲ್ಲಿ ಮೂರ್ನಾಲ್ಕು ದಿನಗಳಿಂದ ನಿರಂತರವಾಗಿ ಮಳೆ ಸುರಿಯುತ್ತಿದೆ. ಕಳೆದ ವಾರವೂ ಉತ್ತಮ ಮಳೆಯಾಗಿದ್ದು, ಕೆರೆ, ಹಳ್ಳ, ಚೆಕ್ಡ್ಯಾಂ ತುಂಬಿವೆ. ಅಂತರ್ಜಲ ವೃದ್ಧಿಯಾಗಿರುವುದರಿಂದ ಈ ರೀತಿ ನೀರು ಬರುತ್ತಿರಬಹುದು ಎಂಬ ಅನುಮಾನ ಗ್ರಾಮಸ್ಥರದ್ದು. ತಾಲ್ಲೂಕಿನ ಯಲ್ಲದಕೆರೆ ಗ್ರಾಮದಲ್ಲಿ ಕೊಳವೆಬಾವಿಯಲ್ಲಿ ಈಚೆಗೆ ನೀರು ಚಿಮ್ಮಿತ್ತು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.